karnataka police ಇಲಾಖೆಯ 15 ಹಿರಿಯ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಜೂನ್ 20: ಕರ್ನಾಟಕ ರಾಜ್ಯ ಸರ್ಕಾರವು 15 ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಮಂಗಳವಾರ ಆದೇಶ ಹೊರಡಿಸಿದೆ.
ಬೆಂಗಳೂರು ನಗರ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಸಂದೀಪ್ ಪಾಟೀಲ್ ಅವರನ್ನು ಕೆಎಸ್ಆರ್ಪಿ ಐಜಿಪಿಯಾಗಿ ನೇಮಿಸಿದೆ. ಇವರಿಂದ ತೆರವಾದ ಹುದ್ದೆಗೆ ಬೆಳಗಾವಿ ಉತ್ತರ ವಲಯ ಐಜಿಯಾಗಿದ್ದ ಸತೀಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ಪೊಲೀಸ್ ಅಭಿವೃದ್ಧಿ ನಿಗಮದ ಎಡಿಜಿಪಿಯಾಗಿ ಡಾ. ಕೆ. ರಾಮಚಂದ್ರ ರಾವ್, ರಾಜ್ಯ ಬಂಧೀಖಾನೆ ಇಲಾಖೆಯ ಎಡಿಜಿಪಿಯಾಗಿ ಮಾಲಿನಿ ಕೃಷ್ಣಮೂರ್ತಿ, ರಾಜ್ಯ ನಾಗರೀಕ ಹಕ್ಕುಗಳ ನಿರ್ದೇಶನಾಲಯದ ಎಡಿಜಿಪಿಯಾಗಿ ಅರುಣ್ ಚಕ್ರವರ್ತಿ, ಸಿಐಡಿ ಆರ್ಥಿಕ ಅಪರಾಧ ವಿಭಾಗದ ಎಡಿಜಿಪಿಯಾಗಿ ಮನೀಶ್ ಖರ್ಬಿಕರ್, ರಾಜ್ಯ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿ ಎಂ.ಚಂದ್ರಶೇಖರ್, ಬೆಂಗಳೂರು ನಗರ ಪೂರ್ವ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ವಿಪುಲ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಇದಲ್ಲದೆ ಸಿಐಡಿ ಐಜಿಪಿಯಾಗಿ ಪ್ರವೀಣ್ ಮಧುಕರ್ ಪವಾರ್, ರಾಜ್ಯ ಆಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿ ವಿಕಾಸ್ ಕುಮಾರ್ ವಿಕಾಸ್, ಬೆಳಗಾವಿ ಉತ್ತರ ವಲಯ ಐಜಿಪಿಯಾಗಿ ರಮಣ್ ಗುಪ್ತ, ಬೆಂಗಳೂರು ಪೊಲೀಸ್ ಪ್ರಧಾನ ಕಚೇರಿ ಐಜಿಪಿಯಾಗಿ ಎಸ್.ಎನ್. ಸಿದ್ದರಾಮಪ್ಪ, ಬೆಂಗಳೂರು ದಕ್ಷಿಣ ವಲಯ ಡಿಐಜಿಯಾಗಿ ಎಂ.ಬಿ.ಬೋರಲಿಂಗಯ್ಯ, ಸಿಐಡಿ ಆರ್ಥಿಕ ಅಪರಾಧ ವಿಭಾಗದ ಡಿಐಜಿಯಾಗಿ ಸಿ.ವಂಶಿಕೃಷ್ಣ ಹಾಗೂ ಸಿ.ಬಿ. ರಿಷ್ಯಂತ್ ಅವರನ್ನು ಮಂಗಳೂರು ಎಸ್ಪಿಯಾಗಿ ವರ್ಗಾವಣೆಯಾಗಿದೆ.
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಐಪಿಎಸ್ ಅಧಿಕಾರಿ ಲಾಭುರಾಮ್ ವರ್ಗಾವಣೆ ಬೆನ್ನಲ್ಲೇ ತೆರವು ಆಗಿದ್ದ ಸ್ಥಾನಕ್ಕೆ ಐಪಿಎಸ್ ಅಧಿಕಾರಿ ರಮಣ್ ಗುಪ್ತಾ ಅವರನ್ನು ನೇಮಿಸಲಾಗಿತ್ತು. ಆದರೆ ಈಗ ರಮಣ ಗುಪ್ತ ಅವರನ್ನು ಉತ್ತರ ವಲಯ ಐಜಿಪಿಯನ್ನಾಗಿ ಪದೊನ್ನತಿಗೊಳಿಸಿ ವರ್ಗಾವಣೆ ಮಾಡಲಾಗಿದೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಸ್ಥಾನಕ್ಕೆ ಇನ್ನೂ ಯಾರನ್ನು ನೇಮಕ ಮಾಡಿಲ್ಲ.
ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ವರ್ಗಾವಣೆಗೆ ತಡೆ ತಂದಿರುವ ಹಿನ್ನಲೆಯಲ್ಲಿ ಮುಜುಗರಕ್ಕೀಡಾಗಿದ್ದ ಸರ್ಕಾರ, ಐಪಿಎಸ್ ಅಧಿಕಾರಿಗಳ ವರ್ಗಾವಣೆ ನಿರ್ಧಾರ ಬದಲಾವಣೆ ಮಾಡಿಕೊಂಡಿತ್ತು. ಬೆಂಗಳೂರಿನ ಕೇಂದ್ರ ವಿಭಾಗ, ಪಶ್ಚಿಮ, ಪೂರ್ವ, ಉತ್ತರ ಸೇರಿದಂತೆ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ ಸಿಎಂ ಸಿದ್ದರಾಮಯ್ಯನವರ ಬಳಿ ಇತ್ತು.












Click it and Unblock the Notifications