SSLC Result 2023: 'ಕರ್ನಾಟಕ ಶಾಲಾ ಪರೀಕ್ಷೆ-ಮೌಲ್ಯ ನಿರ್ಣಯ ಮಂಡಳಿ' ಎಂದು ಮರು ನಾಮಕರಣ
ಬೆಂಗಳೂರು, ಸೆಪ್ಟಂಬರ್ 27: ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಸಂಪುಟ ಸಭೆಯಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯು ಪರೀಕ್ಷಾ ಮಂಡಳಿಗಳ ವಿಲೀನಕ್ಕೆ ಚರ್ಚೆ ನಡೆದು ಅನುಮೋದನೆಯೂ ದೊರೆಕಿತ್ತು. ಅದರ ಬೆನ್ನಲ್ಲೇ ರಾಜ್ಯ ಸರ್ಕಾರ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹೆಸರು ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.
ಇತ್ತೀಚೆಗೆ ನಡೆದ ಮುಂಗಾರು ಅಧಿವೇಶನದಲ್ಲಿ ರಾಜ್ಯ ಸರ್ಕಾರ 'ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ತಿದ್ದುಪಡಿ) ವಿಧೇಯಕ ಮಂಡಿಸಿ ಅನುಮೋದನೆ ಪಡೆಯಲಾಗಿತ್ತು. ಇದಾಗಿ ಮೂರೇ ದಿನದಲ್ಲಿ ರಾಜ್ಯ ಸರ್ಕಾರವು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹೆಸರನ್ನು 'ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ' ಎಂದು ಮರು ನಾಮಕರಣ ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸಿತು.
SSLC Result 2023 Karnataka: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ
ರಾಜ್ಯ ಸರ್ಕಾರ ಅಧಿಕೃತವಾಗಿ ವಿಶೇಷ ರಾಜ್ಯಪತ್ರಿಕೆ (ಗೆಜೆಟ್ ಅಧಿಸೂಚನೆ) ಹೊರಡಿಸಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ತಿದ್ದುಪಡಿ ) ಅಧಿನಿಯಮಕ್ಕೆ ತಿದ್ದುಪಡಿ ತರಲಾಗಿದೆ. ಅದರನ್ವಯ ಮೂಲ 'ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ' ಹೆಸರಿನ ಬದಲಿಗೆ 'ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ' ಎಂದು ರಾಜ್ಯ ಸರ್ಕಾರ ಬದಲಿಸಿದೆ.
ಹೆಸರು ಬದಲಾವಣೆಯಾದ ಈ ಮಂಡಳಿಗೆ ಅಧ್ಯಕ್ಷರನ್ನು ರಾಜ್ಯ ಸರ್ಕಾರವು ಐಎಎಸ್ ವೃಂದದಿಂದ ನೇಮಕ ಮಾಡಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಮಂಡಳಿಯ ಪದನಿಮಿತ್ತ ಅಧ್ಯಕ್ಷರಾಗಿರಬೇಕು ಎಂಬದು ಇಲ್ಲ. ಬದಲಾಗಿ ಅವರು ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಮಂಡಳಿಯ ವಿಶೇಷ ಆಹ್ವಾನಿತರು ಆಗಿರಬೇಕು ಎಂದು ಗೆಜೆಟ್ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
ಒಂದೇ ಮಂಡಳಿಯಿಂದ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆ
ಮಂಡಳಿಯಲ್ಲಿ ರಾಜ್ಯ ಸರ್ಕಾರ ನೇಮಿಸಿದ ಇಬ್ಬರು ಕಾರ್ಯದರ್ಶಿ ಹೊಂದಿರಬೇಕು. ಅದರಲ್ಲಿ ಒಬ್ಬರು ಜಂಟಿ ನಿರ್ದೇಶಕರ ದರ್ಜೆಗಿಂತ ಕಡಿಮೆ ಅಲ್ಲದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಆಗಿರಬೇಕು. ಜೊತೆಗೆ ಇನ್ನೊಬ್ಬರು ಜಂಟಿ ನಿರ್ದೇಶಕರ ದರ್ಜೆಗೆ ಕಡಿಮೆ ಅಲ್ಲದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಯಾಗಿರಬೇಕು ಎಂದು ನಿಯಮ ರೂಪಿಸಲಾಗಿದೆ.
ಎರಡು ಮಂಡಳಿಗಳ ವಿಲೀನವು ನೂತನ ರಾಷ್ಟ್ರೀಯ ಶಿಕ್ಷಣ ನೀತಿ (2020) ಅನುಸಾರವಾಗಿ ಬದಲಿಸಲಾಗಿದೆ. ಇನ್ನುಮುಂದೆ ಈ ನೂತನ ಹೆಸರಿನ 'ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ'ಯು ಎಸ್ಎಸ್ಎಲ್ಸಿ, ಸಾರ್ವಜನಿಕ ಪರೀಕ್ಷೆಗಳ ಜೊತೆಗೆ ಪದವಿ ಪೂರ್ವ ಪರೀಕ್ಷೆಗಳನ್ನು ನಡೆಸಲಿದೆ ಎಂದು ಅಧಿಸೂಚನೆ ತಿಳಿಸಿದೆ.