ಜನಪ್ರತಿನಿಧಿಗಳ ಪ್ರಕರಣದಲ್ಲಿ ಸಾಕ್ಷಿಗಳಿಗೆ ರಕ್ಷಣೆ: ಹೈಕೋರ್ಟ್ ಸೂಚನೆ
ಬೆಂಗಳೂರು, ಡಿಸೆಂಬರ್ 2: ಸುಪ್ರೀಂಕೋರ್ಟ್ ಅಂಗೀಕರಿಸಿರುವ ಸಾಕ್ಷಿದಾರರ ಸಂರಕ್ಷಣಾ ಯೋಜನೆ 2018ಕ್ಕೆ ಅನುಗುಣವಾಗಿ ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳಲ್ಲಿ ಸಾಕ್ಷಿದಾರರಿಗೆ ರಕ್ಷಣೆ ಒದಗಿಸಲು ಸಮರ್ಥ ಪ್ರಾಧಿಕಾರ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಕೇಂದ್ರರ ಸರ್ಕಾರದ ವಿರುದ್ಧದ ಮಹೇಂದರ್ ಚಾವ್ಲಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ 2018ರ ಡಿಸೆಂಬರ್ 5ರಂದು ಕೇಂದ್ರ ಸರ್ಕಾರ ರಚಿಸಿದ್ದ 'ಸಾಕ್ಷಿದಾರರ ಸಂರಕ್ಷಣಾ ಯೋಜನೆ 2018'ಕ್ಕೆ ಅಂಗೀಕಾರ ನೀಡಿತ್ತು. ಇದನ್ನು ಕೇಂದ್ರ ಸರ್ಕಾರ, ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಯಥಾವತ್ತಾಗಿ ಅನುಷ್ಠಾನಕ್ಕೆ ತರಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಜನಪ್ರತಿನಿಧಿಗಳ ವಿರುದ್ಧ ಬಾಕಿ ಇರುವ ಪ್ರಕರಣಗಳ ಮೇಲ್ವಿಚಾರಣೆಗೆ ಸ್ವಯಂಪ್ರೇರಿತ ಅರ್ಜಿ ದಾಖಲು ಮಾಡಿಕೊಂಡು ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರನ್ನು ಒಳಗೊಂಡ ನ್ಯಾಯಪೀಠ, ರಾಜ್ಯ ಸರ್ಕಾರಕ್ಕೆ ಈ ಸೂಚನೆ ನೀಡಿದೆ.

ಸಂಸದರು ಮತ್ತು ಶಾಸಕರ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ಅನೇಕ ಪ್ರಕರಣಗಳು ಬಾಕಿ ಇವೆ. ವಿಚಾರಣೆ ಸಂದರ್ಭದಲ್ಲಿ ಅವರು ಸಾಕ್ಷ್ಯಗಳನ್ನು ದುರ್ಬಲಗೊಳಿಸುವ ಸಾಧ್ಯತೆಗಳಿವೆ. ಹೀಗಾಗಿ ಸಾಕ್ಷ್ಯ ಸಂರಕ್ಷಣಾ ಯೋಜನೆಯನ್ನು ಜಾರಿಗೊಳಿಸುವುದು ಅಗತ್ಯವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಈ ಸಂಬಂಧ ಮೆಮೋ ಸಲ್ಲಿಕೆ ಮಾಡಿರುವ ರಾಜ್ಯ ಸರ್ಕಾರ ಪ್ರತಿ ಜಿಲ್ಲೆಗಳಲ್ಲಿಯೂ ಸಮರ್ಥ ಪ್ರಾಧಿಕಾರ ರಚಿಸಲಾಗುವುದು ಎಂದು ತಿಳಿಸಿತು. ಬೆಂಗಳೂರು ನಗರದಲ್ಲಿ ಮೊದಲು ಪ್ರಾಧಿಕಾರ ರಚಿಸಬೇಕು. ಎರಡು ವಾರಗಳಲ್ಲಿ ಇದು ಸಾಧ್ಯವಾಗಬೇಕು. ಬಳಿಕ ಉಳಿದ ಜಿಲ್ಲೆಗಳಲ್ಲಿ ಪ್ರಾಧಿಕಾರ ರಚಿಸಬೇಕು ಎಂದು ಪೀಠ ನಿರ್ದೇಶಿಸಿತು.
ಈ ಯೋಜನೆಯ ಬಗ್ಗೆ ಸಾಕ್ಷಿದಾರರಿಗೆ ಮಾಹಿತಿ ಒದಗಿಸಬೇಕು. ರಾಜಕಾರಣಿಗಳ ವಿರುದ್ಧ ಸಾಕ್ಷ್ಯ ಹೇಳುವುದಕ್ಕೆ ಬೆದರಿಕೆ ಸಾಧ್ಯತೆ ಇದೆ ಎಂದು ಅವರು ಅರ್ಜಿ ಸಲ್ಲಿಸಿದರೆ ಅವರಿಗೆ ರಕ್ಷಣೆ ನೀಡುವುದು ತನಿಖಾಧಿಕಾರಿಗಳ ಕರ್ತವ್ಯ. ಸಾಕ್ಷಿದಾರರಿಗೆ ರಕ್ಷಣೆ ಬೇಕಾಗಬಹುದು ಎಂಬುದನ್ನು ನ್ಯಾಯಾಧೀಶರು ಕೂಡ ಪರಿಗಣಿಸಬಹುದು. ಸಾಕ್ಷಿದಾರರು ಅರ್ಜಿ ಸಲ್ಲಿಸದೆ ಇದ್ದರೂ ನ್ಯಾಯಾಧೀಶರು ರಕ್ಷಣೆಗೆ ಆದೇಶಿಸಿದರೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಪೀಠ ಆದೇಶಿಸಿತು.












Click it and Unblock the Notifications