ಶಿಕ್ಷಕರಿಗಾಗಿ ಬಂತು 'ಶಿಕ್ಷಕ ಮಿತ್ರ' ಅಪ್ಲಿಕೇಶನ್
ಬೆಂಗಳೂರು, ಆಗಸ್ಟ್ 28: ಕರ್ನಾಟಕದ ಶಿಕ್ಷಣ ಇಲಾಖೆಯು 'ಶಿಕ್ಷಕ ಮಿತ್ರ' ಎಂಬ ಮೊಬೈಲ್ ಅಪ್ಲಿಕೇಶನ್ ಸಿದ್ಧಪಡಿಸಿದೆ. ವರ್ಗಾವಣೆಗಾಗಿ ಅರ್ಜಿಗಳನ್ನು ಇದರ ಮೂಲಕವೇ ಇನ್ನು ಮುಂದೆ ಸಲ್ಲಿಸಬಹುದು.
Recommended Video
ಶುಕ್ರವಾರ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ 'ಶಿಕ್ಷಕ ಮಿತ್ರ' ಮೊಬೈಲ್ ಅಪ್ಲಿಕೇಶನ್ ಮತ್ತು 'ವಿದ್ಯಾವಿನೀತ' ಹಾಗೂ 'ಶಿಕ್ಷಣ ಯಾತ್ರೆ' ಪುಸ್ತಕಗಳನ್ನು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಯಡಿಯೂರಪ್ಪ, "ಶಿಕ್ಷಕರು ತಮ್ಮ ಕೆಲಸಗಳಿಗಾಗಿ ಶಾಲೆಗೆ ರಜೆ ಹಾಕಿ ಇಲಾಖೆಯ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು 2019-20ರ ಬಜೆಟ್ನಲ್ಲಿ ಘೋಷಣೆ ಮಾಡಿದಂತೆ ಶಿಕ್ಷಕ ಮಿತ್ರ ಮೊಬೈಲ್ ಅಪ್ಲಿಕೇಶನ್ ತಯಾರು ಮಾಡಲಾಗಿದೆ" ಎಂದರು.
"ಶಿಕ್ಷಕರು ಮೊಬೈಲ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ಕುಳಿತ ಸ್ಥಳದಿಂದಲೇ ಸೇವಾ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ನಿರ್ದಿಷ್ಟ ಸಮಸ್ಯೆಗಳನ್ನು ಇಂತಿಷ್ಟು ದಿನದಲ್ಲಿ ಬಗೆಹರಿಸುವ ಕಾಲವಾಧಿಯನ್ನು ನಿರ್ಧರಿಸಲಾಗಿದೆ" ಎಂದು ಹೇಳಿದರು.

ಪುಸ್ತಕ ಬಿಡುಗಡೆ
ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಕುರಿತು ನಾಡಿನ ಹಲವಾರು ಲೇಖಕರು ಬರೆದಿರುವ ವಿಮರ್ಶಾ ಕೃತಿ ‘ವಿದ್ಯಾವಿನೀತ' ಬಿಡುಗಡೆ ಮಾಡಲಾಯಿತು. "ಅತ್ಯಂತ ಸಂತೋಷದಿಂದ ಇಂದು ಶಿಕ್ಷಕ ಮಿತ್ರ ಆಪ್ ಲೋಕಾರ್ಪಣೆ ಮತ್ತು ಶಿಕ್ಷಣ ಸಚಿವರು ಹಾಗೂ ಮಿತ್ರರಾದ ಸುರೇಶ್ ಕುಮಾರ್ ಅವರ ವಿದ್ಯಾವಿನೀತ ಮತ್ತು ಅವರ ಅಂಕಣಬರಹದ ಸಂಗ್ರಹ ಶಿಕ್ಷಣಯಾತ್ರೆ ಪುಸ್ತಕವನ್ನು ಬಿಡುಗಡೆ ಮಾಡಿದ್ದೇನೆ" ಎಂದು ಯಡಿಯೂರಪ್ಪ ಹೇಳಿದರು.

ಶಿಕ್ಷಕರ ಅಲೆದಾಟಕ್ಕೆ ತಡೆ
"ಇನ್ನು ಮುಂದೆ ಶಿಕ್ಷಕರ ಅಲೆದಾಟಕ್ಕೆ ಆಪ್ ಸೇವೆಯ ಮೂಲಕ ಇತಿಶ್ರೀ ಹಾಡಲಾಗುತ್ತಿದೆ. ಈ ಬಾರಿಯಿಂದ ಸಾರ್ವತ್ರಿಕ ವರ್ಗಾವಣೆ ಅರ್ಜಿಯನ್ನು ಸಹ ಈ ಶಿಕ್ಷಕ ಮಿತ್ರ ಆಪ್ ಮೂಲಕವೇ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ" ಎಂದು ಯಡಿಯೂರಪ್ಪ ಹೇಳಿದರು.

ಅವರ ಸ್ವಭಾವಕ್ಕೆ ಹಿಡಿದ ಕನ್ನಡಿ
"ವಿದ್ಯಾ ವಿನೀತ ಈ ಪುಸ್ತಕದ ಹೆಸರು ಅವರ ವ್ಯಕ್ತಿತ್ವ, ಸ್ವಭಾವಕ್ಕೆ ಕನ್ನಡಿ ಹಿಡಿದಂತಿದೆ. ಇದು ಅವರ ಗುಣಸ್ವಭಾವಕ್ಕೆ ಅನ್ವರ್ಥವಾಗಿದೆ. ಶಿಕ್ಷಣ ಇಲಾಖೆಯನ್ನು ಒಂದು ಚೌಕಟ್ಟಿಗೆ ಒಳಪಡಿಸಿ ಶಿಕ್ಷಕ ಸ್ನೇಹಿ, ಶಿಕ್ಷಣ ಸ್ನೇಹಿ ಮತ್ತು ವಿದ್ಯಾರ್ಥಿ ಸ್ನೇಹಿಯಾಗಿ ಕೆಲಸ ಮಾಡಿ ಅವರು ಜನಪ್ರಿಯರಾಗಿದ್ದಾರೆ" ಎಂದು ಯಡಿಯೂರಪ್ಪ ತಿಳಿಸಿದರು.

ಮಾದರಿಯಾಗಿದ್ದಾರೆ
"ಶಿಕ್ಷಕರ ವರ್ಗಾವಣೆ ನೀತಿಯನ್ನು ಸರಳೀಕರಣಗೊಳಿಸಿ ಶಿಕ್ಷಕರಿಗೆ ನೆಮ್ಮದಿ ತಂದಿದ್ದಾರೆ. ಎಸ್. ಎಸ್. ಎಲ್. ಸಿ ಹಾಗೂ ಪಿಯುಸಿ ಪರೀಕ್ಷೆಗಳನ್ನು ಕೋವಿಡ್ ವಿಷಮ ಕಾಲಘಟ್ಟದಲ್ಲಿಯೂ ಯಶಸ್ವಿಯಾಗಿ ನಡೆಸಿದ್ದಾರೆ. ಒಬ್ಬ ಸಚಿವರು ಹೇಗೆ ಜನಮುಖಿಯಾಗಿ ಕೆಲಸ ಮಾಡಬಹುದೆಂಬುದಕ್ಕೆ ಸುರೇಶ್ ಕುಮಾರ್ ಮಾದರಿಯಾಗಿದ್ದಾರೆ" ಎಂದು ಯಡಿಯೂರಪ್ಪ ಬಣ್ಣಿಸಿದರು.











Click it and Unblock the Notifications