ಎಣ್ಣೆ ಅಂಗಡಿ ಓಪನ್ ಮಾಡಿಸಿ ಎಂದ ವೈದ್ಯನಿಗೆ ಹೈಕೋರ್ಟ್ ಕೊಟ್ಟ ಶಾಕ್
ಬೆಂಗಳೂರು , ಏಪ್ರಿಲ್ 7: ಲಾಕ್ಡೌನ್ ನಿಂದ ಕುಡುಕರು ಮಾನಸಿಕವಾಗಿ ಕುಗ್ಗಿದ್ದು ಈ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದ ಮನೋ ವೈದ್ಯನಿಗೆ ಕರ್ನಾಟಕ ಹೈಕೋರ್ಟ್ ಬರೋಬ್ಬರಿ ಶಾಖ್ ಕೊಟ್ಟಿದೆ.
ಕುಡುಕರ ಹಿತ ದೃಷ್ಟಿಯಿಂದ ಮದ್ಯ ಮಾರಾಟಕ್ಕೆ ಅನುಮತಿ ಕೋರಿ ಪಿಐಎಲ್ ಸಲ್ಲಿಸಿದ್ದ ಹುಬ್ಬಳ್ಳಿಯ ವಿನೋದ್ ಕುಲಕರ್ಣಿ ಎನ್ನುವ ಮನೋ ವೈದ್ಯರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿ ಮುಖ್ಯ ನ್ಯಾಯಮೂರ್ತಿ ಅಭಯ್ ಓಕಾ ಮತ್ತು ನ್ಯಾ ಬಿ.ವಿ.ನಾಗರತ್ನ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ಆದೇಶಿಸಿದೆ.
ಅಲ್ಲದೇ ಈ ದಂಡದ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಓಕಾ ಮತ್ತು ನ್ಯಾ ಬಿ.ವಿ.ನಾಗರತ್ನ ನೇತೃತ್ವದ ನ್ಯಾಯಪೀಠ ಆದೇಶ ನೀಡಿದೆ.

ವೈದ್ಯನಿಗೆ ತರಾಟೆಗೆ ತಗೆದುಕೊಂಡ ನ್ಯಾಯಮೂರ್ತಿಗಳು
ಕೊರೊನಾ ಸೋಂಕು ಹರಡುತ್ತಿರುವ ಈ ಸಮಯದಲ್ಲಿ ಆಹಾರ, ಚಿಕಿತ್ಸೆ ಇತ್ಯಾದಿಗಳ ಬಗ್ಗೆ ಆದ್ಯತೆ ನೀಡಬೇಕೇ ವಿನಃ, ವೈದ್ಯರಾಗಿ ಮದ್ಯದ ಬಗ್ಗೆ ಕಾಳಜಿ ತೋರಿದ್ದಕ್ಕೆ ಅವರನ್ನು ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡರು ಎಂದು ತಿಳಿದು ಬಂದಿದೆ. ಅಲ್ಲದೇ ವಿನೋದ್ ಅವರು ಈ ಮೇಲ್ ಮೂಲಕ ಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ದರು. ಈ ಬಗ್ಗೆಯೂ ನ್ಯಾಯಮೂರ್ತಿಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ. ಅರ್ಜಿದಾರರು ನ್ಯಾಯಾಲಯದ ಸಮಯವನ್ನು ಹಾಳು ಮಾಡಿದ್ದಾರೆ ಎಂದು ದಂಡ ವಿಧಿಸಿದ್ದಾರೆ.

ಅರ್ಜಿಯಲ್ಲಿ ಏನು ಕೇಳಿಕೊಂಡಿದ್ದರು?
ಲಾಕ್ಡೌನ್ನಿಂದ ಕುಡಿಯುವುದನ್ನೇ ಹವ್ಯಾಸ ಮಾಡಿಕೊಂಡಿರುವವರಿಗೆ ಆರೋಗ್ಯ ಹದಗೆಡುತ್ತಿದೆ. ಇದರಿಂದ ಅವರ ಕೈ ಕಾಲುಗಳು ನಡುಗುತ್ತಿವೆ. ಅಲ್ಲದೇ ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಾಗಿ ನಿಗದಿತ ಸಮಯದಲ್ಲಿ ಆದರೂ ಮದ್ಯ ಮಾರಾಟಕ್ಕೆ ಅವಕಾಶ ಮಾಡಲು ಸರ್ಕಾರಕ್ಕೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಕೇಳಿಕೊಂಡಿದ್ದರು.

ಹುಬ್ಬಳ್ಳಿಯ ಮನೋವೈದ್ಯ
ಹುಬ್ಬಳ್ಳಿಯ ಮನೋವೈದ್ಯ ಡಾ.ವಿನೋದ್ ಕುಲಕರ್ಣಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಲಾಗಿದೆ. ಈ ಮೂಲಕ ಲಾಕ್ಡೌನ್ ಮುಗಿಯುವವರೆಗೂ ಕುಡುಕರಿಗೆ ಎಣ್ಣೆ ಸಿಗುವುದಿಲ್ಲ ಎಂಬುದು ಮತ್ತಷ್ಟು ಖಾತ್ರಿ ಆದಂತಾಗಿದೆ.

ಸರ್ಕಾರದ ಮೇಲೆ ಒತ್ತಡ
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಣ್ಣೆ ಹೊಡೆಯುವವರು ಏಪ್ರಿಲ್ ಹದಿನಾಲ್ಕರ ತನಕ ಕಾಯಲೇ ಬೇಕು ಎಂದು ನಗುನಗುತ್ತಲೇ ಉತ್ತರಿಸಿದ್ದರು. ಮದ್ಯದ ಅಂಗಡಿಯನ್ನು ಷರತ್ತಿನ ಮೇಲೆ ಓಪನ್ ಮಾಡಲು ಅನುವು ಮಾಡಿಕೊಡಲು, ಸರಕಾರಕ್ಕೆ ತುಂಬಾ ಒತ್ತಡವಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications