ಕರ್ನಾಟಕದಲ್ಲಿ ಹೊಸ ಸರ್ಕಾರ, ಸೋಮವಾರದಿಂದ ಅಧಿವೇಶನ
ಬೆಂಗಳೂರು, ಮೇ 22; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮುಖ್ಯಂಮತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೊದಲ ಅಧಿವೇಶನ ಸೋಮವಾರ ಆರಂಭವಾಗಲಿದೆ. ಆರ್. ವಿ. ದೇಶಪಾಂಡೆ ಹಂಗಾಮಿ ಸ್ಪೀಕರ್ ಆಗಿ ಕಲಾಪ ನಡೆಸಲಿದ್ದಾರೆ.
ಶಾಸಕರ ಪ್ರಮಾಣ ವಚನ, ಹೊಸ ಸ್ಪೀಕರ್ ಆಯ್ಕೆ, ಬಹುಮತ ಸಾಬೀತು ಮಾಡಲು ಮೂರು ದಿನಗಳ ಕಾಲ ವಿಧಾನಸಭೆ ಕಲಾಪ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮೊದಲ ಅಧಿವೇಶನ ಇದಾಗಿದೆ. ವಿಧಾನಸಭೆಯಲ್ಲಿ ಪ್ರತಿಪಕ್ಷವಾಗಿರುವ ಬಿಜೆಪಿ ಸಹ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಬೇಕಿದೆ.

2023ರ ಚುನಾವಣೆಯಲ್ಲಿ ಹೊಸದಾಗಿ ಆಯ್ಕೆಯಾಗಿರುವ ಬಿಜೆಪಿಯ 66, ಕಾಂಗ್ರೆಸ್ನ 135, ಜೆಡಿಎಸ್ನ 19, ನಾಲ್ವರು ಪಕ್ಷೇತರ ಶಾಸಕರು ಹಂಗಾಮಿ ಸ್ಪೀಕರ್ ಆರ್. ವಿ. ದೇಶಪಾಂಡೆ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಬಳಿಕ ಆಡಳಿತ ಪಕ್ಷವಾದ ಕಾಂಗ್ರೆಸ್ ನೂತನ ಸ್ಪೀಕರ್ ಆಯ್ಕೆ ಮಾಡಲಿದೆ.
11 ಗಂಟೆಗೆ ಅಧಿವೇಶನ ಆರಂಭ; ಮೇ 22ರಿಂದ 24 ರ ತನಕ ವಿಧಾನಸಭೆ ಅಧಿವೇಶನ ನಡೆಯಲಿದೆ. ಸೋಮವಾರ ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭವಾಗಲಿದೆ. ಹಿಂದಿನ ವಿಧಾನಸಭೆಯ ಅವಧಿ ಮೇ 23ಕ್ಕೆ ಮುಕ್ತಾಯಗೊಳ್ಳಲಿದೆ. ಅಷ್ಟರೊಳಗೆ ಎಲ್ಲಾ ಶಾಸಕರ ಪ್ರಮಾಣ ವಚನ ಪೂರ್ಣಗೊಂಡು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಬೇಕಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೊಸ ಬಜೆಟ್ ಮಂಡನೆ ಮಾಡಬೇಕಿದೆ. ಜುಲೈ ತಿಂಗಳಿನಲ್ಲಿ ಬಜೆಟ್ ಮಂಡನೆ ಮಾಡಲಾಗುತ್ತದೆ ಎಂದು ಮುಖ್ಯಂಮಂತ್ರಿ ಸಿದ್ದರಾಮಯ್ಯ ಶನಿವಾರ ಮೊದಲ ಸಚಿವ ಸಂಪುಟ ಸಭೆಯ ಬಳಿಕ ಮಾಹಿತಿ ನೀಡಿದ್ದಾರೆ.
ವಿಧಾನಸಭೆ ಕಲಾಪ ಮುನ್ನಡೆಸುವ ಸ್ಪೀಕರ್ ಯಾರು? ಎಂಬುದು ಎಲ್ಲರ ಪ್ರಶ್ನೆ. ಕಾಂಗ್ರೆಸ್ನಲ್ಲಿ ಹಲವು ಹಿರಿಯ ಶಾಸಕರು ಇದ್ದಾರೆ. ಆದರೆ ಸಚಿವ ಸ್ಥಾನ ಬಯಸುವ ಶಾಸಕರು ಸ್ಪೀಕರ್ ಆಗಲು ಹಿಂದೇಟು ಹಾಕುತ್ತಾರೆ. ಆರ್. ವಿ. ದೇಶಪಾಂಡೆ. ಹೆಚ್. ಕೆ. ಪಾಟೀಲ್ ಮತ್ತು ಟಿ. ಬಿ. ಜಯಚಂದ್ರ ಹೆಸರು ಸ್ಪೀಕರ್ ಹುದ್ದೆಗೆ ಕೇಳಿ ಬರುತ್ತಿದೆ. ಟಿ. ಬಿ. ಜಯಚಂದ್ರ ಕಾನೂನು ಸಚಿವರಾಗಿ ಕೆಲಸ ಮಾಡಿದ ಅನುಭವ ಇದೆ. ಆದ್ದರಿಂದ ಅವರನ್ನು ಸ್ಫೀಕರ್ ಮಾಡುವ ಸಾಧ್ಯತೆ ಇದೆ.
ಮೂರು ದಿನಗಳ ಕಾಲ ವಿಧಾನಸಭೆ ಅಧಿವೇಶನ ನಡೆಯುವುದರಿಂದ ವಿಧಾನಸೌಧದ 2 ಕಿ. ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಸಮಯದಲ್ಲಿ ಯಾವುದೇ ಪ್ರತಿಭಟನೆಗಳನ್ನು ಮಾಡುವಂತಿಲ್ಲ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸಿ. ಎಚ್. ಪ್ರತಾಪ್ ರೆಡ್ಡಿ ಈ ಕುರಿತು ಆದೇಶ ಹೊರಡಿಸಿದ್ದಾರೆ.
ಹಳೆ ಮತ್ತು ಹೊಸ ಸದಸ್ಯರು; 2018ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದ ಹಲವು ಸದಸ್ಯರು ಈ ಬಾರಿ ಸೋಲು ಕಂಡಿದ್ದಾರೆ. ಹಲವರು ರಾಜಕೀಯ ನಿವೃತ್ತಿ ಪಡೆದಿದ್ದಾರೆ. ಆದ್ದರಿಂದ ಹಲವು ಹಿರಿಯ ಶಾಸಕರ ಅನುಪಸ್ಥಿತಿ ಸದನವನ್ನು ಕಾಡಲಿದೆ. ಈ ಬಾರಿ ಗೆಲುವು ಸಾಧಿಸಿದ ಅನೇಕ ಹೊಸ ಸದಸ್ಯರು ಮೊದಲ ಬಾರಿಗೆ ಅಧಿವೇಶನಕ್ಕೆ ಆಗಮಿಸುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕೆ. ಜಿ. ಬೋಪಯ್ಯ. ಕಾಂಗ್ರೆಸ್ನಿಂದ ರಮೇಶ್ ಕುಮಾರ್ ಮುಂತಾದ ಹಿರಿಯ ನಾಯಕರ ಅನುಪಸ್ಥಿತಿ ಸದನವನ್ನು ಕಾಡಲಿದೆ.












Click it and Unblock the Notifications