ಕರ್ನಾಟಕದಲ್ಲಿ ಸಮುದ್ರಾಹಾರ ಹೋಟೆಲ್ ತೆರೆಯಲು ಸರ್ಕಾರ ಸಜ್ಜು!
ಬೆಂಗಳೂರು ಆಗಸ್ಟ್ 18: ಕರ್ನಾಟಕ ಮೀನುಗಾರಿಕೆ ಇಲಾಖೆ ವತಿಯಿಂದ ಕರ್ನಾಟಕದಾದ್ಯಂತ ಮೀನು ಊಟದ ಮನೆಗಳನ್ನು (ಹೋಟೆಲ್) ಹಾಗೂ ಮೀನು ಮರಿ ಸಾಕಾಣೆ ಕೇಂದ್ರಗಳನ್ನು ವಿಸ್ತರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಎಸ್. ಅಂಗಾರ ಹೇಳಿದರು.
ವಿಧಾನಸೌಧದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಸಚಿವರು, ರಾಜ್ಯ ಸರ್ಕಾರ ಮೀನು ಉತ್ಪಾದನೆ ಹೆಚ್ಚಿಸಲು, ರಾಜ್ಯದ ಎಲ್ಲ ಕಡೆಗಳಲ್ಲಿ ಮೀನು ಊಟ ಪೂರೈಸಲು ಹಾಗೂ ಮೀನುಗಾರಿಕೆ ಉತ್ತೇಜನಕ್ಕೆ ಸರ್ಕಾರ ಹಲವು ಕ್ರಮ ಕೈಗೊಳ್ಳುತ್ತಿದೆ ಎಂದರು. ಈ ಮೂಲಕ ರಾಜ್ಯದ ಮೀನು ಪ್ರಿಯರಿಗೆ ಸರ್ಕಾರ ಕೊಡುಗೆ ನೀಡುತ್ತಿದೆ.
ಬೆಂಗಳೂರು ಸಹಿತ ಬೆಸ್ಕಾಂ ವ್ಯಾಪ್ತಿಯಲ್ಲಿ ಎರಡು ದಿನ ವಿದ್ಯುತ್ ಕಡಿತ: ಎಲ್ಲೆಲ್ಲಿ ವ್ಯತ್ಯಯ?
ರಾಜ್ಯದಲ್ಲಿ ಮೀನುಗಾರಿಕಾ ಇಲಾಖೆಯಿಂದ ಬೆಂಗಳೂರು ಹಾಗೂ ಇನ್ನಿತರ ಕಡೆಗಳಲ್ಲಿ ಮೀನಿನ ಊಟದ ಹೋಟೆಲ್ಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಹೀಗಿದ್ದರೂ ಅಗತ್ಯ ಅನುದಾನ ನೆರವಿನ ಕೊರತೆ ಹಿನ್ನೆಲೆಯಲ್ಲಿ ಅವುಗಳನ್ನು ರಾಜ್ಯಾದ್ಯಂತ ವಿಸ್ತರಿಸಲು ಸಾಧ್ಯ ಆಗಿರಲಿಲ್ಲ. ಇದೀಗ ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ ಮೀನು ಹೋಟೆಲ್ಗಳನ್ನು ವಿಸ್ತರಿಸಲಿದ್ದೇವೆ. ಸದ್ಯ ಬೆಂಗಳೂರಿನ ಕೆಲವೆಡೆ ಮೀನು ಊಟ ಹೋಟೆಲ್ಗಳ ಸ್ಥಾಪಿಸುವ ಚಿಂತನೆಯಲ್ಲಿದ್ದೇವೆ ಎಂದು ತಿಳಿಸಿದರು.
ಹೋಟೆಲ್ಗೆ ಜಾಗ ನೀಡಿಲು ಬಿಡಿಎ ಒಪ್ಪಿಗೆ
ಮೊದಲ ಹಂತವೆಂಬಂತೆ ರಾಜ್ಯ ರಾಜಧಾನಿ ಬೆಂಗಳೂರಿನ ಐದು ಕಡೆಗಳಲ್ಲಿ ಮೀನುಗಾರಿಕಾ ಇಲಾಖೆ ವತಿಯಿಂದ ನೂತನ ಮೀನಿನ ಊಟದ ಹೋಟೆಲ್ ಆರಂಭಿಸಲಿದ್ದೇವೆ. ಇದಕ್ಕೆ ಕೆರೆಗಳಿರುವ ಕಡೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ವು ಜಾಗ ನೀಡಲು ಒಪ್ಪಿಗೆ ಕೊಟ್ಟಿದೆ. ಆ ಜಾಗಗಳಲ್ಲಿ ಊಟದ ಮನೆ ತೆರೆಯಲು ಯೋಜನೆ ರೂಪಿಸುತ್ತಿದ್ದೇವೆ ಎಂದು ಹೇಳಿದರು.
ಮೀನು ಸಾಕಾಣಿಕೆ ಕೇಂದ್ರ ವಿಸ್ತರಣೆ
ರಾಜ್ಯದಲ್ಲಿ ಅಗತ್ಯದಷ್ಟು ಮೀನು ಲಭ್ಯತೆ ಇಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ಮೀನಿನ ಗರಿಷ್ಠ ಉತ್ಪಾದನೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಮೀನು ಮರಿ ಸಾಕಾಣಿಕೆ ಕೇಂದ್ರಗಳನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೆ.ಆರ್.ಎಸ್ ಆಲಮಟ್ಟಿ, ಲಿಂಗನಮಕ್ಕಿ, ಭದ್ರಾ ಸೇರಿದಂತೆ ರಾಜ್ಯದ ಹನ್ನೆರಡು ಪ್ರಮುಖ ಜಲಾಶಯಗಳಲ್ಲಿ ಗರಿಷ್ಟ ಪ್ರಮಾಣದ ಮೀನು ಉತ್ಪಾದನೆ ಮಾಡಲು ತೀರ್ಮಾನಿಸಿದೆ. ಈ ಮೂಲಕ ಕರ್ನಾಟಕದಲ್ಲಿ ಮತ್ಸ್ಯಕ್ರಾಂತಿ ನಡೆಯಲಿದೆ. ಈ ಎಲ್ಲ ಉದ್ದೇಶಗಳಿಗೆ ಬೇಕಾಗ ಅಗತ್ಯ ಪೂರ್ವ ತಯಾರಿಗಳನ್ನು ನಾವು ಮಾಡಿಕೊಂಡಿದ್ದೇವೆ ಎಂದು ಅವರು ವಿವರಿಸಿದರು.
ಒಳನಾಡು ಮೀನುಗಾರಿಕೆ ಅಭಿವೃದ್ಧಿ
ಕರ್ನಾಟಕದ ರಾಜ್ಯದ ಒಳನಾಡು ಪ್ರದೇಶದಲ್ಲೂ ಸಹ ಮೀನುಗಾರಿಕೆಯನ್ನು ಬೃಹತ್ ಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ ಇಲ್ಲಿನ ಸಾಕಾಣಿಕೆ ಕೇಂದ್ರಗಳಲ್ಲಿ ಮೀನು ಸಾಕಲು ನೆರೆ ರಾಜ್ಯಗಳಿಂದ ಮೀನು ಮರಿಗಳನ್ನು ಆಮದು ಮಾಡಿಕೊಳ್ಳಲಿದ್ದೇವೆ. ಕೆಲವು ಕಾರಣಗಳಿಂದ ಈವೆರೆಗೆ ಮೀನು ಮರಿಗಳನ್ನು ಆಮದು ಮಾಡಿಕೊಳ್ಳಲು ಆಗಿರಲಿಲ್ಲ. ಇನ್ನುಮುಂದೆ ನೆರೆಯ ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳ ಮೇಲಿದ್ದ ಮೀನು ಅವಲಂಬನೆಯನ್ನು ತಪ್ಪಿಸಲು ನಮ್ಮಲ್ಲೇ ಹೆಚ್ಚು ಮೀನು ಸಾಕಾಣಿಕಾ ಕೇಂದ್ರ ಸ್ಥಾಪನೆ ಮಾಡುತ್ತಿರುವುದು ಭವಿಷ್ಯದಲ್ಲಿ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಜಿಲ್ಲೆಗಳಿಗೆ ತಕ್ಕಂತೆ ಮೀನು ತಳಿ ಉತ್ಪಾದನೆ
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮೀನು ಉತ್ಪಾದಿಸಲಾಗುವುದು. ಇದರಲ್ಲಿ ಮುಖ್ಯವಾಗಿ ಆಯಾ ಜಿಲ್ಲೆಗಳಲ್ಲಿ ಲಭ್ಯವಿರುವ ಮೀನು ತಳಿಗಳ ಅನುಗುಣವಾಗಿ ಹೆಚ್ಚು ಮೀನುಗಳನ್ನು ಉತ್ಪಾದಿಸುವ ಉದ್ದೇಶ ಸರ್ಕಾರ ಹೊಂದಿದೆ. ಉದಾಹರಣೆಗೆ ಕರಾವಳಿಯ ದಕ್ಷಿಣ ಕನ್ನಡದಲ್ಲಿ ಮಡೆಂಜಿ, ಮರೆಂಜಿ ತಳಿಯ ಮೀನುಗಳು ಹೆಚ್ಚು. ಅವುಗಳ ರೀತಿಯಲ್ಲೇ ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಜಾತಿಯ ವಿಶೇಷ ಮೀನುಗಳಿದ್ದು, ಅವುಗಳನ್ನು ಅಭಿವೃದ್ಧಿಪಡಿಸುವ ಜತೆಗೆ ಉತ್ಪಾದನೆಯನ್ನು ಹೆಚ್ಚಿಸಲಿದ್ದೇವೆ ಎಂದು ಎಸ್.ಅಂಗಾರ ವಿವರಿಸಿದರು.
Recommended Video