Get Updates
Get notified of breaking news, exclusive insights, and must-see stories!

ಕ್ಲೈಮ್ಯಾಕ್ಸ್ ಹಂತಕ್ಕೆ ಕರ್ನಾಟಕದ ಶಾಸಕರ ರಾಜೀನಾಮೆ ಪ್ರಹಸನ: ಸಾಧ್ಯಾಸಾಧ್ಯತೆಗಳು

Recommended Video

      Karnataka Political Crisis : ಕೊನೆ ಹಂತಕ್ಕೆ ಕರ್ನಾಟಕ ರಾಜೀನಾಮೆ ಪ್ರಹಸನ | ಸಾಧ್ಯಾಸಾಧ್ಯತೆಗಳು

      ಬೆಂಗಳೂರು, ಜುಲೈ 17 : ರಾಜೀನಾಮೆ ಪತ್ರವನ್ನು ಕರ್ನಾಟಕ ವಿಧಾನಸಭಾಧ್ಯಕ್ಷರು ಅಂಗೀಕರಿಸಲು ವಿಳಂಬಿಸಿದ್ದನ್ನು ಪ್ರಶ್ನಿಸಿ, ರಾಜೀನಾಮೆ ಸಲ್ಲಿಸಿದ್ದ ಶಾಸಕರು ಸಲ್ಲಿಸಿದ್ದ ಅರ್ಜಿಯಲ್ಲಿ ನೀಡಿದ ತೀರ್ಪು ಹಲವಾರು ಸಾಧ್ಯತೆಗಳಿಗೆ ದಾರಿ ಮಾಡಿಕೊಟ್ಟಿದೆ.

      ಚೆಂಡು ಇದೀಗ ವಿಧಾನಸಭಾಧ್ಯಕ್ಷರಾದ ರಮೇಶ್ ಕುಮಾರ್ ಅವರ ಅಂಗಳಕ್ಕೆ ಬಂದು ಬಿದ್ದಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳಲು ಅವರು ಅರ್ಹರು ಎಂದು ಸರ್ವೋಚ್ಚ ನ್ಯಾಯಾಲಯ ರಮೇಶ್ ಕುಮಾರ್ ಅವರಿಗೆ ಮುಕ್ತಹಸ್ತವನ್ನು ನೀಡಿದೆ. ಜೊತೆಗೆ ಅಧಿವೇಶನಕ್ಕೆ ಹಾಜರಾಗಬೇಕೆಂದು ನೀಡಲಾಗುವ ವ್ಹಿಪ್ ರಾಜೀನಾಮೆ ಸಲ್ಲಿಸಿದ ಶಾಸಕರಿಗೆ ಅನ್ವಯವಾಗುವುದಿಲ್ಲ ಎಂದೂ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ನೇತೃತ್ವದ ಪೀಠ ಹೇಳಿದೆ.

      ಈ ಆದೇಶ ಬಂದ ನಂತರ ಕರ್ನಾಟಕದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಗರಿಗೆದರಿವೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ತಮಗೆ ತಿಳಿದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಮಧ್ಯಂತರ ಆದೇಶ ತಮ್ಮ ಪರವಾಗಿಯೇ ಇದೆ ಎಂದು ಪ್ರತಿ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಅವರು ಕೂಡ, ನಾನು ಸಂವಿಧಾನಕ್ಕೆ ಚ್ಯುತಿ ಬರದಂತೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

      ಹಾಗಿದ್ದರೆ, ರಮೇಶ್ ಕುಮಾರ್ ಅವರು ಯಾವ ನಿರ್ಧಾರ ತಳೆಯಬಹುದು? ಶಾಸಕರ ರಾಜೀನಾಮೆ ಅಂಗೀಕರಿಸುತ್ತಾರಾ? ಪಕ್ಷವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ ಅಥವಾ ವ್ಹಿಪ್ ಉಲ್ಲಂಘಿಸಿದ್ದಾರೆ ಎಂದು ಅನರ್ಹಗೊಳಿಸುತ್ತಾರಾ? ಅಥವಾ ರಾಜೀನಾಮೆಯನ್ನು ತಿರಸ್ಕರಿಸುತ್ತಾರಾ? ಈ ನಿರ್ಧಾರಗಳು ಅಲುಗಾಡುತ್ತಿರುವ ಸರಕಾರದ ಭವಿಷ್ಯಕ್ಕೆ ಪೂರಕವಾಗಲಿದೆಯಾ, ಮಾರಕವಾಗಲಿದೆಯಾ?

      ಸಿಕ್ಸರ್ ಹೊಡೆಯಲು ಯಡಿಯೂರಪ್ಪ ಸಿದ್ಧ

      ಸಿಕ್ಸರ್ ಹೊಡೆಯಲು ಯಡಿಯೂರಪ್ಪ ಸಿದ್ಧ

      ಬಿಳಿ ಸಫಾರಿ ಧರಿಸಿ, ಹಣೆಗೆ ಬೊಟ್ಟು ಇಟ್ಟು, ಕ್ರಿಕೆಟ್ ಆಡಿ ಮತ್ತಷ್ಟು ಹುಮ್ಮಸ್ಸು ತುಂಬಿಕೊಂಡಿರುವ ಯಡಿಯೂರಪ್ಪನವರು, ರಮೇಶ್ ಕುಮಾರ್ ಅವರು ಏನೇ ನಿರ್ಧಾರ ತೆಗೆದುಕೊಳ್ಳಲಿ, ಮೈತ್ರಿ ಸರಕಾರದ ಬಳಿ ಬಹುಮತ ಸಾಬೀತುಪಡಿಸಲು ಸಂಖ್ಯೆಯೇ ಇಲ್ಲ, ಕುಮಾರಸ್ವಾಮಿ ನೇತೃತ್ವದ ಸರಕಾರವನ್ನು ಬೀಳಿಸಿಯೇ ತೀರುತ್ತೇವೆ, ಹೊಸ ಸರಕಾರ ರಚಿಸುವವರೆಗೆ ಸುಮ್ಮನಿರುವುದಿಲ್ಲ ಎಂದು ಕೈಯಲ್ಲಿ ಬ್ಯಾಟ್ ಹಿಡಿದುಕೊಂಡು ಮೈತ್ರಿ ಸರಕಾರ ಎಸೆಯುತ್ತಿರುವ ಚೆಂಡನ್ನು ಸಿಕ್ಸರ್ ಬಾರಿಸಲು ರೆಡಿಯಾಗಿ ನಿಂತಿದ್ದಾರೆ. ಈ ಚಾನ್ಸ್ ಸಿಗದಿದ್ದರೆ ಈ ಜೀವನದಲ್ಲಿ ಮುಖ್ಯಮಂತ್ರಿಯಾಗಲು ಮತ್ತೆಂದೂ ಚಾನ್ಸ್ ಸಿಗದು ಎಂಬುದನ್ನು ಯಡಿಯೂರಪ್ಪ ಎಲ್ಲರಿಗಿಂತ ಚೆನ್ನಾಗಿ ಬಲ್ಲರು.

      ಅಂಕಿಸಂಖ್ಯೆ ಬಿಎಸ್ವೈಗೆ ಪೂರಕವಾಗಿದೆ

      ಅಂಕಿಸಂಖ್ಯೆ ಬಿಎಸ್ವೈಗೆ ಪೂರಕವಾಗಿದೆ

      ಈ ಮಾತನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಯಡಿಯೂರಪ್ಪನವರು ಯಾವ ಧೈರ್ಯದ ಮೇಲೆ ಹೇಳುತ್ತಿದ್ದಾರೆಂದರೆ, ಮೈತ್ರಿ ಸರಕಾರದ ಬಳಿ ಇದ್ದಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದರೆ 78+37 = 115 ಶಾಸಕರು. ಇಬ್ಬರು ಪಕ್ಷೇತರರು ಮತ್ತು ಬಹುಜನ ಸಮಾಜ ಪಕ್ಷ ಹಾಗು ಪ್ರಜ್ಞಾವಂತ ಜನತಾ ಪಕ್ಷದ ಶಾಸಕರ ನಿಲುವು ಅತ್ತಿಂದಿತ್ತ ಓಲಾಡುತ್ತಿದೆ. ಬಿಜೆಪಿಯ ಬಳಿ 105 ಶಾಸಕರಿದ್ದಾರೆ. ಬಹುಮತಕ್ಕೆ ಬೇಕಿದ್ದುದು 113. ಆದರೆ, 15 ಶಾಸಕರು ರಾಜೀನಾಮೆ ನೀಡಿದ ನಂತರ ಮೈತ್ರಿ ಸಂಖ್ಯೆ ಅಲ್ಪಮತಕ್ಕೆ ಇಳಿದಿದೆ.

      ಭಿನ್ನಮತೀಯರ ರಾಜೀನಾಮೆ ಅಂಗೀಕಾರವಾದರೆ

      ಭಿನ್ನಮತೀಯರ ರಾಜೀನಾಮೆ ಅಂಗೀಕಾರವಾದರೆ

      ಒಂದು ವೇಳೆ 15 ಶಾಸಕರ ರಾಜೀನಾಮೆ ಅಂಗೀಕಾರವಾದರೆ ಮೈತ್ರಿ ಸರಕಾರದ ಸಂಖ್ಯೆ 100ಕ್ಕೆ ಇಳಿಯಲಿದೆ. ಹಾಗೆಯೆ ಸದನದ ಒಟ್ಟಾರೆ ಸಂಖ್ಯೆ (ನಾಮ ನಿರ್ದೇಶಿಕ ವ್ಯಕ್ತಿ ಸೇರಿ) 210ಕ್ಕೆ ಇಳಿಯಲಿದೆ. ಆಗ, ಬಹುಮತಕ್ಕೆ ಬೇಕಾಗಿರುವುದು 106 ಸಂಖ್ಯೆ. ಸದ್ಯಕ್ಕೆ ಬಿಜೆಪಿ ಈ ಸಂಖ್ಯೆಯ ಸನಿಹದಲ್ಲಿದೆ ಮತ್ತು ಪಕ್ಷೇತರ ಅಭ್ಯರ್ಥಿಗಳನ್ನು ಸೆಳೆದುಕೊಂಡು ಸರಕಾರ ರಚಿಸುವ ಕನಸನ್ನು ಕಾಣುತ್ತಿದೆ. ಓರ್ವ ಸ್ವತಂತ್ರ ಶಾಸಕ ಕೂಡ ಬಿಜೆಪಿಯ ಪರ ಒಲವು ತೋರಿಸುತ್ತಿರುವುದರಿಂದ, ಹುಲ್ಲಿನ ಆಸರೆ ಹಿಡಿದುಕೊಂಡೇ ಸರಕಾರ ರಚಿಸುವುದು ಯಡಿಯೂರಪ್ಪನವರಿಗೆ ಕಷ್ಟವಾಗುವುದಿಲ್ಲ.

      ಮಂತ್ರಿ ಪದವಿಯ ಆಮಿಷಕ್ಕೆ ಬಲಿಯಾಗುವರೆ?

      ಮಂತ್ರಿ ಪದವಿಯ ಆಮಿಷಕ್ಕೆ ಬಲಿಯಾಗುವರೆ?

      ಇದೇ ಸಂದರ್ಭದಲ್ಲಿ, ಮೈತ್ರಿ ಸರಕಾರವನ್ನು ಹೇಗಾದರೂ ಉಳಿಸಿಕೊಳ್ಳಲೇಬೇಕೆಂದು ಪ್ರಯತ್ನದಲ್ಲಿರುವ ಮೈತ್ರಿ ನಾಯಕರು, ಸಿಡಿದೆದ್ದು ರಾಜೀನಾಮೆ ಸಲ್ಲಿಸಿರುವ ಶಾಸಕರಿಗೆ ಮಂತ್ರಿ ಪದವಿಯ ಆಸೆ ತೋರಿಸಿ ರಾಜೀನಾಮೆ ಹಿಂತೆಗೆದುಕೊಳ್ಳಲು ಮನವರಿಕೆ ಪ್ರಯತ್ನ ಮಾಡುವ ಸಾಧ್ಯತೆ ಮುಂದುವರಿಯುವ ಸಾಧ್ಯತೆಯಿದೆ. ಆದರೆ, ಮೈತ್ರಿ ಸರಕಾರದ ಆಡಳಿತದಿಂದ ಆಕ್ರೋಶಗೊಂಡಿರುವ ಭಿನ್ನಮತೀಯರು ಈ ಆಮಿಷಕ್ಕೆ ಮರುಳಾಗುವ ಸಾಧ್ಯತೆ ತುಂಬಾ ಕಮ್ಮಿಯಾಗಿದೆ. ಇವರೆಲ್ಲ ಬಿಜೆಪಿಯ ಪರವಾಗಿ ಪ್ರತ್ಯಕ್ಷವಾಗಿಯಲ್ಲದಿದ್ದರೂ ಪರೋಕ್ಷವಾಗಿ ನಿಂತಿರುವ ಲಕ್ಷಣಗಳು ಕೂಡ ದಟ್ಟವಾಗಿವೆ.

      ಕುಮಾರಸ್ವಾಮಿ ಹಿಂದೆ ಸರಿಯುವರೆ?

      ಕುಮಾರಸ್ವಾಮಿ ಹಿಂದೆ ಸರಿಯುವರೆ?

      ರಾಜೀನಾಮೆ ನೀಡಿರುವ ಶಾಸಕರು ಹೆಚ್ಚಾಗಿ ಕುಮಾರಸ್ವಾಮಿ ಮತ್ತು ಲೋಕೋಪಯೋಗಿ ಸಚಿವರಾಗಿರುವ ಎಚ್ ಡಿ ರೇವಣ್ಣ ಅವರ ವಿರುದ್ಧ ಸಿಡಿದೆದ್ದಿರುವುದರಿಂದ, ಅವರಿಬ್ಬರೂ ಅಥವಾ ಅವರಲ್ಲಿ ಒಬ್ಬರು ಹಿಂದೆ ಸರಿದು, ಭಿನ್ನಮತೀಯರ ಮನವೊಲಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ತಮ್ಮ ತೀರ್ಮಾನವನ್ನು ತಿಳಿಸಲು ಸರ್ವೋಚ್ಚ ನ್ಯಾಯಾಲಯ ಯಾವುದೇ ಕಾಲಮಿತಿ ಹೇರದಿರುವುದರಿಂದ ರಮೇಶ್ ಕುಮಾರ್ ಅವರ ಬಳಿ ಸಾಕಷ್ಟು ಸಮಯವಿದೆ.

      ವಿಧಾನಸಭೆಯನ್ನೇ ವಿಸರ್ಜಿಸಬಹುದು

      ವಿಧಾನಸಭೆಯನ್ನೇ ವಿಸರ್ಜಿಸಬಹುದು

      ತಮ್ಮ ಬಳಿ ಸಂಖ್ಯೆ ಇಲ್ಲವೆಂದು ತಿಳಿದು ಕುಮಾರಸ್ವಾಮಿಯವರು ರಾಜೀನಾಮೆ ನೀಡಬಹುದು. ನಂತರ ಸಾಧ್ಯಾಸಾಧ್ಯತೆಗಳನ್ನು ಪರಿಗಣಿಸಿ ರಾಜ್ಯಪಾಲ ವಜುಭಾಯಿ ವಾಲಾ ಅವರು, ಮತ್ತೊಂದು ಅಲುಗಾಡುವ ಸರಕಾರವೇ ಬೇಡವೆಂದು ತೀರ್ಮಾನಿಸಿ ವಿಧಾನಸಭೆಯನ್ನೇ ವಿಸರ್ಜಿಸಬಹುದು ಮತ್ತು ಮತ್ತೊಂದು ವಿಧಾನಸಭೆ ಚುನಾವಣೆಗೆ ದಾರಿ ಮಾಡಿಕೊಡಬಹುದು. ಯಡಿಯೂರಪ್ಪನವರಿಗೆ ಇದು ಬೇಕಿಲ್ಲವಾದರೂ, ಬಿಜೆಪಿ ಕೇಂದ್ರ ನಾಯಕರಿಗೆ ಮತ್ತೊಂದು ಚುನಾವಣೆಯಲ್ಲಿ ಅಭ್ಯಂತರವಿಲ್ಲ. ಎಡಬಿಡಂಗಿ ಸರಕಾರ ಮುಂದುವರಿಯಬದಲು ಮತ್ತೊಂದು ಚುನಾವಣೆ ನಡೆದು ಒಂದೇ ಪಕ್ಷಕ್ಕೆ ಬಹುಮತ ಸಿಗುವಂತಾಗಬೇಕೆ? ಅಥವಾ ಮೈತ್ರಿ ಸರಕಾರವೇ ಮುಂದುವರಿಯಬೇಕೆ? ಅಭಿಪ್ರಾಯ ತಿಳಿಸಿ.

      ಲಿಂಬಾವಳಿ ಸಿಎಂ, ರೇವಣ್ಣ ಡಿಸಿಎಂ

      ಲಿಂಬಾವಳಿ ಸಿಎಂ, ರೇವಣ್ಣ ಡಿಸಿಎಂ

      ಇದೆಲ್ಲವನ್ನೂ ಮೀರಿದ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಜೆಡಿಎಸ್ ನಿಂದ ಎಚ್ ಡಿ ರೇವಣ್ಣ ಅವರ ಬಣ ಸಿಡಿದು ಅಥವಾ ದೇವೇಗೌಡರ ಅಣತಿಯ ಮೇರೆಗೆ ಬಿಜೆಪಿಯೊಂದಿಗೆ ಕೈಜೋಡಿಸಿ ಹೊಸ ಸರಕಾರ ರಚಿಸಲು ಮುಂದಾದರೂ ಅಚ್ಚರಿಯಿಲ್ಲ. ಜೆಡಿಎಸ್ ಗೆ ಸಿಟ್ಟು ಇರುವುದು ಯಡಿಯೂರಪ್ಪನವರ ಮೇಲೆಯಷ್ಟೇ, ಅರವಿಂದ್ ಲಿಂಬಾವಳಿ ಅಂಥ ದಲಿತ ನಾಯಕನ ಮೇಲೆ ಖಂಡಿತ ಅಲ್ಲ. ಅರವಿಂದ್ ಲಿಂಬಾವಳಿಯವರು ಮುಖ್ಯಮಂತ್ರಿಯಾಗಿ, ರೇವಣ್ಣ ಅವರು ಉಪ ಮುಖ್ಯಮಂತ್ರಿ ಆಗುವಂತಾದರೆ ದೇವೇಗೌಡರು ಯಾಕೆ ಬೇಡ ಅಂತಾರೆ?

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+