ಕರ್ನಾಟಕದ ಬುಧವಾರದ ತುಣುಕು ಸುದ್ದಿ
ಬೆಂಗಳೂರು, ನ. 12 : ಕರ್ನಾಟಕದಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಸಂಗ್ರಹ ನಿಮಗೆ ನೀಡುವ ಪ್ರಯತ್ನ ಇದಾಗಿದೆ.
ಸಮಯ 2.55 : ಹಲ್ಲಿ ಬಿದ್ದಿದ್ದ ಬಿಸಿಯೂಟ ಸೇವಿಸಿದ್ದ 15 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಬಂಡೆಕಾರ್ಲ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ ನಿನ್ನೆ ಮಧ್ಯಾಹ್ನ ಬಿಸಿಯೂಟದಲ್ಲಿ ಹಲ್ಲಿ ಬಿದ್ದಿತ್ತು. ಊಟ ಸೇವಿಸಿದ ಮಕ್ಕಳು ತಡರಾತ್ರಿ ವಾಂತಿ-ಭೇದಿಯಿಂದ ಅಸ್ವಸ್ಥಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಮಯ 2 ಗಂಟೆ : ಕಾರ್ತಿಕ್ ಗೌಡ ಮತ್ತು ಮೈತ್ರಿಯಾ ಗೌಡ ವಿವಾಹ ವಿವಾದಕ್ಕೆ ಸಂಬಂಧಿದಂತೆ ಕಾರ್ತಿಕ್ ಗೌಡ ಅವರು ಕೌಟುಂಬಿಕ ನ್ಯಾಯಾಲಯಕ್ಕೆ ಆಪೇಕ್ಷಣೆ ಸಲ್ಲಿಸಿದ್ದಾರೆ. ನಿರ್ದೇಶಕ ರಿಷಿ ಮತ್ತು ಮೈತ್ರಿಯಾ ಗೌಡ ಅವರ ಅರ್ಜಿಯ ವಿಚಾರಣೆ ಇತ್ಯರ್ಥಗೊಳ್ಳಲಿ ಎಂದು ಆಕ್ಷೇಪಣೆಯಲ್ಲಿ ಹೇಳಿದ್ದು, ತಮ್ಮ ವಿರುದ್ಧದ ವಿಚಾರಣೆ ರದ್ದುಗೊಳಿಸುವಂತೆ ಕೋರಿದ್ದಾರೆ. ಪ್ರಕರಣದ ವಿಚಾರಣೆಯನ್ನು ನ.26ಕ್ಕೆ ಮುಂದೂಡಲಾಗಿದೆ.
ಸಮಯ 1 ಗಂಟೆ : ದೇಶದಲ್ಲಿ ಕಾನೂನು ವ್ಯವಸ್ಥೆಯಿದೆ. ಆದರೆ, ನ್ಯಾಯಾಲಯಗಳಲ್ಲಿ ಸಾಕ್ಷ್ಯಗಳಿಲ್ಲದೆ ಬಹಳಷ್ಟು ಪ್ರಕರಣಗಳು ಊರ್ಜಿತವಾಗುತ್ತಿಲ್ಲ. ಆದ್ದರಿಂದ ಜನಸಾಮಾನ್ಯರಿಗೆ ನ್ಯಾಯ ದೊರಕಿಸುವ ಸಮಗ್ರ ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿದೆ ಎಂದು ರಾಜ್ಯಪಾಲ ವಾಜುಭಾಯಿ ವಾಲಾ ಹೇಳಿದ್ದಾರೆ.
ಸಮಯ 12 ಗಂಟೆ : ಸಚಿವೆ ಉಮಾಶ್ರೀ ಕಾರು ಚಾಲಕನಿಗೆ 1 ಸಾವಿರ ರೂ. ದಂಡ ವಿಧಿಸಲಾಗಿದೆ. ವಾಯುಮಾಲಿನ್ಯ ತಪಸಣಾ ಪ್ರಮಾಣ ಪತ್ರವಿಲ್ಲದ್ದಕ್ಕೆ ಬುಧವಾರ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ. ಕಬ್ಬನ್ಪಾರ್ಕ್ನಲ್ಲಿ ಕಾರು ತಡೆದು ತಪಾಸಣೆ ನಡೆಸಿದ ಪೊಲೀಸರು ದಂಡ ಹಾಕಿದ್ದಾರೆ.
ಸಮಯ 11 ಗಂಟೆ : ವೇತನ ಪರಿಷ್ಕರಣೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರ್ವಜನಿಕ ವಲಯದ ಬ್ಯಾಂಕ್ ಉದ್ಯೋಗಿಗಳು ಒಂದು ದಿನದ ಮುಷ್ಕರ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಮೈಸೂರು ಬ್ಯಾಂಕ್ ವೃತ್ತದ ಬಳಿ ನೌಕರರ ಪ್ರತಿಭಟನೆ ಆರಂಭವಾಗಿದೆ.
ಸಮಯ 10 ಗಂಟೆ : ಬೆಂಗಳೂರಿನ ಪಶ್ಚಿಮ ವಲಯದಲ್ಲಿ ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದಂತೆ 240ಕ್ಕೂ ಅಧಿಕ ರೌಡಿಗಳಿಗೆ ಎಚ್ಚರಿಕೆ ನೀಡಿದ ಪೊಲೀಸರು.
ಸಮಯ 9 ಗಂಟೆ : ಆಂಬ್ಯುಲೆನ್ಸ್ಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಆಂಬ್ಯುಲೆನ್ಸ್ನಲ್ಲಿದ್ದ ನಾಲ್ವರು ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮುಳಖೇಡ ಬಳಿ ನಡೆದಿದೆ. ಆಂಬ್ಯುಲೆನ್ಸ್ನಲ್ಲಿ ಮೃತದೇಹವನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು.

ಸಮಯ 8.30 : ಬೆಂಗಳೂರಿನ ಲಾಲ್ಬಾಗ್ ವೆಸ್ಟ್ಗೇಟ್ ಬಳಿ ಇರುವ ಕೆರೆಯಲ್ಲಿ 17 ವರ್ಷದ ಬಾಲಕಿ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಸಿದ್ಧಾಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಸಮಯ 8 ಗಂಟೆ : ಮುದ್ದೆಬಿಹಾಳದ ಮಾರುತಿನಗರದಲ್ಲಿ ಮಾಜಿ ಸೈನಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಯಮನೂರಪ್ಪ ಮ್ಯಾಗೇರಿ ಮಂಗಳವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಮಯ 7.30 : ಧೂಮರಹಿತ, ಜಗಿಯುವ ತಂಬಾಕು ಬಳಕೆಯನ್ನು ರಾಜ್ಯ ಸರ್ಕಾರ ನಿಷೇಧಿಸುವ ಪ್ರಸ್ತಾಪವಿದ್ದು ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ. [ತಂಬಾಕು, ಬಿಡಿಬಿಡಿ ಸಿಗರೇಟ್ ಮಾರಾಟ ನಿಷೇಧ]












Click it and Unblock the Notifications