ಎಲ್ಲರ ಕಾಲೆಳೆಯುತ್ತದೆ ಕಾಲ: ಅಂದು ಧರಂಸಿಂಗ್ ಗೆ ಆಗಿದ್ದು, ಇಂದು ಎಚ್ಡಿಕೆಗೆ
Recommended Video
ಜೆಡಿಎಸ್ ವರಿಷ್ಠ ದೇವೇಗೌಡರ ಕೃಪಾಕಟಾಕ್ಷದಿಂದ ಮುಖ್ಯಮಂತ್ರಿಯಾಗಿದ್ದ ಧರಂಸಿಂಗ್ ತಮ್ಮ ಅಧಿಕಾರದ ಅವಧಿಯಲ್ಲಿ ಎಂದೂ ನೆಮ್ಮದಿಯಿಂದ ರಾಜ್ಯಭಾರ ಮಾಡಲು ಸಾಧ್ಯವಾಗಿರಲಿಲ್ಲ ಎನ್ನುವುದು ರಾಜ್ಯ ರಾಜಕಾರಣದ ಬಗ್ಗೆ ಅರಿತಿರುವರಿಗೆಲ್ಲಾ ಗೊತ್ತಿರುವಂತಹ ವಿಚಾರ. ಯಾಕೆಂದರೆ, ಅಷ್ಟರ ಮಟ್ಟಿಗೆ ಗೌಡ್ರು ಮತ್ತು ಅವರ ಕುಟುಂಬದ ಹಸ್ತಕ್ಷೇಪ ಆಡಳಿತದಲ್ಲಿತ್ತು.
ಧರಂಸಿಂಗ್ ಅವರನ್ನು ಅಂದು ಅಧಿಕಾರದಿಂದ ಕೆಳಗಿಳಿಸಿದ್ದಕ್ಕೆ ದಶಕಗಳ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಪಶ್ಚಾತ್ತಾಪದ ಮಾತನ್ನಾಡಿದ್ದರು. ಜೊತೆಗೆ, ಅಂದಿನ ರಾಜಕೀಯ ಪರಿಸ್ಥಿತಿ ಹಾಗಿತ್ತು ಎಂದು ಸಮಜಾಯಿಷಿ ನೀಡಿದ್ದರು. ಹದಿಮೂರು ವರ್ಷಗಳ ಕೆಳಗೆ, ಧರಂಸಿಂಗ್ ಅನುಭವಿಸಿದ್ದ ರಾಜಕೀಯ 'ಯಾತನೆಯನ್ನು' ಇಂದು ಕುಮಾರಸ್ವಾಮಿ ಅನುಭವಿಸುತ್ತಿದ್ದಾರೆ. ಎಲ್ಲರ ಕಾಲೆಳೆಯುತ್ತದೆ ಕಾಲ...
ವಿಶ್ವಾಸದ್ರೋಹ ಬಗೆಯುವುದು ನಿಮಗೆ ರಕ್ತಗತವಾಗಿ ಬಂದಿದೆ. ಹಿಂದೆ 2006ರಲ್ಲಿ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಅವರಿಗೆ ವಿಶ್ವಾಸದ್ರೋಹ ಬಗೆದು ನಮ್ಮೊಂದಿಗೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದಿರಿ. ಅದೇ ನೋವಿನಲ್ಲಿ ಕೊರಗಿ ಧರ್ಮಸಿಂಗ್ ಅವರು ಸಾವನ್ನಪ್ಪಿದ್ದರು ಎಂದು ತುಂಬಿದ ಸಭೆಯಲ್ಲಿ ಯಡಿಯೂರಪ್ಪ ಆಪಾದಿಸಿದ್ದರು.
ಅಂದು ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಿದ್ದರೆ ಇಂದು ಮುಖಭಂಗ ಆಗುತ್ತಿತ್ತೇ?
ಧರಂಸಿಂಗ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆಡಳಿತ ನಡೆಸುವುದಕ್ಕಿಂತ ಹೆಚ್ಚಾಗಿ, ಮೈತ್ರಿ ಪಕ್ಷವಾಗಿದ್ದ ಜೆಡಿಎಸ್ಸಿನ ಷರತ್ತು, ಬೇಡಿಕೆ, ಕೋರಿಕೆಗಳನ್ನು ಈಡೇರಿಸುವ ವಿಷಯದಲ್ಲಿ ಅವರು ಮುಕ್ತವಾಗಿದ್ದೇ ಹೆಚ್ಚು. ಅಂದು, ಡಿಸಿಎಂ ಆಗಿದ್ದ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ತನ್ನತ್ತ ಸೆಳೆಯಲು ಯಾವಾಗ ಪ್ರಯತ್ನಿಸಿತೋ, ಸಮ್ಮಿಶ್ರ ಸರಕಾರಕ್ಕೆ ಖೆಡ್ಡಾ ತೋಡುವ ಕೆಲಸಕ್ಕೆ ಖುದ್ದು ಕುಮಾರಸ್ವಾಮಿಯೇ ನೇತೃತ್ವ ವಹಿಸಿಕೊಂಡರು.
ಧರಂಸಿಂಗ್ ತನ್ನನ್ನು ಸಿಎಂ ಮಾಡಿದ ಗೌಡ್ರ ಮೇಲೆ ಕೃತಜ್ಞತೆ ಇಟ್ಟುಕೊಂಡಿದ್ದರು
ಧರಂಸಿಂಗ್ ಅವರು ತನ್ನನ್ನು ಸಿಎಂ ಮಾಡಿದ ದೇವೇಗೌಡರ ಮೇಲೆ ಕೃತಜ್ಞತೆ ಇಟ್ಟುಕೊಂಡಿದ್ದರೆ, ಈಗಿನ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು, ಕಾಂಗ್ರೆಸ್ ಅನಿವಾರ್ಯತೆಯಿಂದ ನಮಗೆ ಬೆಂಬಲ ನೀಡಿದೆ ಎನ್ನುವ ಮನಸ್ಥಿತಿಯನ್ನು ಹೊಂದಿರುವಂತದ್ದು, ಎನ್ನುವುದು ಅವರ ಮತ್ತು ದೇವೇಗೌಡರ ಹೇಳಿಕೆಯಿಂದ ಅತ್ಯಂತ ಸ್ಪಷ್ಟವಾಗುತ್ತದೆ.
ನಾನು ಪಡಬಾರದ ಪಡಿಪಾಟಲು ಪಡುತ್ತಿದ್ದೇನೆ - ಕುಮಾರಸ್ವಾಮಿ
ಅಂದು ಧರಂಸಿಂಗ್ ತಮ್ಮ ಅಧಿಕಾರದ ಅವಧಿಯಲ್ಲಿ ಸ್ವಪಕ್ಷೀಯರು ಮತ್ತು ಜೆಡಿಎಸ್ ನವರು ತಮ್ಮ ವಿರುದ್ದ ಮಾಡುತ್ತಿದ್ದ ಮಸಲತ್ತನ್ನು ಎದುರಿಸಬೇಕಾಗಿ ಬಂತು. ಈಗ ಕುಮಾರಸ್ವಾಮಿಯವರಿಗೆ ಕೂಡಾ ಅದೇ ಸಮಸ್ಯೆ. ಪರೋಕ್ಷವಾಗಿ ಕಾಂಗ್ರೆಸ್ ನವರಿಂದ, ಬಹಿರಂಗವಾಗಿ ಬಿಜೆಪಿಯವರಿಂದ ದಿನಾ ಒಂದಲ್ಲಾ ಒಂದು ವಿರೋಧ ಎದುರಿಸುತ್ತಲೇ ಇದ್ದಾರೆ. ಅದೇ ಕಾರಣಕ್ಕಾಗಿ, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ನಡೆಸುವುದು ಅತ್ಯಂತ ಕಠಿಣ ಕೆಲಸ, ನಾನು ಮುಖ್ಯಮಂತ್ರಿಯಾದೆ ಎಂಬ ಕಾರಣಕ್ಕಾಗಿ ನೆಮ್ಮದಿಯಾಗಿದ್ದೇನೆ ಎಂದು ಬಾವಿಸಬೇಡಿ. ಈ ಸಮ್ಮಿಶ್ರ ಸರ್ಕಾರವನ್ನು ನಡೆಸುವ ವಿಷಯದಲ್ಲಿ ನಾನು ಪಡಬಾರದ ಪಡಿಪಾಟಲು ಪಡುತ್ತಿದ್ದೇನೆ ಎಂದು ಪಕ್ಷದ ಕಚೇರಿಯಲ್ಲಿ ಕಣ್ಣೀರು ಹಾಕಿದ್ದು ಕಣ್ಮುಂದಿದೆ.
ಸಮ್ಮಿಶ್ರ ಸರಕಾರಕ್ಕೆ ಖೆಡ್ಡಾ ತೋಡಿದ ಮಾಜಿ ಜೆಡಿಎಸ್ ಅಧ್ಯಕ್ಷ ಎಚ್ ವಿಶ್ವನಾಥ್?
ಯಡಿಯೂರಪ್ಪನವರ ಜೊತೆ ಕೈಜೋಡಿಸಿ, ಧರಂಸಿಂಗ್ ಸರಕಾರಕ್ಕೆ ಕೊನೆ ಮೊಳೆ
ಇಂದು ಕುಮಾರಸ್ವಾಮಿ ಸರಕಾರವನ್ನು ಬೀಳಿಸಲು ಏನು ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎನ್ನುವ ಆರೋಪವಿದೆಯೋ, ಧರಂಸಿಂಗ್ ಸಿಎಂ ಆಗಿದ್ದ ವೇಳೆ, ಕುಮಾರಸ್ವಾಮಿ, ಯಡಿಯೂರಪ್ಪನವರ ಜೊತೆ ಕೈಜೋಡಿಸಿ, ಧರಂಸಿಂಗ್ ಸರಕಾರಕ್ಕೆ ಕೊನೆ ಮೊಳೆ ಹೊಡೆದಿದ್ದರು. ಯಾರೂ ನಿರೀಕ್ಷಸದ ರೀತಿಯಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಸಹಯೋಗದೊಂದಿಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಈಗ ನಡೆಯುತ್ತಿರುವುದು ಇದೇ.. ವ್ಯತ್ಯಾಸ ಏನಂದರೆ, ಧರಂಸಿಂಗ್ ಜಾಗದಲ್ಲಿ ಕುಮಾರಸ್ವಾಮಿ ಇದ್ದಾರೆ ಅಷ್ಟೇ..
ಕುಮಾರಸ್ವಾಮಿ ಈಗ ಎದುರಿಸುತ್ತಿರುವ ರಾಜಕೀಯ ಅನಿಸ್ಥಿತೆಗೆ ಸಾಕಷ್ಟು ಸಾಮ್ಯಗಳಿವೆ
ಧರಂಸಿಂಗ್ ಸರಕಾರ ಪತನಕ್ಕೆ ಮತ್ತು ಕುಮಾರಸ್ವಾಮಿ ಈಗ ಎದುರಿಸುತ್ತಿರುವ ರಾಜಕೀಯ ಅನಿಸ್ಥಿತೆಗೆ ಸಾಕಷ್ಟು ಸ್ವಾಮ್ಯಗಳಿವೆ. ಜೆಡಿಎಸ್ - ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಮಗನ ರಾಜಕೀಯ ನಡೆಗೆ ಬೇಸತ್ತು ಅಂದು ದೇವೇಗೌಡ್ರು ರಾಜೀನಾಮೆ ನೀಡಿದ್ದರು. ಇಂದು ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳ ಶಾಸಕರು ರಾಜೀನಾಮೆ ನೀಡುತ್ತಿದ್ದಾರೆ. ಮೂವರು (ಇದುವರೆಗೆ) ಜೆಡಿಎಸ್ ಪಕ್ಷದ ಶಾಸಕರೂ ಇದರಲ್ಲಿ ಇರುವುದು, ಕುಮಾರಸ್ವಾಮಿಗೆ ನುಂಗಲಾರದ ತುತ್ತಾಗಿರುವುದು.
ಎಲ್ಲರ ಕಾಲೆಳೆಯುತ್ತದೆ ಕಾಲ: ಅಂದು ಧರಂಸಿಂಗ್ ಗೆ ಆಗಿದ್ದು, ಇಂದು ಎಚ್ಡಿಕೆಗೆ
ಇಂದು ಬಿಜೆಪಿಗೆ ಅಧಿಕಾರದ ದಾಹ ಎಂದಾದರೆ, ಅಂದು ಆಗಿದ್ದು ಇನ್ಯಾವ ದಾಹ ಎನ್ನುವ ಪ್ರಶ್ನೆ ಉದ್ಭವಿಸುವುದು ಸಹಜ. ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳನ್ನು ನೋಡಿದರೆ, ಅಂದು ಧರಂಸಿಂಗ್ ಏನು ಧರ್ಮಸಂಕಟವನ್ನು ಅನುಭವಿಸಿದ್ದರೋ, ಅದನ್ನೆಲ್ಲಾ ಈಗ ಕುಮಾರಸ್ವಾಮಿ ಅನುಭವಿಸುತ್ತಿದ್ದಾರೆ. ಈಗನ ಸಮ್ಮಿಶ್ರ ಸರಕಾರ ಉಳಿಯುತ್ತದೋ, ಉರುಳುತ್ತದೋ, ಅದು ಆಮೇಲಿನ ವಿಚಾರ. ಅದಕ್ಕೇ ಕಾಲಚಕ್ರ ಎನ್ನುವುದು...