RSS ಯಾತ್ರೆಯಲ್ಲಿ ಖಡ್ಗ, ಶೋಭಾಯಾತ್ರೆಯಲ್ಲಿ ಕಾಂಗೈ ನಾಯಕ
ಬೆಂಗಳೂರು, ಅ 15: ರಾಜ್ಯದೆಲ್ಲಡೆ ವೈಭವದ ದಸರಾ ಹಬ್ಬಕ್ಕೆ ತೆರೆ ಬಿದ್ದಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನದ ವೇಳೆ ಖಡ್ಗ ಪ್ರದರ್ಶಿಸಲಾಗಿದೆ ಎಂದು ಮಂಗಳೂರಿನಲ್ಲಿ ಕೇಸ್ ದಾಖಲಾಗಿದೆ.
ದಾವಣಗೆರೆಯಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ವಿಜಯದಶಮಿ ಮೆರವಣಿಗೆಯ ವೇಳೆ ಕಾಂಗ್ರೆಸ್ ಪಕ್ಷದ ಹಾಲಿ ಶಾಸಕರೊಬ್ಬರು ಭಾಗವಹಿಸಿ ಅಚ್ಚರಿ ಮೂಡಿಸಿದ್ದಾರೆ.
ಮಂಗಳೂರು ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ವೈಭವದ ಶೋಭಾಯಾತ್ರೆಗೆ ಮಂಗಳವಾರ (ಅ 15) ತೆರೆಬಿದ್ದಿದೆ. ಮಡಿಕೇರಿಯಲ್ಲಿ ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ ಮಹಿಳಾ ದಸರಾ ಯಶಸ್ವಿಯಾಗಿದೆ.
ಕೊಲ್ಲೂರು ಮೂಕಾಂಬಿಕಾ ಸನ್ನಿಧಾನದಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ್ದಾರೆ. ವಿಜಯದಶಮಿಯ ದಿನವಾದ ಸೋಮವಾರ ಕೊಲ್ಲೂರು ದೇವಾಲಯ 'ಸರ್ವಂ ಕೇರಳ ಮಯಂ' ವಾಗಿತ್ತು.
ಹತ್ತು ಹಲವಾರು ವಿವಾದಗಳಿಂದ ಗಮನ ಸೆಳಿದ್ದಿದ್ದ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಸಕಲ ವೈಭವ ಮತ್ತು ವೈಭೋಗಗಳಿಂದ ಮುಕ್ತಾಯಗೊಂಡಿದೆ. ಜಿಲ್ಲೆಯ ವಿವಿಧ ಭಾಗಗಳಿಂದ ಹರಿದು ಬಂದ ಜನಸಾಗರದ ನಡುವೆ ಪಲ್ಲಕ್ಕಿಯಲ್ಲಿ ಶ್ರೀಗಳು ಕುಳಿತು ಭಕ್ತರು ಕುಣಿದು ಕುಪ್ಪಳಿಸುವಂತೆ ಮಾಡಿದರು.
ಆನೇಕಲ್ ನಗರದಲ್ಲೂ ಭವ್ಯವಾದ ಮೆರವಣಿಗೆಯೊಂದಿಗೆ ದಸರಾ ಹಬ್ಬಕ್ಕೆ ತೆರೆಬಿದ್ದಿದೆ. ಸಂಸದ ಡಿ ಕೆ ಸುರೇಶ್ ಮೆರವಣಿಗೆಯ ನೇತೃತ್ವ ವಹಿಸಿದ್ದರು.
ನಾಡಿನ ಪ್ರಮುಖ ದುರ್ಗಾ ದೇವಾಲಯಗಳಾದ ಹೊರನಾಡು, ಕಟೀಲು, ಸವದತ್ತಿ, ಶೃಂಗೇರಿ, ಐಹೊಳೆ, ಬಪ್ಪನಾಡು, ಮಂದರ್ತಿ ದೇವಾಲಯಗಳಲ್ಲಿ ನವರಾತ್ರಿ ಹಬ್ಬಕ್ಕೆ ವೈಭವದ ತೆರೆಬಿದ್ದಿದೆ.
ಆರ್ ಎಸ್ಎಸ್ ಯಾತ್ರೆಯಲ್ಲಿ ಖಡ್ಗ, ವಿಎಚ್ಪಿ ಯಾತ್ರೆಯಲ್ಲಿ ಕಾಂಗ್ರೆಸ್ ಶಾಸಕ..

ಮಂಗಳೂರು ಕುದ್ರೋಳಿ
ಮಾಜಿ ಸಂಸದ ಜನಾರ್ಧನ ಪೂಜಾರಿ ನೇತೃತ್ವದಲ್ಲಿ ವೈಭವದ ಶೋಭಾ ಯಾತ್ರೆಗೆ ಮಂಗಳವಾರ ತೆರೆಬಿದ್ದಿದೆ. ಕ್ಷೇತ್ರ ಸ್ಥಾಪನೆಯ 101ನೇ ವರ್ಷದ ಸಂಭ್ರಮದಲ್ಲಿ ದೇವಾಲಯದಲ್ಲಿ ಮಹಿಳಾ ಅರ್ಚಕರನ್ನು ನೇಮಿಸಿ ಪೂಜಾರಿ ಕ್ರಾಂತಿಕಾರಿ ಹೆಜ್ಜೆಯನ್ನು ಇಟ್ಟಿದ್ದರು. ನವದುರ್ಗೆಯರನ್ನು ಹೊತ್ತ ಶೋಭಾ ಯಾತ್ರೆ ಮಂಗಳೂರು ನಗರವನ್ನು ರಾತ್ರಿ ಇಡೀ ಸಂಚರಿಸಿ ಸಂಪನ್ನಗೊಂಡಿದೆ.

RSS ಪಥಸಂಚಲನ
ದಸರಾ ಹಬ್ಬದ ಪ್ರಯುಕ್ತ ರಾಷ್ಟೀಯ ಸ್ವಯಂ ಸೇವಕ ಸಂಘದ ಪಥಸಂಚಲನದ ವೇಳೆ ಮೊದಲ ಸಾಲಿನಲ್ಲಿ ಸಾಗುತ್ತಿದ್ದ ಗಣವೇಷಧಾರಿಗಳು ಖಡ್ಗವನ್ನು ಝಳಿಪಿಸುತ್ತಾ ಸಾಗುತ್ತಿದ್ದರು ಎಂದು ಮಂಗಳೂರು ಬಜ್ಪೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಆರ್ ಎಸ್ ಎಸ್ ಯಾತ್ರೆ
ಮೆರವಣಿಗೆಯಲ್ಲಿ ಸುಮಾರು 250 ಜನ ಭಾಗವಹಿಸಿದ್ದರು. ಮೊದಲ ಸಾಲಿನಲ್ಲಿದ್ದ ನಾಲ್ವರು ಖಡ್ಗ ಹಿಡಿದು ಕೊಂಡು ಸಾಗುತ್ತಿದ್ದರು. ಪಥಸಂಚಲನದಲ್ಲಾಗಲಿ ಅಥವಾ ಮೆರವಣಿಗೆಯಲ್ಲಾಗಲಿ ಆಯುಧ ಬಳಸುವಂತಿಲ್ಲ. ಇದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗಿದೆ ಎಂದು ದೂರುದಾರ ಅಬ್ದುಲ್ ಹಸೈನಾರ್ ಹೇಳಿದ್ದಾರೆ.

ದಾವಣಗೆರೆ ವಿಎಚ್ಪಿ ಯಾತ್ರೆ
ದಾವಣಗೆರೆಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಯಾತ್ರೆಯ ವೇಳೆ ಕಾಂಗ್ರೆಸ್ ಮುಖಂಡ ಎಸ್ ಎಸ್ ಮಲ್ಲಿಕಾರ್ಜುನ ಭಾಗವಹಿಸಿದ್ದರು. ನಗರದ ವೆಂಕಟೇಶ್ವರ ವೃತ್ತದ ಬಳಿ ಸಂಸದ ಸಿದ್ದೇಶ್ ಜೊತೆಗೆ ಚಾಮುಂಡೇಶ್ವರಿ ಪ್ರತಿಮೆಗೆ ಪುಷ್ಪ ಅರ್ಪಿಸಿ ಮಲ್ಲಿಕಾರ್ಜುನ್ ಪಾಲಿಕೆ ಸದಸ್ಯರೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದರು.

ಶೃಂಗೇರಿ
ಶೃಂಗೇರಿಯಲ್ಲಿ ವಿಜಯದಶಮಿಯ ದಿನದಂದು ಗಜಲಕ್ಷ್ಮಿ ಅಲಂಕಾರ ಮಾಡಲಾಗಿತ್ತು. ಮಂಗಳವಾರ ಶಾರದಾ ದೇವಿಯ ಮಹಾರಥೋತ್ಸವ ನಡೆಯಲಿದೆ.












Click it and Unblock the Notifications