Get Updates
Get notified of breaking news, exclusive insights, and must-see stories!

Karnataka Jobs: ರಾಜಕೀಯ ಬದಿಗಿಟ್ಟು ಕನ್ನಡಿಗನಾಗಿ ಬರೆಯುತ್ತಿದ್ದೇನೆ: ಸಿದ್ದರಾಮಯ್ಯಗೆ ನಿಖಿಲ್ ಕುಮಾರಸ್ವಾಮಿ ವಿಶೇಷ ಮನವಿ

ಬೆಂಗಳೂರು: ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಯುವಜನತೆಯನ್ನು ಉದ್ದೇಶಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ದೀರ್ಘವಾದ ಸ್ಪಷ್ಟನೆ ನೀಡಿದ್ದು, ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಅವರ ಈ ಹೇಳಿಕೆಗೆ ತಿರುಗೇಟು ನೀಡಿರುವ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, "ರಾಜಕೀಯ ಬದಿಗಿಟ್ಟು ವ್ಯವಸ್ಥೆಯನ್ನು ಸರಿಪಡಿಸೋಣ" ಎಂದು 7 ಪ್ರಮುಖ ಸುಧಾರಣೆಗಳ ಪಟ್ಟಿಯನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್‌ನಲ್ಲೇನಿದೆ

ಧಾರವಾಡದ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇನೆ ಎಂದಿರುವ ಸಿಎಂ ಸಿದ್ದರಾಮಯ್ಯ, ಯುವಜನರ ಆತಂಕ ಮತ್ತು ಅಹವಾಲುಗಳನ್ನು ಅರ್ಥಮಾಡಿಕೊಂಡಿದ್ದೇನೆ ಎಂದು ಭರವಸೆ ನೀಡಿದ್ದಾರೆ. "ನಾವು ಅಧಿಕಾರಕ್ಕೆ ಬಂದಾಗ 2.64 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿಯಿದ್ದವು. ಇಷ್ಟು ದೊಡ್ಡ ಸಂಖ್ಯೆಯ ಹುದ್ದೆಗಳು ಖಾಲಿ ಉಳಿಯಲು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ (2019-2023) ನೇಮಕಾತಿಯಲ್ಲಿ ನಡೆದ ಅಕ್ರಮಗಳು ಮತ್ತು ಭ್ರಷ್ಟಾಚಾರಗಳೇ ನೇರ ಕಾರಣ. ವಿರೋಧ ಪಕ್ಷದ ನಾಯಕರು ನಿರಪರಾಧಿ ವಿದ್ಯಾರ್ಥಿಗಳಿಗೆ ತಪ್ಪು ಮಾರ್ಗದರ್ಶನ ಮಾಡಿ, ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವುದು ವಿಷಾದನೀಯ" ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Nikhil Kumaraswamy

ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣಗಳು ನಡೆಯುತ್ತಿದ್ದ ಕಾರಣದಿಂದ ಕೆಲವು ನೇಮಕಾತಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು ಎಂದು ಸ್ಪಷ್ಟಪಡಿಸಿರುವ ಅವರು, "ಕಳೆದ ಎರಡೂವರೆ ವರ್ಷಗಳಲ್ಲಿ ನಮ್ಮ ಸರ್ಕಾರ ವಿವಿಧ ಇಲಾಖೆಗಳಲ್ಲಿ 40,000ಕ್ಕೂ ಹೆಚ್ಚು ನೇಮಕಾತಿಗಳನ್ನು ಮಾಡಿದೆ. ಅಭ್ಯರ್ಥಿಗಳ ಕಷ್ಟವನ್ನು ಅರಿತು ಮುಂಬರುವ ನೇಮಕಾತಿಗಳಿಗೆ ಗರಿಷ್ಠ ವಯೋಮಿತಿಯನ್ನು 5 ವರ್ಷ ಸಡಿಲಗೊಳಿಸಲಾಗಿದೆ. ಉಳಿದ ಖಾಲಿ ಹುದ್ದೆಗಳನ್ನು ಪಾರದರ್ಶಕವಾಗಿ, ಕಾಲಮಿತಿಯೊಳಗೆ ಭರ್ತಿ ಮಾಡಲಾಗುವುದು" ಎಂದು ಸಿಎಂ ವಾಗ್ದಾನ ಮಾಡಿದ್ದಾರೆ.

ಮುಖ್ಯಮಂತ್ರಿಗಳ ಈ ಟ್ವೀಟ್‌ಗೆ ನೇರವಾಗಿ ಪ್ರತಿಕ್ರಿಯಿಸಿರುವ ನಿಖಿಲ್ ಕುಮಾರಸ್ವಾಮಿ, "ರಾಜಕೀಯವನ್ನು ಬದಿಗಿಟ್ಟು ಒಬ್ಬ ಕನ್ನಡಿಗನಾಗಿ ಬರೆಯುತ್ತಿದ್ದೇನೆ" ಎಂದು ಪತ್ರ ಆರಂಭಿಸಿರುವ ಅವರು, ವ್ಯವಸ್ಥೆಯ ಸುಧಾರಣೆಗೆ 7 ಪ್ರಮುಖ ಸಲಹೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.

"ಕರ್ನಾಟಕದ ಉದ್ಯೋಗ ನೇಮಕಾತಿ ಬಿಕ್ಕಟ್ಟು ಕೇವಲ ಒಂದು ಸರ್ಕಾರದ ಅಥವಾ ಒಂದು ಅವಧಿಯ ಸಮಸ್ಯೆಯಲ್ಲ ಎಂದಿರುವ ನಿಖಿಲ್, ಕಳೆದ ಎರಡು ದಶಕಗಳಿಂದ ನಡೆಯುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆ, ಹಗರಣಗಳು, ಪರೀಕ್ಷೆಗಳ ರದ್ದತಿ ಮತ್ತು ದಿನೇ ದಿನೇ ಹೆಚ್ಚುತ್ತಿರುವ ಖಾಲಿ ಹುದ್ದೆಗಳು ಯುವಜನತೆಯ ಆತ್ಮವಿಶ್ವಾಸವನ್ನು ಬುಡಮೇಲು ಮಾಡಿವೆ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದು ಇಡೀ ವ್ಯವಸ್ಥೆಯ ಸೋಲು: "ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರ್‌ನಿಂದ ಹಿಡಿದು ಪೊಲೀಸ್, ಪಿಎಸ್‌ಐ, ಎಫ್‌ಡಿಎ/ಎಸ್‌ಡಿಎ ಪರೀಕ್ಷೆಗಳವರೆಗಿನ ವಿಫಲತೆಗಳು ಕೇವಲ ವ್ಯಕ್ತಿಗತ ಲೋಪಗಳಲ್ಲ; ಇದು ಇಡೀ ವ್ಯವಸ್ಥೆಯ ಸೋಲು. ಇಲ್ಲಿ ಪ್ರತಿಯೊಬ್ಬ ಭಾಗಿದಾರರೂ ಜವಾಬ್ದಾರಿಯನ್ನು ಹೊರಬೇಕಿದೆ. ಮಂಜೂರಾದ ಹುದ್ದೆಗಳಲ್ಲಿ ಇಂದು ಸುಮಾರು ಮೂರನೇ ಒಂದು ಭಾಗದಷ್ಟು ಸ್ಥಾನಗಳು ಖಾಲಿ ಇವೆ. ಹತ್ತು ವರ್ಷಗಳ ಹಿಂದೆ ಶೇ. 24ರಷ್ಟಿದ್ದ ಖಾಲಿ ಹುದ್ದೆಗಳ ಪ್ರಮಾಣ ಇಂದು ಶೇ. 33ಕ್ಕೆ ಏರಿಕೆಯಾಗಿದೆ. ಇದು ದಶಕಗಳಿಂದ ಬೆಳೆದು ಬಂದಿರುವ ಆಳವಾದ ರಚನಾತ್ಮಕ ಬಿಕ್ಕಟ್ಟು. ಒಬ್ಬರನ್ನೊಬ್ಬರು ದೂಷಿಸುವುದನ್ನು ನಿಲ್ಲಿಸಿ, ಈಗ ಸುಧಾರಣೆಯತ್ತ ಹೆಜ್ಜೆ ಇಡಬೇಕಾದ ಸಮಯ ಬಂದಿದೆ" ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೆಪಿಎಸ್‌ಸಿ ಸುಧಾರಣೆಗೆ ನಿಖಿಲ್ ನೀಡಿದ 7 ಸಲಹೆಗಳು

ಭಾರತದ ತಂತ್ರಜ್ಞಾನದ ರಾಜಧಾನಿಯಾಗಿರುವ ಕರ್ನಾಟಕವು ಪಾರದರ್ಶಕ ನೇಮಕಾತಿಯಲ್ಲಿ ರಾಷ್ಟ್ರೀಯ ಮಾನದಂಡವನ್ನು ಸ್ಥಾಪಿಸಬೇಕಿದೆ ಎಂದು ಒತ್ತಾಯಿಸಿರುವ ನಿಖಿಲ್ ಕುಮಾರಸ್ವಾಮಿ, ಈ ಕೆಳಗಿನ 7 ರಚನಾತ್ಮಕ ಬದಲಾವಣೆಗಳನ್ನು ಜಾರಿಗೆ ತರುವಂತೆ ಆಗ್ರಹಿಸಿದ್ದಾರೆ:

1. ಶಾಸನಬದ್ಧ ವಾರ್ಷಿಕ ಉದ್ಯೋಗ ಕ್ಯಾಲೆಂಡರ್: ಪ್ರತಿ ವರ್ಷ ಜನವರಿಯಲ್ಲಿ ಅಧಿಸೂಚನೆ, ಪರೀಕ್ಷೆ, ಫಲಿತಾಂಶ ಮತ್ತು ನೇಮಕಾತಿಯ ನಿಖರ ದಿನಾಂಕಗಳನ್ನು ಒಳಗೊಂಡ ಕ್ಯಾಲೆಂಡರ್ ಬಿಡುಗಡೆಯಾಗಬೇಕು.

2. ಮಿಷನ್ ಮೋಡ್ ಬ್ಯಾಕ್‌ಲಾಗ್ ತೆರವು: ಖಾಲಿ ಇರುವ ಹುದ್ದೆಗಳನ್ನು ಒಂದು ನಿರ್ದಿಷ್ಟ ಕಾಲಮಿತಿಯಲ್ಲಿ ಭರ್ತಿ ಮಾಡಲು ಪಾರದರ್ಶಕ 'ಮಿಷನ್ ಮೋಡ್' ಯೋಜನೆ ರೂಪಿಸಬೇಕು.

3. ಗಣಕೀಕೃತ ಪರೀಕ್ಷೆ (CBT): ಮಾನವ ಹಸ್ತಕ್ಷೇಪ ಮತ್ತು ವಿಳಂಬವನ್ನು ತಪ್ಪಿಸಲು ಸಾಧ್ಯವಿರುವ ಕಡೆಗಳಲ್ಲಿ ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ನಡೆಸಬೇಕು.

4. ಬಯೋಮೆಟ್ರಿಕ್ ದೃಢೀಕರಣ: ಪಾರದರ್ಶಕತೆ ಕಾಪಾಡಲು ಮತ್ತು ನಕಲಿ ಅಭ್ಯರ್ಥಿಗಳನ್ನು ತಡೆಯಲು ನೇಮಕಾತಿಯ ಪ್ರತಿ ಹಂತದಲ್ಲೂ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ಬರಬೇಕು.

5. ಸುರಕ್ಷಿತ ಡಿಜಿಟಲ್ ಪ್ರಶ್ನೆಪತ್ರಿಕೆ ವಿತರಣೆ: ಎನ್‌ಕ್ರಿಪ್ಟ್ ಮಾಡಿದ ಡಿಜಿಟಲ್ ಪ್ರಶ್ನೆ ಪತ್ರಿಕೆಗಳ ಬಳಕೆ ಮತ್ತು ಸಿಸಿಟಿವಿ ಕಣ್ಗಾವಲಿರುವ ಮೊಬೈಲ್ ರಹಿತ ಪರೀಕ್ಷಾ ಕೇಂದ್ರಗಳನ್ನು ಕಡ್ಡಾಯಗೊಳಿಸಬೇಕು.

6. ಸಾರ್ವಜನಿಕ ಡ್ಯಾಶ್‌ಬೋರ್ಡ್: ಪ್ರತಿಯೊಂದು ಇಲಾಖೆಯ ನೇಮಕಾತಿ ಪ್ರಕ್ರಿಯೆಯ ಪ್ರಗತಿಯನ್ನು ಜನಸಾಮಾನ್ಯರು ಗಮನಿಸುವಂತೆ ಡಿಜಿಟಲ್ ಡ್ಯಾಶ್‌ಬೋರ್ಡ್ ಸಿದ್ಧಪಡಿಸಬೇಕು.

7. ಕರ್ನಾಟಕ ನೇಮಕಾತಿ ಸಮಗ್ರತಾ ಕಾಯ್ದೆ: ಮಹಾರಾಷ್ಟ್ರದ ಮಾದರಿಯಲ್ಲಿ ಪರೀಕ್ಷಾ ಅಕ್ರಮ ಮತ್ತು ಪೇಪರ್ ಸೋರಿಕೆ ವಿರುದ್ಧ ಕಠಿಣವಾದ, ಜಾಮೀನು ರಹಿತ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಬೇಕು.

ಯುವಕರು ಕೇಳುತ್ತಿರುವುದು ಅನುಕಂಪವಲ್ಲ

"ಇಂದು ತೆಲಂಗಾಣ ತಂತ್ರಜ್ಞಾನದ ಮೂಲಕ ಆಧುನೀಕರಣಗೊಂಡಿದೆ, ಉತ್ತರ ಪ್ರದೇಶ ವಾರ್ಷಿಕ ಕ್ಯಾಲೆಂಡರ್‌ಗೆ ಬದ್ಧವಾಗಿದೆ ಮತ್ತು ಮಹಾರಾಷ್ಟ್ರ ಕಠಿಣ ಕಾನೂನುಗಳನ್ನು ಜಾರಿಗೆ ತಂದಿದೆ. ಒಬ್ಬ ಯುವ ನಾಯಕನಾಗಿ ನಾನು ರಾಜಕೀಯವನ್ನು ಮೀರಿ ಯೋಚಿಸುತ್ತಿದ್ದೇನೆ, ಏಕೆಂದರೆ ಇದು ನಮ್ಮ ಯುವಜನತೆಯ ಉಜ್ವಲ ಭವಿಷ್ಯದ ಪ್ರಶ್ನೆ. ವ್ಯವಸ್ಥೆಯ ಮೇಲೆ ನಂಬಿಕೆ ಮೂಡಿಸುವಂತಹ ಯಾವುದೇ ಸುಧಾರಣೆಗೆ ನಾನು ಸಂಪೂರ್ಣ ಬೆಂಬಲ ನೀಡಲು ಸಿದ್ಧನಿದ್ದೇನೆ. ನಮ್ಮ ಯುವಜನತೆ ಕೇಳುತ್ತಿರುವುದು ಅನುಕಂಪವಲ್ಲ; ಅವರು ನಿಶ್ಚಿತತೆ, ನ್ಯಾಯ ಮತ್ತು ಘನತೆಯನ್ನು ಕೇಳುತ್ತಿದ್ದಾರೆ. ಇದನ್ನು ನಾವು ಶಾಶ್ವತವಾಗಿ ಸರಿಪಡಿಸೋಣ" ಎಂದು ನಿಖಿಲ್ ಕುಮಾರಸ್ವಾಮಿ ತಮ್ಮ ಪತ್ರದಲ್ಲಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+