ಮೋದಿ ಬರುವ ದಾರಿಯಲ್ಲಿ ಸಿದ್ದರಾಮಯ್ಯ ಜಾಹೀರಾತು 'ಪ್ರತಿತಂತ್ರ'
ಬೆಂಗಳೂರು, ಫೆಬ್ರವರಿ 4: ಬಿಜೆಪಿಯ ಪರಿವರ್ತನಾ ರ್ಯಾಲಿಯ ಸಮಾರೋಪ ಇಂದು ಅರಮನೆ ಮೈದಾನದಲ್ಲಿ ನಡೆಯಲಿದೆ. ಈ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿದ್ದಾರೆ. ಪ್ರಧಾನಿ ರ್ಯಾಲಿಗೆ ಆಗಮಿಸುವ ರಸ್ತೆಯುದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾಹೀರಾತು ಅಳವಡಿಸಿ ಮೋದಿಗೆ ಪ್ರತ್ಯುತ್ತರ ನೀಡಿದ್ದಾರೆ.
ಇಂದಿನ ಪರಿವರ್ತನಾ ರ್ಯಾಲಿಗೆ ಭಾರೀ ಪ್ರಚಾರ ಸಿಕ್ಕಿದ್ದು ಮೋದಿ ತಮ್ಮ ಭಾಷಣದಲ್ಲಿ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ಮೂಲಕ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಮತ್ತಷ್ಟು ಬಲ ತುಂಬಲಿದ್ದಾರೆ. ಈ ಹಿನ್ನಲೆಯಲ್ಲಿ ಮೋದಿ ಭಾಷಣಕ್ಕೂ ಮುನ್ನ ಮೋದಿಗೆ ಸಿದ್ದರಾಮಯ್ಯ ಜಾಹೀರಾತಿನ ಮೂಲಕ ತಿರುಗೇಟು ನೀಡಿದ್ದಾರೆ.
ಸಂಜೆ 4 ಗಂಟೆಗೆ ಪರಿವರ್ತನಾ ರ್ಯಾಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ದೆಹಲಿಯಿಂದ ಎಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ನೇರ ವಿಮಾನದಲ್ಲಿ ಆಗಮಿಸಲಿರುವ ಪ್ರಧಾನಿ ನಂತರ ಅಲ್ಲಿಂದ ಹೆಬ್ಬಾಳಕ್ಕೆ ಹೆಲಿಕಾಪ್ಟರ್ ನಲ್ಲಿ ತೆರಳಲಿದ್ದಾರೆ. ಅಲ್ಲಿಂದ ಅವರು ಅರಮನೆ ಮೈದಾನಕ್ಕೆ ರಸ್ತೆ ಮಾರ್ಗವಾಗಿ ಆಗಮಿಸಲಿದ್ದಾರೆ.

ಸರಕಾರದ ಕಡೆಯಿಂದ ಮೋದಿ ಬರಲಿರುವ ದಾರಿಯುದ್ದಕ್ಕೂ ಕರ್ನಾಟಕ ನಂಬರ್ 1 ಎಂಬ ಜಾಹೀರಾತು ಹಾಕಲಾಗಿದೆ. ರಾತೋರಾತ್ರಿ ಈ ಜಾಹೀರಾತುಗಳನ್ನು ಹಾಕಲಾಗಿದ್ದು ಬಿಜೆಪಿ ಬಾವುಟ, ಫ್ಲೆಕ್ಸ್ ಗಳ ಮಧ್ಯೆ ರಾಜ್ಯ ಸರಕಾರದ ಹೋರ್ಡಿಂಗ್ ಗಳು ಗಮನ ಸೆಳೆಯುತ್ತಿವೆ.
ಕರ್ನಾಟಕ ಸರಕಾರ ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಗಳನ್ನು ಹೋರ್ಡಿಂಗ್ ಗಳಲ್ಲಿ ವಿವರಿಸಲಾಗಿದೆ. ಜತೆಗೆ ನಮ್ಮ ಕರ್ನಾಟಕ ಫಸ್ಟ್ (#NammaKarnatakaFirst) ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಕೂಡಾ ಆಗಿದೆ. ಬಿಜೆಪಿಗರ ತಂತ್ರಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಹೆಣೆದ ಈ ಜಾಹೀರಾತು ತಂತ್ರ ಕಮಲ ಪಕ್ಷದ ನಾಯಕರನ್ನು ಮುಜುಗರಕ್ಕೀಡು ಮಾಡಿದೆ.












Click it and Unblock the Notifications