ಕರ್ನಾಟಕದ ಸದೃಢ ಕೈಗಾರಿಕಾ ವಲಯಕ್ಕಾಗಿ ಜರ್ಮನಿ ಜತೆ ಸಹಭಾಗಿತ್ವ: ಎಂಬಿ ಪಾಟೀಲ್
ಬೆಂಗಳೂರು, ಅಕ್ಟೋಬರ್ 13: ತಯಾರಿಕಾ ವಲಯವಾಗಿ ಬೆಳೆಯುವ ಗುರಿ ಹೊಂದಿರುವ ಕರ್ನಾಟಕ ಸರ್ಕಾರವು ಜರ್ಮನಿ ಕಂಪನಿಗಳಿಗೆ ಹೆಚ್ಚಿನ ಬೆಂಬಲ ನೀಡಲು ಇತ್ತೀಚೆಗೆ ಹಲವು ಉಪಕ್ರಮಗಳನ್ನು ಜಾರಿಗೊಳಿಸಿದೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಶುಕ್ರವಾರ ಹೇಳಿದರು.
ಬೆಂಗಳೂರಿನಲ್ಲಿ ಶುಕ್ರವಾರ VDMA ಮೆಕ್ಯಾನಿಕಲ್ ಎಂಜಿನಿಯರಿಂಗ್ ಸಮಾವೇಶ-2023ರಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸಚಿವರು, ಅವರು ಕರ್ನಾಟಕ ಮತ್ತು ಜರ್ಮನಿ ಮುಂಚಿನಿಂದಲೂ ಸದೃಢ ಕೈಗಾರಿಕಾ ಸಹಭಾಗಿತ್ವ ಹೊಂದಿವೆ. ಇದರಿಂದ ರಾಜ್ಯದಲ್ಲಿ ತಲೆಎತ್ತಲಿರುವ ಯೋಜನೆಗಳ ಕುರಿತು ವಿವರಿಸಿದರು.

ತಯಾರಿಕೆ ಮತ್ತು ತಾಂತ್ರಿಕತೆ ಕ್ಷೇತ್ರಗಳಲ್ಲಿ ಕರ್ನಾಟಕ ಹಾಗೂ ಜರ್ಮನಿ ಸಹಭಾಗಿತ್ವ ಪರಸ್ಪರ ಬೆಳವಣಿಗೆಗೆ ಹೆಚ್ಚಿನ ಕೊಡುಗೆ ನೀಡಿದೆ. ಜರ್ಮನಿ ಕಂಪನಿಗಳು ರಾಜ್ಯದ ಕೈಗಾರಿಕಾ ಸಾಮರ್ಥ್ಯ ಹೆಚ್ಚಿಸಲು ತಮ್ಮದೇ ಕಾಣಿಕೆ ನೀಡುತ್ತಿವೆ. ವಾಹನೋದ್ಯಮ, ಮೂಲಸೌಕರ್ಯ, ಸ್ಮಾರ್ಟ್ ಸಿಟಿ, ಡಿಜಿಟಲ್ ಪರಿಹಾರಗಳಿಗೆ ಸಂಬಂಧಿಸಿದಂತೆ ಗಮನ ಸೆಳೆಯುವಂತಹ ಕೆಲಸ ಮಾಡುತ್ತಿವೆ ಎಂದು ಅವರು ಮಾಹಿತಿ ನೀಡಿದರು.
ಕರ್ನಾಟಕ 200 ಜರ್ಮನಿ ಕಂಪನಿಗಳ ನೆಲೆ
ದೇಶದಲ್ಲಿ 1600ಕ್ಕೂ ಹೆಚ್ಚು ಜರ್ಮನ್ ಕಂಪನಿಗಳು ಕಾರ್ಯಾಚರಿಸುತ್ತಿದ್ದು ಸುಮಾರು 3 ಲಕ್ಷ ಉದ್ಯೋಗಿಗಳನ್ನು ಸೃಷ್ಟಿಸಿವೆ. ಭಾರತದ ಮಾರುಕಟ್ಟೆಯಲ್ಲಿ ಜರ್ಮನಿ ಜೊತೆ 600ಕ್ಕೂ ಹೆಚ್ಚು ಜಂಟಿ ಸಹಭಾಗಿತ್ವ ಚಾಲ್ತಿಯಲ್ಲಿದೆ. ನಮ್ಮ ಕರ್ನಾಟಕವು ಸುಮಾರು 200 ಜರ್ಮನಿ ಕಂಪನಿಗಳಿಗೆ ನೆಲೆಯಾಗಿದೆ ಎಂದು ಪಾಟೀಲ್ ತಿಳಿಸಿದರು.

ಬೆಳವಣಿಗೆಗೆ ಪೂರಕವಾದ ನಮ್ಮ ಕೈಗಾರಿಕಾ ಕಾರ್ಯ ನೀತಿ, ವಲಯ ನಿರ್ದಿಷ್ಟ ನೀತಿಗಳು, ಸುಗಮ ವ್ಯಾಪಾರಕ್ಕೆ ಒತ್ತು ಮತ್ತು ಕಾರ್ಮಿಕ ಸುಧಾರಣೆ ಕಾನೂನುಗಳು ಕರ್ನಾಟಕ- ಜರ್ಮನಿ ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಕಾನ್ಸುಲ್ ಜನರಲ್ ಅಕಿಂ ಬುಕಾರ್ಟ್, ವಿಡಿಎಂಎ ಭಾರತ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ರಾಜೇಶ ನಾಥ, ವಿಡಿಎಂಎ ಅಧ್ಯಕ್ಷ ಕಾರಿ ಹುಸ್ಜೆನ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತಿತರರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications