ಗ್ರಾಮ ಪಂಚಾಯಿತಿ ಚುನಾವಣೆ: ಅವಿರೋಧ ಆಯ್ಕೆಯಾದ ಅಭ್ಯರ್ಥಿಗಳ ಮೇಲೆ ಆಯೋಗ ಕಣ್ಣು
ಬೆಂಗಳೂರು, ಡಿಸೆಂಬರ್ 17: ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಸುಮಾರು 48,000ಕ್ಕೂ ಅಧಿಕ ಸೀಟುಗಳಿಗೆ ಮತದಾನ ನಡೆಯಲಿದೆ. ಅದರಲ್ಲಿ ಈಗಾಗಲೇ 4,300ಕ್ಕೂ ಹೆಚ್ಚು ಮಂದಿ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆದರೆ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಅವಿರೋಧ ಆಯ್ಕೆಯಾಗುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿದೆ. ಅವಿರೋಧವಾಗಿ ಆಯ್ಕೆಯಾಗುವ ವೇಳೆ ಅಭ್ಯರ್ಥಿಗಳು ಕಾನೂನು ಬಾಹಿರ ಮಾದರಿಗಳನ್ನು ಅನುಸರಿಸಿದ್ದರೇ ಎಂಬುದನ್ನು ಖಾತರಿಪಡಿಸಿಕೊಂಡ ಬಳಿಕವೇ ಅವರು ವಿಜಯಶಾಲಿಗಳೆಂದು ಘೋಷಿಸಿ ಗೆಲುವಿನ ಪ್ರಮಾಣಪತ್ರ ನೀಡಲಿದೆ.
ಅಭ್ಯರ್ಥಿಗಳು ಹಣ ಅಥವಾ ತೋಳ್ಬಲ ಬಳಸಿ ಜಯಗಳಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಿಡಿಸಕೊಳ್ಳಲು ಇದೇ ಮೊದಲ ಬಾರಿಗೆ ಆಯೋಗವು ಡಬಲ್ ಚೆಕ್ ಮತ್ತು ಎಲ್ಲ ವಿವರಗಳನ್ನು ವಿವರವಾಗಿ ಪರಿಶೀಲಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಮುಂದೆ ಓದಿ.

ಸ್ಥಾನಗಳ ಹರಾಜು
ಗ್ರಾಮ ಪಂಚಾಯಿತಿ ಚುನಾವಣೆಗಳು ಘೋಷಣೆಯಾದ ಬಳಿಕ ಅನೇಕ ಪಂಚಾಯಿತಿಗಳಲ್ಲಿ ಲಕ್ಷಗಟ್ಟಲೆ ರೂಪಾಯಿ ಹಣಕ್ಕೆ ಗ್ರಾಮ ಪಂಚಾಯಿತಿ ಸ್ಥಾನ ಮತ್ತು ಅಧ್ಯಕ್ಷ ಸ್ಥಾನಗಳನ್ನು ಹರಾಜು ಹಾಕುವ ಘಟನೆಗಳು ವರದಿಯಾಗಿವೆ. ಚುನಾವಣೆಯಲ್ಲಿ ಒಂದು ಸ್ಥಾನಕ್ಕೆ ಹರಾಜಿನಲ್ಲಿ ಇಂತಿಷ್ಟು ಹಣ ತೆತ್ತು ಅದನ್ನು ಪಡೆದುಕೊಂಡರೆ ಅವರಿಗೆ ಎದುರಾಳಿಗಳೇ ಇರುವುದಿಲ್ಲ. ಹೀಗಾಗಿ ಅವಿರೋಧವಾಗಿ ಆಯ್ಕೆಯಾಗುತ್ತಾರೆ. ಈ ರೀತಿಯ ಘಟನೆಗಳು ಅನೇಕ ನಡೆದಿರುವುದರಿಂದ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ರಾಜಕಾರಣಿಗಳ ಪ್ರಭಾವ
ಡಿಸೆಂಬರ್ 22ರಂದು ಮೊದಲ ಹಂತದಲ್ಲಿ 117 ತಾಲ್ಲೂಕುಗಳ 3019 ಪಂಚಾಯಿತಿಗಳಲ್ಲಿ ಚುನಾವಣೆ ನಡೆಯಲಿದ್ದು, ಪಟ್ಟು 92,121 ಸ್ಥಾನಗಳಿಗೆ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಆದರೆ ಈಗಾಗಲೇ ಸಾವಿರಾರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಇಷ್ಟು ಸಂಖ್ಯೆಯಲ್ಲಿ ಅವಿರೋಧ ಆಯ್ಕೆ ನಡೆದಿದೆ. ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಥಾನಗಳ ಹರಾಜು ನಡೆದಿದ್ದರೆ, ಇನ್ನು ಕೆಲವು ಕಡೆ ತಮ್ಮ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗುವಂತೆ ರಾಜಕಾರಣಿಗಳು ಪ್ರಭಾವ ಬೀರಿದ್ದಾರೆ ಎಂದು 'ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ.

ಗೂಂಡಾ ಕಾಯ್ದೆ ಪ್ರಕರಣ
ಯಾವುದೇ ಒತ್ತಡ ತಂತ್ರ ಅಥವಾ ಬೇರೆ ಅಕ್ರಮ ಮಾರ್ಗದ ಮೂಲಕ ಅವಿರೋಧ ಆಯ್ಕೆಯಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಸೂಚನೆ ನೀಡಲಾಗಿದೆ. ಒಂದು ವೇಳೆ ಅಂತಹ ಪುರಾವೆಗಳು ಕಂಡುಬಂದರೆ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯುಕ್ತ ಬಿ. ಬಸವರಾಜು ಹೇಳಿದ್ದಾರೆ.
Recommended Video

ಮೊದಲ ಬಾರಿ ವ್ಯವಸ್ಥೆ
'ಅವಿರೋಧ ಆಯ್ಕೆಯಾದ ಅಭ್ಯರ್ಥಿಗಳಿರುವ ಗ್ರಾಮಕ್ಕೆ ನಮ್ಮ ಅಧಿಕಾರಿಗಳು ಅಥವಾ ರಿಟರ್ನಿಂಗ್ ಅಧಿಕಾರಿ ತೆರಳಿ ಬೇರೆ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಲೆಂದೇ ತಮ್ಮ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆಯೇ ಎಂಬುದನ್ನು ಪರಿಶೀಲಿಸುವ ಡಬಲ್ ಚೆಕ್ ವ್ಯವಸ್ಥೆಯನ್ನು ಮೊದಲ ಬಾರಿಗೆ ಜಾರಿಗೆ ತರಲಾಗಿದೆ. ತಪ್ಪಿತಸ್ಥರು ಎಂದು ಕಂಡುಬಂದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡದಂತೆ ಸೂಚಿಸಲಾಗಿದೆ' ಎಂದು ತಿಳಿಸಿದ್ದಾರೆ.












Click it and Unblock the Notifications