143 ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿತ, ಕಲಾಪದಲ್ಲಿ ಚರ್ಚೆ
ಬೆಂಗಳೂರು, ಮಾರ್ಚ್. 22 : ಹಲವು ವಾದ-ವಿವಾದಗಳಿಗೆ ಬುಧವಾರದ ವಿಧಾನ ಪರಿಷತ್ ಕಲಾಪ ಸಾಕ್ಷಿಯಾಯಿತು. ಈ ವೇಳೆ ಪ್ರತಿಪಕ್ಷದ ಸದಸ್ಯರು ವಿವಿಧ ಇಲಾಖೆಯಲ್ಲಿನ ಯೋಜನೆ ಮತ್ತು ಕಾಮಾಗಾರಿಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಆಡಳಿತ ರೂಢ ಪಕ್ಷ ಕಾಂಗ್ರೆಸ್ ನ ಮಂತ್ರಿಗಳು ಸೂಕ್ತ ಉತ್ತರ ನೀಡಿದರು.
ಅಂತರ್ಜಲ ಕುಸಿತ, ಆರೋಗ್ಯ ಭಾಗ್ಯ. 398 ಬಿ.ಇಡಿ. ಕಾಲೇಜು, ಮಾಧ್ಯಮಗಳ ಮೇಲೆ ಕ್ರಮ, ನೀಲಗಿರಿ ಮತ್ತು ಅಕೇಶಿಯಾ ಮರಗಳು ನಿಷೇಧ, ಕೃಷಿಕರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಯಶಸ್ವಿನಿ ಯೋಜನೆಯಡಿ ಆರೋಗ್ಯ ಭಾಗ್ಯ ಸೇರಿದಂತೆ ಇತರೆ ಇಲಾಖೆಗಳ ಪ್ರಶ್ನೋತ್ತರಗಳು ವಿಧಾನ ಪರಿಷತ್ ಕಲಾಪ ನಡೆದವು.
ಹಾಗೂ ಸಿದ್ದರಾಮಯ್ಯ ಅವರು ಮಂಡಿಸಿರುವ 2017ನೇ ಸಾಲಿನ ರಾಜ್ಯ ಬಜೆಟ್ ಮೇಲಿನ ಬಿಸಿಬಿಸಿ ಚರ್ಚೆಗಳ ರೌಂಡಪ್ ಇಲ್ಲಿದೆ.
ರಾಜ್ಯದ 143 ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿತ
ರಾಜ್ಯದ 176 ತಾಲ್ಲೂಕುಗಳ ಪೈಕಿ 143 ತಾಲ್ಲೂಕುಗಳಲ್ಲಿ ಅಂತರ್ಜಲ ಸ್ಥಿರ ಮಟ್ಟದಲ್ಲಿ ಕುಸಿತ ಕಂಡಿದ್ದು ಅದರಲ್ಲಿ 43 ತಾಲ್ಲೂಕುಗಳಲ್ಲಿ ಗಣನೀಯ ಮಟ್ಟದಲ್ಲಿ ಕುಸಿತಗೊಂಡಿದೆ ಎಂದು ಸಣ್ಣ ನೀರಾವರಿ ಸಚಿವ ಟಿ.ಬಿ. ಜಯಚಂದ್ರ ಅವರು ಸದನಕ್ಕೆ ತಿಳಿಸಿದರು. ಸಣ್ಣ ನೀರಾವರಿ ಇಲಾಖೆಯಿಂದ ಅಂತರ್ಜಲ ಕುಸಿಯುತ್ತಿರುವ ಜಿಲ್ಲೆಗಳಲ್ಲಿ ನೈಸರ್ಗಿಕ ನದಿ ಕೊಳಗಳಲ್ಲಿ ಅಡ್ಡಲಾಗಿ ಚೆಕ್ಡ್ಯಾಮ್, ಪಿಕ್ಅಪ್, ಬಾಂದಾರ ಮತ್ತು ಬ್ರಿಡ್ಜ್ ಕಂ ಬಾಂದಾರ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ನೀಲಗಿರಿ ಮತ್ತು ಅಕೇಶಿಯಾ ಮರಗಳು ನಿಷೇಧ:
ರಾಜ್ಯದಲ್ಲಿ ಹೆಚ್ಚಾಗಿ ಬೆಳೆದಿರುವ ನೀಲಗಿರಿ ಮತ್ತು ಅಕೇಶಿಯಾ ಮರಗಳು ಅಂತರ್ಜಲ ಮಟ್ಟದ ಕುಸಿತಕ್ಕೆ ಕಾರಣವೆಂಬುದನ್ನು ಮನಗಂಡು ರಾಜ್ಯದಲ್ಲಿ ಈ ಮರಗಳನ್ನು ನೆಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಅದೇಶ ಹೊರಡಿಸಿದೆ ಎಂದು ಅರಣ್ಯ ಸಚಿವ ಬಿ. ರಮನಾಥ ರೈ ಅವರು ತಿಳಿಸಿದರು.
ಮಾಧ್ಯಮಗಳ ಮೇಲೆ ಕ್ರಮ
ಇತ್ತೀಚೆಗೆ ಮನರಂಜನೆ ವಾಹಿನಿಗಳು ಸೇರಿದಂತೆ ಸುದ್ದಿವಾಹಿನಿಗಳು ಸಹ ಮಕ್ಕಳು ಮತ್ತು ಮಹಿಳೆಯರ ಮೇಲೆ ದುಷ್ಪಾರಿಣಾಮ ಬೀರುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಜೀ ಕನ್ನಡ ಟಿವಿಯಲ್ಲಿ ಪ್ರಸಾರವಾಗುವ ಅಂಜಲಿ, ಗಂಗಾ ಮತ್ತು ಸ್ಟಾರ್ ಸುವರ್ಣ ವಾಹಿನಿಯ ನೀಲಿ ಧಾರವಾಹಿಗಳಲ್ಲಿ ಮೂಢನಂಬಿಕೆ, ದೆವ್ವ, ವಿಧವೆ ಮುಂತಾಗಿ ಬಿಂಬಿಸುತ್ತಿರುವ ಕುರಿತು ವಾಹಿನಿಗಳಿಗೆ ನೋಟೀಸ್ ನೀಡಲಾಗಿದೆ. ಇದುವರೆಗೂ ಯಾವುದೇ ಉತ್ತರ ಬಂದಿಲ್ಲದ ಕಾರಣ ಅಂತಿಮ ತೀರ್ಮಾನ ಕೈಗೊಳ್ಳಲು ಮುಂದಿನ ಸಭೆಯ ಮೂಲಕ ಕೇಂದ್ರ ವಾರ್ತಾ ಮತ್ತು ಪ್ರಸಾರ ಮಂತ್ರಾಲಯಕ್ಕೆ ಶಿಫಾರಸ್ಸು ಮಾಡಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.
ಯಶಸ್ವಿನಿ ಯೋಜನೆಯಡಿ ಆರೋಗ್ಯ ಭಾಗ್ಯ
ರಾಜ್ಯದ ಎಲ್ಲಾ ಕೃಷಿಕರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಯಶಸ್ವಿನಿ ಯೋಜನೆಯಡಿ ಆರೋಗ್ಯ ನೀಡಬೇಕೆಂಬುದು ಸರ್ಕಾರ ಉದ್ದೇಶವಾಗಿದೆ ಎಂದು ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ಅವರು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು. ಯಶಸ್ವಿನಿ ಯೋಜನೆಯಡಿ ರೋಗಿಗಳಿಗೆ 2 ಲಕ್ಷದ ಒಳಗೆ ಸೀಮಿತವಾಗಿ ಆರೋಗ್ಯ ಸೇವೆಯನ್ನು ನೀಡಲಾಗುತ್ತಿದೆ. ಆದ್ದರಿಂದ ಈ ಮಿತಿಯನ್ನು ತೆಗೆದು ರೋಗಿ ಸಂಪೂರ್ಣವಾಗಿ ಗುಣಮುಖವಾಗುವ ತನಕ ತಗಲುವ ವೆಚ್ಚವನ್ನು ಭರಿಸಬೇಕೆಂದು ಸರ್ಕಾರದ ಉದ್ದೇಶವಾಗಿದೆ ಎಂದರು.
20 ದಶಲಕ್ಷ ಟನ್ ಎಂ. ಸ್ಯಾಂಡ್ ಉತ್ಪಾದನೆ
ರಾಜ್ಯದಲ್ಲಿ ಪ್ರಸ್ತುತ 164 ಎಂ-ಸ್ಯಾಂಡ್ ತಯಾರಿಸುವ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಅಂದಾಜು 20 ದಶಲಕ್ಷ ಟನ್ ಎಂ. ಸ್ಯಾಂಡ್ ಉತ್ಪಾದನೆಯಾಗುತ್ತಿದ್ದು, ಸಾರ್ವಜನಿಕರಿಗೆ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ಪೂರೈಸಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ ಹೇಳಿದರು. ಸರ್ಕಾರದ ಲೋಕೋಪಯೋಗಿ ಇಲಾಖೆಯಿಂದ ಗುತ್ತಿಗೆಯ ಒಟ್ಟು ಮೊತ್ತ ರೂ 10.00 ಕೋಟಿಗಿಂತ ಮೇಲ್ಪಟ್ಟಿರುವ ಎಲ್ಲಾ ಕಾಮಗಾರಿಗಳಲ್ಲಿ ಕಡ್ಡಾಯವಾಗಿ ಉತ್ಪಾದಿತ ಮರಳನ್ನು ಬಳಸಲು ತಿಳಿಸಲಾಗಿದೆ ಎಂದರು.
ಭೂಸ್ವಾಧೀನಪಡಿಸಿಕೊಂಡ ಜಮೀನು ಹಂಚಿಕೆ ಇಲ್ಲ
ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಭೂಸ್ವಾಧೀನಪಡಿಸಿಕೊಂಡಿರುವ ಜಮೀನುಗಳಲ್ಲಿ ಯಾವುದೇ ಜಮೀನು ಹಂಚಿಕೆಗೆ ಲಭ್ಯವಿರುವುದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್. ವಿ. ದೇಶಪಾಂಡೆ ಅವರು ತಿಳಿಸಿದರು. 1979 ಬೇ ಸಾಲಿನಲ್ಲಿ ಕುಂಬಳಗೂಡು 1 ನೇ ಹಂತಕ್ಕಾಗಿ 135-04 ಎಕರೆ ಹಾಗೂ 1982ನೇ ಸಾಲಿನಲ್ಲಿ ಕುಂಬಳಗೂಡು 2ನೇ ಹಂತಕ್ಕಾತಿ 86-66 ಎಕರೆ ಜಮೀನನ್ನು ಅಭಿವೃದ್ಧಿಪಡಿಸಿ, ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 398 ಬಿ.ಇಡಿ. ಕಾಲೇಜು
ರಾಜ್ಯದಲ್ಲಿ 398 ಬಿ.ಇಡಿ. ಕಾಲೇಜು: 2016-17 ನೇ ಸಾಲಿನಲ್ಲಿ 9 ಸರ್ಕಾರಿ, 52 ಅನುದಾನಿತ, 337 ಖಾಸಗಿ ಕಾಲೇಜುಗಳು ಸೇರಿದಂತೆ ಒಟ್ಟಾರೆ 398 ಬಿ.ಇಡಿ. ಕಾಲೇಜುಗಳು ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ತಿಳಿಸಿದರು.
ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ಇತರರಿಗೆ ಅವಕಾಶವಿಲ್ಲ
ಅಲ್ಪಸಂಖ್ಯಾತರಿಗೆ ಸೇರಿದ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂದವರಿಗೆ ನೇಮಕಾತಿಗೆ ಸಂಬಂಧಿಸಿದಂತೆ ಮೀಸಲಾತಿ ನೀಡಲು ಅವಕಾಶವಿರುವುದಿಲ್ಲವೆಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ತಿಳಿಸಿದರು.
ರಾಜ್ಯಾದ್ಯಂತ 316 ಮೇವು ಬ್ಯಾಂಕ್ ಸ್ಥಾಪನೆ
ರಾಜ್ಯದಲ್ಲಿ 316 ಮೇವು ಬ್ಯಾಂಕ್ಗಳನ್ನು ಸ್ಥಾಪಿಸಲಾಗಿದ್ದು, ಗೋಶಾಲೆಗಳಲ್ಲಿ ಜಾನುವಾರುಗಳಿಗೆ ನೆರಳು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 53.42 ಲಕ್ಷ ಮೆಟ್ರಿಕ್ ಟನ್ ಮೇವು ದಾಸ್ತಾನು ಲಭ್ಯವಿದ್ದು, ಮುಂದಿನ 11 ವಾರಗಳಿಗೆ ಲಭ್ಯವಿದ್ದು, ಮೇವನ್ನು ರೈತರಿಗೆ ಕೆ.ಜಿ.ಗೆ 2 ರೂ ನಂತೆ, ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಹಾಗೂ ರಾಜ್ಯಾದ್ಯಂತ 78 ಗೋಶಾಲೆಗಳನ್ನು ಸಹ ತೆರೆಯಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ತಿಳಿಸಿದರು.