ಲೋಕಸಭಾ ಚುನಾವಣೆಗೆ ನಾನು ಸಹ ಪ್ರಬಲ ಆಕಾಂಕ್ಷಿ: ಪ್ರಮುಖ ಕ್ಷೇತ್ರದ ಹೆಸರು ಬಹಿರಂಗಪಡಿಸಿದ ಬಿಜೆಪಿ ಮಾಜಿ ಶಾಸಕ ರೇಣುಕಾಚಾರ್ಯ
ಹೊನ್ನಾಳಿ, ಜೂನ್ 28: ಮುಂಬರುವ ಲೋಕಸಭಾ ಚುನಾವಣೆಗೆ ನಾನು ಸಹ ಪ್ರಬಲ ಆಕಾಂಕ್ಷಿ ಎಂದು ಬಿಜೆಪಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನಾನು ಸಹ ಪ್ರಬಲ ಆಕಾಂಕ್ಷಿ. ಈ ಮಾತನ್ನು ದಾವಣಗೆರೆ ಜಿಲ್ಲೆಯ ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರು ಹಿರಿಯರು ಹಾಗೂ ಜನರ ಒತ್ತಾಯಕ್ಕೆ ಮಣಿದು ಹೇಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ರಾಜ್ಯಾಧ್ಯಕ್ಷ ಸ್ಥಾನಕ್ಕೂ ಆಕಾಂಕ್ಷಿ ಎಂದ ರೇಣುಕಾಚಾರ್ಯ
ತಮ್ಮದೇ ಪಕ್ಷದ ನಾಯಕರ ವಿರುದ್ಧ ನಿನ್ನೆ ಕಿಡಿಕಾರಿದ್ದ ರೇಣುಕಾಚಾರ್ಯ, ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿಲ್ಲ. ಕೆಲವು ವ್ಯಕ್ತಿಗಳ ನಿರ್ಧಾರದಿಂದ ನಾವು ಹೀನಾಯವಾಗಿ ಸೋಲು ಕಂಡೆವು ಎಂದು ಹೇಳಿದ್ದಾರೆ.
ನಮ್ಮ ಪಕ್ಷದೊಳಗಿನ ಒಳ ಹೊಡೆತವಿತ್ತು. ಇದು ಕಾಂಗ್ರೆಸ್ ಗೆಲುವಿಗೆ ಸಹಾಯ ಮಾಡಿತು ಎಂದು ಅವರು ಹೇಳಿದ್ದಾರೆ. ಈ ಕೂಡಲೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬದಲಾವಣೆ ಆಗಬೇಕು. ರಾಜ್ಯದ ಎಲ್ಲಾ ಸಮುದಾಯದವರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ನಾಯಕನನ್ನು ನೇಮಿಸಬೇಕು.
ನಾನು ಸಹ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದೇನೆ. ಅವಕಾಶ ಸಿಕ್ಕರೆ ನಾನು ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸಲು ಸಿದ್ಧ ಎಂದು ಅವರು ತಿಳಿಸಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪರ ಪರ ಹಲವು ಬಾರಿ ಮಾತನಾಡಿದ್ದೇನೆ. ಬಿಎಸ್ವೈ ಸೈಕಲ್ ತುಳಿದು ಪಕ್ಷ ಕಟ್ಟಿದ್ದರು. ಆದ್ರೆ ಈಗ ಕೆಲ ಪಡಿ ನಾಯಕರು ಹೈಫೈ ಕಾರಿನಲ್ಲಿ ಓಡಾಡುತ್ತಾರೆ. ಇಂಥವರಿಂದ ಪಕ್ಷ ಕಟ್ಟಲು ಸಾಧ್ಯವಿಲ್ಲ ಎಂದು ರೇಣುಕಾಚಾರ್ಯ ಗುಡುಗಿದರು.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಬಿಎಸ್ ಯಡಿಯೂರಪ್ಪರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಆದರೂ ಅವರು ಹೆದರಲಿಲ್ಲ. ಎಲ್ಲವನ್ನೂ ಮೀರಿ ಅವರು ಪಕ್ಷ ಕಟ್ಟಿದ್ದರು. ಪಕ್ಷದಲ್ಲಿ ಇಬ್ಬರು ಶಾಸಕರಾಗಿದ್ದಾಗ ಒಬ್ಬರು ರಾಜೀನಾಮೆ ಕೊಟ್ಟು ಹೋದರು. ಆಗಲೂ ಯಡಿಯೂರಪ್ಪ ಅವರೂ ಪಕ್ಷ ಕಟ್ಟಿ ಸೈ ಎನಿಸಿಕೊಂಡರು. ಅವರೊಬ್ಬ ಪ್ರಶ್ನಾತೀತ ನಾಯಕ ಎಂದು ಹೇಳಿದ್ದಾರೆ.
ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಬಾರದಿತ್ತು. ಈ ವಿಚಾರವಾಗಿ ನಾವು ಹಲವು ಬಾರಿ ಹೇಳಿದೆವು. ನಾವು ಬಿಜೆಪಿ ಹೈಕಮಾಂಡ್ ಅನ್ನೂ ಕೇಳಿದೆವು. ಆದರೂ, ಯಾರೂ ನಮ್ಮ ಮಾತನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ ಎಂದು ರೇಣುಕಾಚಾರ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಯಡಿಯೂರಪ್ಪರ ಬಿಟ್ಟು ಕರ್ನಾಟಕದಲ್ಲಿ ಬಿಜೆಪಿ ಕಟ್ಟುತ್ತೇವೆಂದು ಕೆಲವರು ಹೋದರು. ಈ ವಿಚಾರವಾಗಿ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದರು. ಕರ್ನಾಟಕದಲ್ಲಿ ಯಡಿಯೂರಪ್ಪನವರ ಕಣ್ಣೀರಲ್ಲಿ ಬಿಜೆಪಿ ಪಕ್ಷ ತೊಳೆದು ಹೋಗುತ್ತದೆ ಎಂದು ಸ್ವಾಮೀಜಿ ಮಾತನಾಡಿದ್ದರು. ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಈ ಮಾತು ಸತ್ಯವಾಗಿದೆ. ಇದೆಲ್ಲವನ್ನೂ ನಮ್ಮ ಪಕ್ಷದ ಕೆಲವರು ಅರ್ಥ ಮಾಡಿಕೊಳ್ಳಲಿಲ್ಲ ಟೀಕಿಸಿದ್ದಾರೆ.
ಈಗ ಕಾಂಗ್ರೆಸ್ ಎಂಎಲ್ಸಿ ಆಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೈಕಾಲು ಗಟ್ಟಿ ಇರಲಿಲ್ವಾ? ಜಗದೀಶ್ ಶೆಟ್ಟರ್ಗೆ ಟಿಕೆಟ್ ಯಾಕೆ ಕೊಡಲಿಲ್ಲ ಎಂದು ಪ್ರಶ್ನಿಸಿದರು.
ಕೆ ಎಸ್ ಈಶ್ವರಪ್ಪರಿಗೆ ಯಾಕೆ ಟಿಕೆಟ್ ಕೊಡಲಿಲ್ಲ. ಅವರಿಬ್ಬರೂ ಸಮರ್ಥರಿದ್ದರೂ ಕೆಲವರು ಅವರನ್ನು ಕಡೆಗಣಿಸಿದರು. ಅವರ ಪತ್ನಿಗೆ ಟಿಕೆಟ್ ಕೊಡ್ತೇವೆ ಅಂದರು. ಆದರೆ, ಜಗದೀಶ್ ಶೆಟ್ಟರ್ಗೆ ಟಿಕೆಟ್ ಕೊಟ್ಟಿದ್ದರೆ ಏನಾಗುತಿತ್ತು ಎಂದು ರೇಣುಕಾಚಾರ್ಯ ಕೇಳಿದ್ದಾರೆ.
ಕಾಂಗ್ರೆಸ್ಸಿನವರು ಜನವರಿ ತಿಂಗಳಿನಿಂದಲೇ ಐದು ಗ್ಯಾರಂಟಿ ಘೋಷಣೆ ಮಾಡಿ ಪ್ರಚಾರ ಮಾಡಿದರು. ನಮ್ಮ ಪಕ್ಷದವರು ಡಾ ಸುಧಾಕರ್ ಕೈಗೆ ಪ್ರಣಾಳಿಕೆ ತಯಾರಿಸಲು ಕೊಟ್ಟರು. ಈ ಕೆಲಸಕ್ಕೆ ಹಿರಿಯ ನಾಯಕರು ಯಾರೂ ಇರಲಿಲ್ವಾ? ಎಂದು ಪ್ರಶ್ನಿಸಿದ್ದಾರೆ.
ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಅರ್ಧ ಲೀಟರ್ ಹಾಲು ಕೊಡುತ್ತೇವೆ ಎಂಬ ಭರವಸೆ ನೀಡಿದರು. ನಾವು ಅಧಿಕಾರದಲ್ಲಿದ್ದಾಗ ಮೂರು ಸಿಲಿಂಡರ್ ಕೊಡಲಿಲ್ಲ, 10 ಕೆಜಿ ಅಕ್ಕಿ ಕೊಡಲಿಲ್ಲ, ಅರ್ಧ ಲೀಟರ್ ಹಾಲು ಯಾಕೆ ಕೊಡಲಿಲ್ಲ ಎಂದು ರೇಣುಕಾಚಾರ್ಯ ಕೇಳಿದರು.












Click it and Unblock the Notifications