ಸುಪ್ರೀಂ ಆದೇಶವೇ ಕಾನೂನು ಬಾಹಿರ : ಬಿವಿ ಆಚಾರ್ಯ
ಬೆಂಗಳೂರು, ಸೆ 13: ಕಾವೇರಿ ನದಿನೀರು ಹಂಚಿಕೆಯ ವಿಚಾರದಲ್ಲಿ ಸುಪ್ರೀಂಕೋರ್ಟ್ ಸೋಮವಾರ (ಸೆ 12) ನೀಡಿದ ತೀರ್ಪಿಗೆ ಹಿರಿಯ ವಕೀಲ ಬಿ ವಿ ಆಚಾರ್ಯ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಕಾವೇರಿ ಜಲವಿವಾದ ಬಗೆಹರಿಸಲು ನ್ಯಾಯಮಂಡಳಿಯನ್ನು ನೇಮಿಸಲಾಗಿದೆ. ಹಾಗಿರುವಾಗ ಸುಪ್ರೀಂಕೋರ್ಟ್ ಆದೇಶ ನೀಡಿ ಅಂತರರಾಜ್ಯ ನದಿನೀರು ಕಾಯ್ದೆಯನ್ನು ಉಲ್ಲಂಘಿಸಿದಂತಾಗಿದೆ ಎಂದು ಮಾಜಿ ಅಡ್ವೋಕೇಟ್ ಜನರಲ್ ಬಿ ವಿ ಆಚಾರ್ಯ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. (ಬೆಂಗಳೂರಿನ 16 ಪ್ರದೇಶಗಳಲ್ಲಿ ಕರ್ಫ್ಯೂ)
ಎರಡು ಬಾರಿ ಸರ್ವೋಚ್ಚ ನ್ಯಾಯಾಲಯ ತಮಿಳುನಾಡಿಗೆ ನೀರು ಬಿಡಬೇಕು ಆದೇಶ ನೀಡಿದೆ. ಈ ಆದೇಶವೇ ಕಾನೂನು ಬಾಹಿರ.

ಸುಪ್ರೀಂ ಆದೇಶವನ್ನು ರಾಜ್ಯ ಸರಕಾರ ಪಾಲಿಸಬೇಕಾದ ಅವಶ್ಯಕತೆಯಿಲ್ಲ. ಆದೇಶ ಪಾಲಿಸುವುದಿಲ್ಲ ಎನ್ನುವ ಧೈರ್ಯದ ನಿರ್ಧಾರಕ್ಕೆ ಸರಕಾರ ಬರಬೇಕು ಅಷ್ಟೇ ಎಂದು ಆಚಾರ್ಯ ಪ್ರತಿಪಾದಿಸಿದ್ದಾರೆ.
ಸುಪ್ರೀಂ ತೀರ್ಪು ಕಾನೂನು ಬಾಹಿರ, ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಪಾಲಿಸುವ ಅವಶ್ಯಕತೆಯಿಲ್ಲ. ಸರಕಾರ ನನ್ನ ಸಲಹೆ ಕೇಳಿದರೆ, ನನ್ನ ಸಲಹೆ ಕೊಡಲು ಸಿದ್ದನಿದ್ದೇನೆ.
ಈ ವಿಚಾರದಲ್ಲಿ ಸರಕಾರ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಬೇಕು, ಎಲ್ಲಾ ಪಕ್ಷಗಳು ಸರಕಾರದ ಪರವಾಗಿ ನಿಲ್ಲಬೇಕೆಂದು ಆಚಾರ್ಯ ಹೇಳಿದ್ದಾರೆ. (ಬೆಂಗಳೂರು ಹೊತ್ತಿ ಉರಿಯಲು ಮೂಲ ಕಾರಣ)
2013 ರಲ್ಲಿ ಕಾವೇರಿ ಮೇಲುಸ್ತುವಾರಿ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಈ ಸಂಬಂಧ ಗೆಜೆಟ್ ಅಧಿಸೂಚನೆ ಹೊರಡಿಸಿದ ಬಳಿಕ ನೀರಿನ ಹಂಚಿಕೆ ವಿಚಾರ ಸಮಿತಿಯ ಮುಂದೆ ಬರಬೇಕೇ ವಿನಃ ಸುಪ್ರೀಂಕೋರ್ಟ್ ಮುಂದೆ ಅಲ್ಲ ಎಂದು ಆಚಾರ್ಯ ಸುಪ್ರೀಂ ತೀರ್ಪಿಗೆ ಆಕ್ಷೇಪಣೆ ವ್ಯಕ್ತ ಪಡಿಸಿದ್ದಾರೆ.












Click it and Unblock the Notifications