ವಿಶ್ವಕರ್ಮ ವಿವಿ ಸ್ಥಾಪನೆಗೆ ಸರಕಾರ ಚಿಂತನೆ : ಸಿದ್ದರಾಮಯ್ಯ
ಬೆಂಗಳೂರು, ಸೆಪ್ಟೆಂಬರ್ 18: ವಿಶ್ವಕರ್ಮ ಸಮುದಾಯದ ಕಲೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿಶ್ವಕರ್ಮ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಸರಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾನುವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮುದಾಯಕ್ಕೆ ಹೆಚ್ಚಿನ ಆರ್ಥಿಕ ಸಹಾಯ ನೀಡಲಾಗುವುದು ಎಂದಿದ್ದಾರೆ.
ಅಲ್ಲದೆ ವಿಶ್ವಕರ್ಮ ಅಭಿವೃದ್ಧಿ ನಿಗಮ ನೀಡಿರುವ ಬೇಡಿಕೆಯ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು "ವಿಶ್ವಕರ್ಮ ಸಮುದಾಯದ ಜನರು ವಿಶೇಷ ಕಲೆಯನ್ನು ನೆಚ್ಚಿಕೊಂಡಿದ್ದಾರೆ. ಮನಸ್ಸಿನ ಕಲ್ಪನೆಯನ್ನು ವಾಸ್ತವಕ್ಕಿಳಿಸುವ ಕಲೆಯನ್ನು ವಿಶ್ವಕರ್ಮ ಸಮುದಾಯದವರು ಸಿದ್ದಿಸಿಕೊಂಡಿದ್ದಾರೆ. ವಿಶ್ವಕರ್ಮ ಜನಾಂಗದವರ ಕಲೆಯನ್ನು ಹೊರತೆಗೆಯಲು ಮತ್ತು ಉತ್ತೇಜಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ," ಎಂದು ಭರವಸೆ ನೀಡಿದ್ದಾರೆ.
ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು ಈಗಾಗಲೇ ಪ್ರತ್ಯೇಕ ನಿಗಮ ಸ್ಥಾಪಿಸಲಾಗಿದೆ. ಸಮುದಾಯದ ಆಕಾಂಕ್ಷಿಗಳಿಗೆ ರೂ.1.5 ಲಕ್ಷ ಕೌಶಲ್ಯ ಸುಧಾರಣೆ ಅನುದಾನ ನೀಡಲಾಗಿದೆ. ಸಮುದಾಯದ ನೆರವಿಗಾಗಿ ಪಂಚವೃತ್ತಿ ಆರ್ಥಿಕ ನೆರವು ಯೋಜನೆಯಲ್ಲಿ ನೀಡಲಾಗುತ್ತಿರುವ ಘಟಕ ವೆಚ್ಚವನ್ನು ತಲಾ ರೂ.1 ಲಕ್ಷಕ್ಕೆ ಏರಿಸಲಾಗಿದೆ. ಮಹಿಳೆಯರಿಗೆ ಶೇ.4ರ ಬಡ್ಡಿ ದರದಲ್ಲಿ ಸಾಲ ಒದಗಿಸಲಾಗಿದೆ ಎಂದು ವಿವರ ನೀಡಿದ್ದಾರೆ.
ಇದೇ ವೇಳೆ ಬೆಂಗಳೂರಿನಲ್ಲಿ 40 ಹಿಂದುಳಿದ ಸಮುದಾಯದವರಿಗೆ ಭೂಮಿ ನೀಡುವ ಬಗ್ಗೆ ಸಚಿವ ಸಂಪುಟ ಸದ್ಯದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.