ಪೊಲೀಸರಿಗೆ 'ಒಂದು ದೇಶ ಒಂದೇ ಸಮವಸ್ತ್ರ' ಏಕರೂಪ ಕಾನೂನು ಜಾರಿಗೆ ಸರ್ಕಾರ ತಾತ್ವಿಕ ಒಪ್ಪಿಗೆ: ಆರಗ ಜ್ಞಾನೇಂದ್ರ
ಬೆಂಗಳೂರು, ಜನವರಿ 18: ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿಯು ಮುಂದಿನ ದಿನಗಳಲ್ಲಿ 'ಒಂದು ರಾಷ್ಟ್ರ, ಒಂದೇ ಸಮವಸ್ತ್ರ' ಎಂಬ ಏಕರೂಪ ಕಾನೂನು ವ್ಯವಸ್ಥೆಯಡಿ ಬರಲಿದ್ದಾರೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಹೌದು, ಈ ಸಂಬಂಧ ಮಂಗಳವಾರ ಪ್ರತಿಕ್ರಿಯಿಸಿರುವ ಅವರು, ಪೊಲೀಸ್ ಸಿಬ್ಬಂದಿಗೆ 'ಒಂದು ರಾಷ್ಟ್ರ, ಒಂದೇ ಸಮವಸ್ತ್ರ' ನಿಯಮವನ್ನು ಜಾರಿಗೆ ತರಲು ಕರ್ನಾಟಕ ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಈ ಕುರಿತು ಅಧಿಕೃತ ಹೇಳಿಕೆ ಗೃಹ ಸಚಿವರ ಕಚೇರಿಯಿಂದಲೇ ಬಿಡುಗಡೆಯಾಗಿದೆ.
ಹೇಳಿಕೆಯಲ್ಲಿನ ಅಂಶಗಳನ್ನು ನೋಡುವುದಾದರೆ, ಒಂದು ರಾಷ್ಟ್ರ, ಒಂದೇ ಸಮವಸ್ತ್ರ' ಈ ಹೊಸ ನಿಯಮವು ದೇಶಾದ್ಯಂತ ಕಾನೂನು ಏಜೆನ್ಸಿಗಳ ಗುರುತಿನಲ್ಲಿ ಏಕರೂಪತೆಯನ್ನು ಖಾತರಿಪಡಿಸುತ್ತದೆ. ದೇಶದಲ್ಲಿ ಯಾವಾಗ ಈ ಪೊಲೀಸರಿಗೆ ಸಮವಸ್ತ್ರದ ಏಕರೂಪ ಮಾದರಿ ಹೊಸ ನಿಯಮ ವ್ಯವಸ್ಥೆ ಜಾರಿಯಾಗುತ್ತದೆಯೋ ಅದೇ ಸಮಯದಲ್ಲಿ ಕರ್ನಾಟಕದಲ್ಲಿಯೂ ನಿಯಮ ಅನುಷ್ಠಾನಕ್ಕೆ ನಾವು ಬದ್ಧರಾಗಿದ್ದೇವೆ. ದೇಶದಲ್ಲಿ ಎಂದು ನಿಯಮ ಅನುಷ್ಠಾನಗೊಳ್ಳಲಿದೆ ಎಂಬ ಬಗ್ಗೆ ಮಾಹಿತಿ ಬರಬೇಕಿದೆ ಎಂದು ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.
ಕಳೆದ ವರ್ಷ 2022ರಲ್ಲಿ ಅಕ್ಟೋಬರ್ ತಿಂಗಳಲ್ಲಿ ನಡೆದ ಮೊದಲ ಚಿಂತನ್ ಶಿವರ್ ಸಮಾರಂಭದಲ್ಲಿ ಮಾತನಾಡಿದ ಗೃಹ ಸಚಿವರು ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ಈ ಮಾಹಿತಿ ತಿಳಿಸಿದ್ದರು. ಆಗ ಪ್ರಧಾನಿ ನರೇಂದ್ರ ಮೋದಿ ಅವರು ಪೊಲೀಸ್ ಪಡೆಗಳಿಗೆ 'ಒಂದು ರಾಷ್ಟ್ರ, ಒಂದು ಸಮವಸ್ತ್ರ' ಕಲ್ಪನೆ ಜಾರಿಗೆ ತರುತ್ತಿರುವ ಬಗ್ಗೆ ಪ್ರಸ್ತಾಪಿಸಿದ್ದರು. ಇದೀಗ ಏಕರೂಪ ನಿಯಮಕ್ಕೆ ರಾಜ್ಯ ಸರ್ಕಾರ ತಾತ್ವಕ ಅನುಮೋದನೆ ನೀಡಿದೆ ಎಂದು ತಿಳಿದು ಬಂದಿದೆ.
ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಪ್ರಸ್ತಾಪ
ಪೊಲೀಸರಿಗೆ 'ಒಂದು ರಾಷ್ಟ್ರ ಒಂದು ಸಮವಸ್ತ್ರ' ಕೇವಲ ಒಂದು ಕಲ್ಪನೆಯಾಗಿದೆ. ನಾವು ಅದನ್ನು ಪೊಲೀಸರ ಮೇಲೆ ಬಲವಂತವಾಗಿ ಹೇರಲು ಪ್ರಯತ್ನಿಸುತ್ತಿಲ್ಲ. ಆದರೆ ಈ ಬಗ್ಗೆ ಸ್ವಲ್ಪ ಯೋಚಿಸಬೇಕಿದೆ. ಈ ಏಕರೂಪ ಕಾನೂನು ಮುಂದಿನ ಐದು, ಇಲ್ಲವೇ 50 ಅಥವಾ 100 ವರ್ಷಗಳಲ್ಲಿ ಸಂಭವಿಸಬಹುದು. ಈ ಪ್ರಸ್ತಾವ ಬಗ್ಗೆ ಎಲ್ಲಾ ರಾಜ್ಯಗಳು ಯೋಚಿಸಬೇಕು. ದೇಶಾದ್ಯಂತ ಪೊಲೀಸರ ಗುರುತು ಒಂದೇ ಆಗಿರಬೇಕು ಎಂಬುದು ನಮ್ಮ ಆಶಯ ಎಂದು ಪ್ರಧಾನಮಂತ್ರಿಗಳು ತಿಳಿಸಿದ್ದರು.