112 ತುರ್ತು ಸ್ಪಂದನಾ ಸಹಾಯ ವ್ಯವಸ್ಥೆಗೆ ಹೈಕೋರ್ಟ್ ಶಬ್ಬಾಸ್ ಗಿರಿ
ಸಂಕಷ್ಟದಲ್ಲಿ ಸಿಲುಕಿದ ನಾಗರಿಕರಿಗೆ ನೆರವು ಕಲ್ಪಿಸಲು ಸರ್ಕಾರ ಜಾರಿಗೆ ತಂದಿರುವ ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ (ಇಆರ್ಎಸ್ಎಸ್) ಗೆ ಕರ್ನಾಟಕ ಹೈಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದೆ.
ಬೆಂಗಳೂರು, ಫೆಬ್ರವರಿ 22; ಅಪಘಾತ ಸೇರಿದಂತೆ ಸಂಕಷ್ಟದಲ್ಲಿ ಸಿಲುಕಿದ ನಾಗರಿಕರಿಗೆ ನೆರವು ಕಲ್ಪಿಸಲು ಸರ್ಕಾರ ಜಾರಿಗೆ ತಂದಿರುವ ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ (ಇಆರ್ಎಸ್ಎಸ್) ಮತ್ತು ಸುರಕ್ಷಾ ಮೊಬೈಲ್ ಆ್ಯಪ್ ಸಾಕಷ್ಟು ಪರಿಣಾಮಕಾರಿಯಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಶಬ್ಬಾಸ್ ಗಿರಿ ನೀಡಿದೆ.
ಅಲ್ಲದೇ, ಅದರಲ್ಲಿ ಸಣ್ಣ ಪುಟ್ಟ ದೋಷಗಳಿದ್ದರೂ ಅವುಗಳನ್ನು ಕಾಲಾನುಕ್ರಮದಲ್ಲಿ ಸರಿಪಡಿಸಬಹುದು ಎಂದು ಹೇಳಿ ಆ ಕುರಿತ ಅರ್ಜಿ ವಿಲೇವಾರಿ ಮಾಡಿದೆ. ಇಆರ್ಎಸ್ಎಸ್ ವ್ಯವಸ್ಥೆ ಸುಧಾರಿಸಲು ಮತ್ತು ಮೊಬೈಲ್ಗಳಲ್ಲಿ ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯಗೊಳಿಸದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ಎನ್. ಟಿ. ಅರುಣ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಳೆ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಸರ್ಕಾರಿ ವಕೀಲರು ಈ ಸಂಬಂಧ ಪ್ರಮಾಣ ಪತ್ರವನ್ನು ಸಲ್ಲಿಸಿದರು ಮತ್ತು ಇಆರ್ಎಸ್ಎಸ್ ವ್ಯವಸ್ಥೆಯನ್ನು ಕಾಲ ಕಾಲಕ್ಕೆ ಪರಿಶೀಲಿಸಲಾಗುತ್ತಿದೆ. ಈ ವ್ಯವಸ್ಥೆಯಡಿ ಕಲ್ಪಿಸಿರುವ 112 ಸಹಾಯವಾಣಿ ಏಕ ಕಾಲದಲ್ಲಿ 182 ಕರೆ ಸ್ವೀಕರಿಸುವ ನಿಟ್ಟಿನಲ್ಲಿ ಕಮಾಂಡ್ ಸೆಂಟರ್ಗಳನ್ನು ಸುಸಜ್ಜಿತಗೊಳಿಸಲಾಗಿದೆ.
ಈ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡರೆ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ನೆರವು ಕೋರುವವರ ಸರ್ಕಾರಿ ಅಭಿವೃದ್ಧಿಪಡಿಸಿರುವ ಸುರಕ್ಷಾ ಆ್ಯಪ್ ಬಳಸಿಕೊಂಡು ವಿಡಿಯೋ ಸಹಿತ ಕುಂದು ಕೊರತೆ ಸಲ್ಲಿಸಬಹುದು ಎಂದು ಹೇಳಿದರು.

ಜಿಪಿಎಸ್ ಮೂಲಕ ಅವರ ಸ್ಥಳ ಪತ್ತೆ
ಪ್ರಮಾಣ ಪತ್ರದಲ್ಲಿ ಜಿಪಿಎಸ್ ಮೂಲಕ ಕರೆ ಮಾಡಿದರವ ಸ್ಥಳ ಪತ್ತೆ ಹಚ್ಚಲಾಗುತ್ತದೆ. ಅವರ ಸ್ನೇಹಿತರು ಮತ್ತು ಕಟುಂಬ ಸದಸ್ಯರಿಗೆ ಎಚ್ಚರಿಕೆಯ ಕರೆ ಹೋಗುತ್ತದೆ. ಪೊಲೀಸ್ ನಿಯಂತ್ರಣ ಕೊಠಡಿ ಸಂಪರ್ಕಿಸಲು ಅಂಗವಿಕಲರು ಅದರಲ್ಲೂ ಮೂಕರು/ ಕಿವುಡರಿಗೆ ಈ ಆ್ಯಪ್ ನೆರವಾಗುತ್ತದೆ. ಜತೆಗೆ ಹೊಸ ವ್ಯವಸ್ಥೆಯಲ್ಲಿ ಹಲವು ವಿನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದ್ದು, ಅದರಿಂದ ರೋಗಿಗಳಿಗೆ ತ್ವರಿತವಾಗಿ ಅವರು ಕೋರಿದ ಎಲ್ಲ ರೀತಿಯ ನೆರವು ನೀಡಲು ಸಾಧ್ಯವಿದೆ ಎಂದು ತಿಳಿಸಲಾಗಿದೆ.

ಸುರಕ್ಷಾ ಆ್ಯಪ್ ಸೇವೆ
ಪ್ರಮಾಣ ಪತ್ರವನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಳೆ ನೇತೃತ್ವದ ವಿಭಾಗೀಯ ಪೀಠ, ಇಆರ್ಎಸ್ಎಸ್ ಪರಿಣಾಮಕಾರಿ ಜಾರಿಗೆ ರಾಜ್ಯ ಸರ್ಕಾರ ಉತ್ತಮ ಪ್ರಯತ್ನ ನಡೆಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿತು.
ಪ್ರತಿಯೊಂದು ವ್ಯವಸ್ಥೆಯಿಂದ ಶೇ.100ರಷ್ಟು ಕಾರ್ಯಾದಕ್ಷತೆ ನಿರೀಕ್ಷಿಸಲು ಸಾಧ್ಯವಿಲ್ಲ. ಸಣ್ಣಪುಟ್ಟ ಲೋಪಗಳಿರಬಹುದು. ಅದನ್ನುತಜ್ಞರು ಪರಿಹರಿಸುತ್ತಾರೆ. ತಾಂತ್ರಿಕ ವಿಚಾರಗಳನ್ನು ನ್ಯಾಯಾಲಯವು ನಿರ್ಧರಿಸಲಾಗದು. ಆದರೆ, ಇಆರ್ಎಸ್ಎಸ್ ಮತ್ತು ಸುರಕ್ಷಾ ಆ್ಯಪ್ ಸೇವೆಗಳ ಬಗ್ಗೆ ಅರ್ಜಿದಾರರು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿದೆ.

ಅರ್ಜಿದಾರರ ಮನವಿ ಏನು?
ಅರ್ಜಿದಾರರು, ತುರ್ತು ಪರಿಸ್ಥಿತಿಯಲ್ಲಿ 112 ಸಹಾಯವಾಣಿಗೆ ಕರೆ ಮಾಡಿದರೆ ಹಲವು ಆಯ್ಕೆ ನೀಡುತ್ತದೆ. ಅದನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಕರೆ ಸ್ಥಗಿತವಾಗುತ್ತದೆ. ಆದ್ದರಿಂದ 112 ವ್ಯವಸ್ಥೆ ಸುಧಾರಿಸಬೇಕಿದೆ. ಕೇಂದ್ರ ಸರ್ಕಾರವು ಎಲ್ಲಾ ಮೊಬೈಲ್ ಪೋನ್ಗಳಲ್ಲಿ ಕಡ್ಡಾಯವಾಗಿ ಪ್ಯಾನಿಕ್ ಬಟನ್ ಅಳವಡಿಸಲು ಆದೇಶಿಸಿದೆ. ಆದರೆ, ಅಪ್ರಾಪ್ತರು, ಮಕ್ಕಳು ಹಾಗೂ ಕುಚೇಷ್ಟೆಗಾರರು ಅದನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ಆಕ್ಷೇಪ ಎತ್ತಿದ್ದರು. ಇದರಿಂದ ನಿಜವಾಗಿಯೂ ಸಂಕಷ್ಟದಲ್ಲಿರುವ ನಾಗರಿಕರಿಗೆ ನೆರವು ಕಲ್ಪಿಸಲು ತೊಂದರೆಯಾಗುತ್ತದೆ. ಆದ್ದರಿಂದ ಮೊಬೈಲ್ಗಳಲ್ಲಿ ಪ್ಯಾನಿಕ್ ಬಟನ್ ಕಡ್ಡಾಯ ಅಳವಡಿಕೆಯನ್ನು ಕಡ್ಡಾಯಗೊಳಿಸದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ನ್ಯಾಯಾಲಯವನ್ನು ಅರ್ಜಿದಾರರು ಕೋರಿದ್ದರು.

ಕೇಂದ್ರ ಸರ್ಕಾರದ ಸಹಯೋಗ
ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ 112 ತುರ್ತು ಸೇವಾ ಸ್ಪಂದನೆ ವ್ಯವಸ್ಥೆ ಜಾರಿಗೆ ತಂದಿವೆ. ಕೇಂದ್ರ ಸರ್ಕಾರವು ಪೊಲೀಸ್, ಆರೋಗ್ಯ, ಅಗ್ನಿಶಾಮಕ, ಸೇರಿದಂತೆ ಇನ್ನಿತರ ತುರ್ತು ಸೇವೆಗಳು ಒಂದೇ ನಂಬರ್ ಅಡಿಯಲ್ಲಿ ಸಿಗುವಂತೆ ಮಾಡಲು 112 ತುರ್ತು ರಕ್ಷಣಾ ಪಡೆಯನ್ನು ರಚನೆ ಮಾಡಿದೆ.
ತುರ್ತು ಸಂದರ್ಭಗಳಲ್ಲಿ ಜನರು 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆಯಬಹುದಾಗಿದೆ. ಈ ಪಡೆಗಾಗಿಯೇ ವಿಶೇಷ ವಾಹನಗಳನ್ನು ಕೇಂದ್ರ ಗೃಹ ಸಚಿವಾಲಯದ ಮೂಲಕ ರಾಜ್ಯಗಳಿಗೆ ನೀಡಲಾಗಿದೆ. ಈ ವಾಹನ ಸಂಕಷ್ಟದಲ್ಲಿ ಸಿಲುಕಿದ ಜನರಿಗೆ ಸಹಾಯ ಮಾಡಲು ತಕ್ಷಣ ಸ್ಥಳಕ್ಕೆ ಧಾವಿಸುತ್ತವೆ.












Click it and Unblock the Notifications