Rain Alert: ಚಂಡಮಾರುತ ತೀವ್ರತೆ: ಕರಾವಳಿಗೆ 05 ದಿನವೂ 'ರೆಡ್ ಅಲರ್ಟ್', ರಾಜ್ಯಾದ್ಯಂತ ಭಾರೀ ಮಳೆ
ಬೆಂಗಳೂರು, ಜೂನ್ 12: ಬಂಗಾಳಕೊಲ್ಲಿ ಭಾಗದ ಸಮುದ್ರ ಮೇಲ್ಮೈನಲ್ಲಿ ಸೃಷ್ಟಿಯಾಗಿರುವ ಚಂಡಮಾರುತದ ಪ್ರಸರಣವು ಮತ್ತಷ್ಟು ತೀವ್ರಗೊಂಡಂತೆ ಕಾಣುತ್ತದೆ. ಆಂಧ್ರ ಕರಾವಳಿ ಭಾಗದಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತವು ಸಹ ಬಲಗೊಂಡಿದೆ. ಈ ವೈರಪರೀತ್ಯಗಳ ಕಾರಣದಿಂದಾಗಿ ಕರ್ನಾಟಕದಾದ್ಯಂತ ಅತ್ಯಧಿಕ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ವಿಜ್ಞಾನಿಗಳು ಗುರುವಾರ ಮಧ್ಯಾಹ್ನದ ಮುನ್ಸೂಚನೆಯಲ್ಲಿ ತಿಳಿಸಿದ್ದಾರೆ.
ಹವಾಮಾನ ಕೇಂದ್ರ ಪ್ರಕಾರ, ರಾಜ್ಯದ 9 ಜಿಲ್ಲೆಗಳಿಗೆ ಮುಂದಿನ 05 ದಿನ ಗುಡುಗು ಮಿಂಚು ಸಹಿತ ಅತ್ಯಧಿಕ ಮಳೆ ಅಂದರೆ 200 ಮಿಲಿ ಮೀಟರ್ಗೂ ಹೆಚ್ಚು ಮಳೆ ಆಗಲಿದ್ದು, 'ರೆಡ್ ಅಲರ್ಟ್' ನೀಡಲಾಗಿದೆ. ಇದರಲ್ಲಿ 05 ದಿನವೂ ಕರಾವಳಿ ಮೂರು ಜಿಲ್ಲೆಗಳಿಗೆ 'ರೆಡ್ ಅಲರ್ಟ್' ಇದ್ದರೆ, ಉಳಿದಂತೆ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ 04 ದಿನ, ಹಾವೇರಿ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಒಂದು ದಿನ (ಜೂನ್ 13) 'ರೆಡ್ ಅಲರ್ಟ್' ಘೋಷಿಸಲಾಗಿದೆ. ಸದ್ಯ ಬೆಂಗಳೂರಿನಲ್ಲಿ ಗುರುವಾರ ಬಿಸಿಲು ಆವರಿಸಿದ್ದು, ಯಾವುದೇ ಮಳೆ ಮುನ್ಸೂಚನೆ ನೀಡಲಾಗಿಲ್ಲ.

ರಾಜ್ಯದ ಕೆಲವೆಡೆ ಪ್ರವಾಹ ಪರಿಸ್ಥಿತಿ
ಈಗಾಗಲೇ ಈ ಜಿಲ್ಲೆಗಳಲ್ಲಿ ಸುರಿದ ಮಳೆಯಿಂದ ಪ್ರವಾಹ ಸ್ಥಿತಿ ಉಂಟಾಗಿದೆ. ಬುಧವಾರ ರಾತ್ರಿ ಇಲ್ಲೆಲ್ಲ ಭಾರೀ ಮಳೆ ಸುರಿದಿದೆ. ಇನ್ನಷ್ಟು ಮಳೆ ಆದರೆ ಜನಜೀವನ ಅಸ್ತವ್ಯಸ್ತವಾಗುತ್ತದೆ. ಮುಂದಿನ ಐದು ದಿನಗಳ ಪೈಕಿ ಕೊಪ್ಪಳ, ರಾಯಚೂರು, ವಿಜಯಪುರ, ಬಾಗಲಕೋಟೆ, ಗದಗ, ದಾವಣಗೆರೆ, ಮೈಸೂರು, ವಿಜಯನಗರ ಜಿಲ್ಲೆಗಳಿಗೆ ಎರಡು ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ 110 ರಿಂದ 180 ಮಿಲಿ ಮೀಟರ್ ವರೆಗೆ ಧಾರಾಕಾರವಾಗಿ ಮಳೆ ಆಗುವ ಲಕ್ಷಣಗಳು ಇವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಮುಂದಿನ ಮೂರು ದಿನಗಳ ನಂತರ ಜೂನ್ 15ರ ನಂತರ ಒಂದೆರಡ ಬೆಳಗಾವಿ, ಧಾರವಾಡ, ಹಾವೇರಿ, ಮಂಡ್ಯ, ಮೈಸೂರು , ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಆ ಹೊತ್ತಿಗಾಗಲೇ ಮಳೆ ಬಿರುಸು ಕೊಂಚ ಕಡಿಮೆ ಆಗುವ ನಿರೀಕ್ಷೆ ಇವೆ ಎಂಬುದುನ್ನು ವರದಿಯಲ್ಲಿ ತಿಳಿಸಲಾಗಿದೆ. ಸದ್ಯ ಮಳೆ ಬರುವ ಎಲ್ಲ ಜಿಲ್ಲೆಗಳಲ್ಲಿ ಗಾಳಿಯ ಪ್ರತಿ ಗಂಟೆಗೆ ವೇಗ 50 ಕಿಲೋ ಮೀಟರ್ ಇರಲಿದೆ. ಕರಾವಳಿಯಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ದಕ್ಷಿಣ ಒಳನಾಡು, ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಮುಂಗಾರು ಆರ್ಭಟ ಜೋರಾಗಿದೆ. ಹುಬ್ಬಳ್ಳಿ, ಧಾರವಾಡ, ಮಂಗಳೂರು, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರಿನಲ್ಲಿ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಎಲ್ಲೆಡೆ ಮಬ್ಬು ಕವಿದಿದೆ. ತಾಪಮಾನ ಇಳಿಕೆ ಆಗಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರ ತಿಳಿಸಿದೆ.
ಕಾರವಾರದಲ್ಲಿ 374.2 ಮಿ.ಮೀ ಮಳೆ ದಾಖಲು
ಕಳೆದ 24 ಗಂಟೆಗಳಲ್ಲಿ ಕಾರವಾರದಲ್ಲಿ 374.2 ಮಿ.ಮೀ, ಕೋಟಾ 190.8 ಮಿ.ಮೀ, ಕೆರೂರು 160.2 ಮಿ.ಮೀ, ಹುಬ್ಬಳ್ಳಿ 149 ಮಿ.ಮೀ, ಗೋಕರ್ಣ 148.4 ಮಿ.ಮೀ, ಅಂಕೋಲಾ 147.8 ಮಿ.ಮೀ, ಹೊನ್ನಾವರ 127 ಮಿ.ಮೀ, ಗಬ್ಬೂರ್ 115.2 ಮಿ.ಮೀ, ಕುಂದಾಪುರ 114.2 ಮಿ.ಮೀ, ಮಂಗಳೂರು ಎಪಿ - 112.9 ಮಿ.ಮೀ, ಕುಮಟಾ- 105.8 ಮಿ.ಮೀ,
ಆಗುಂಬೆ 100 ಮಿ.ಮೀ, ಬಂಟ್ವಾಳ 89 ಮಿ.ಮೀ, ಮೂಡುಬಿದಿರೆ 88.2 ಮಿ.ಮೀ, ಮೂಲ್ಕಿ 86 ಮಿ.ಮೀ, ಲಕ್ಷ್ಮೇಶ್ವರ 83 ಮಿ.ಮೀ ಹಾಗೂ ಉಡುಪಿಯಲ್ಲಿ 82.1ಮಿ.ಮೀ ಮಳೆ ದಾಖಲಾಗಿದೆ.












Click it and Unblock the Notifications