Job Alert: ಉದ್ಯೋಗಾಸಕ್ತರಿಗೆ ಗುಡ್ನ್ಯೂಸ್: 72,000 ಹುದ್ದೆಗಳ ನೇಮಕಾತಿ ಅಪ್ಡೇಟ್: ಜಿ ಪರಮೇಶ್ವರ್
ಬೆಂಗಳೂರು: ಕರ್ನಾಟಕದಾದ್ಯಂತ 2.5 ಲಕ್ಷ ಹುದ್ದೆಗಳು ಖಾಲಿ ಇವೆ. ಈ ಪೈಕಿ ಬರೋಬ್ಬರಿ 72,000 ಖಾಲಿ ಹುದ್ದೆಗಳ ಹಂತ ಹಂತವಾಗಿ ಭರ್ತಿ ಮಾಡುವ ಕುರಿತು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಅಪ್ಡೇಟ್ ನೀಡಿದ್ದಾರೆ. ರಾಜ್ಯ ಬಜೆಟ್ನಲ್ಲಿ ತಿಳಿಸಿದಂತೆ 56,942 ಹುದ್ದೆಗಳನ್ನು ನೇಮಕಾತಿ ಮಾಡಲಿದ್ದೇವೆ ಎಂದು ನೇಮಕಾತಿ ವಿಳಂಬ ಕುರಿತು ವಿವರಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ನಮ್ಮ ಸರ್ಕಾರ ಬರುವಾಗ 2.5 ಲಕ್ಷ ಹುದ್ದೆಗಳು ಖಾಲಿ ಇವೆ. ಹಂತ ಹಂತವಾಗಿ ನಾವು ಅದನ್ನು ಹುದ್ದೆಗಳ ನೇಮಕಾತಿ ನಡೆಯಲಿದೆ. ಈ ಹಿಂದೆ ಅನೇಕ ಕಾರಣಗಳಿಂದ ಅದು ವಿಳಂಬವಾಯಿತು. ಒಳ ಮೀಸಲಾತಿ ವಿಚಾರ ಬಗೆಹರಿಯದೆ ಇದ್ದದ್ದು ಸಮಸ್ಯೆಗೆ ಕಾರಣವಾಗಿತ್ತು.

ಒಳಮೀಸಲಾತಿ ಕುರಿತು ನ್ಯಾಯಮೂರ್ತಿ ನಾಗಮೋಹನ್ದಾಸ್ ಅವರ ಸಮಿತಿಯ ವರದಿ ಆಧಾರದ ಮೇಲೆ ಕೂಲಂಕಷವಾಗಿ ಪರಿಶೀಲನೆ ಮಾಡಿ ಒಳಮೀಸಲಾತಿ ಸಮಸ್ಯೆಯನ್ನು ಬಗೆಹರಿಸಲಾಯಿತು. ನಂತರ ಪ್ರಸಕ್ತ ವರ್ಷ ಬಜೆಟ್ನಲ್ಲಿಯೇ 56,942 ಹುದ್ದೆಗಳನ್ನು ನೇಮಕಾತಿ ಮಾಡುತ್ತೇವೆ ಎಂದು ತಿಳಿಸಿದ್ದೆವು. ಹೇಳಿದಂತೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು. ಈಗಾಗಲೇ ಒಂದಷ್ಟು ಪ್ರಕ್ರಿಯೆಗಳು ಪ್ರಾರಂಭಗೊಂಡಿವೆ ಅಂತಲೂ ತಿಳಿಸಿದರು.
72,000 ಹುದ್ದೆಗಳ ಭರ್ತಿಗೆ ತೀರ್ಮಾನ
24,000 ಹುದ್ದೆಗಳಿಗೆ ಎಫ್ಡಿಯವರು ಕೂಡ ಅನುಮತಿ ನೀಡಲಾಗಿದೆ. ಎಲ್ಲಾ ಇಲಾಖೆಗಳಿಗೆ ನೋಟಿಫೀಕೇಷನ್ ಹೊರಡಿಸುವಂತೆ ಸೂಚನೆ ನೀಡಲಾಗಿದೆ. ಈ ಮಧ್ಯೆ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಯಾದ ನಂತರ ಅದನ್ನು ಪುನರ್ ಪರಿಶೀಲನೆ ಮಾಡಿ ಈಗ 72,000 ಹುದ್ದೆಗಳನ್ನು ತುಂಬಬೇಕು ಎಂದು ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಅಧಿಸೂಚನೆ ಹೊರಡಿಸುವಂತೆ ತಿಳಿಸಲಾಗಿದೆ ಎಂದು ಮಾಹಿತಿ ಕೊಟ್ಟರು.
ಶಿಕ್ಷಕರು, ವೈದ್ಯರು, ನರ್ಸುಗಳು, ಇಂಜಿನಿಯರ್ಸ್ಗಳು ಸೇರಿದಂತೆ ಎಲ್ಲಾ ಇಲಾಖೆಗಳಿಗೆ ತಡಮಾಡದಂತೆ ತಿಳಿಸಬೇಕೆಂದು ಮೊನ್ನೆ ನಡೆದ ಕ್ಯಾಬಿನೇಟ್ನಲ್ಲಿ ಚರ್ಚೆ ಮಾಡಲಾಗಿದೆ. ಅದಕ್ಕಾಗಿ ಮುಖ್ಯಮಂತ್ರಿಗಳು ಇಬ್ಬರು ಅಧಿಕಾರಿಗಳಾದ ಎಐಎಸ್ ಅಧಿಕಾರಿ ಉಮಾ ಮಹದೇವನ್ ಮತ್ತು ಗೌರವ್ ಗುಪ್ತಾ ಅವರನ್ನು ಮೇಲುಸ್ತುವಾರಿಗಾಗಿ ನೇಮಕ ಮಾಡಿದ್ದಾರೆ ಎಂದರು.
ರಾಜ್ಯದಲ್ಲಿ ಅನೇಕ ನಿರುದ್ಯೋಗಿಗಳಿದ್ದಾರೆ, ಅವರೆಲ್ಲರೂ ಅನೇಕ ಸಂದರ್ಭದಲ್ಲಿ ನೇಮಕಾತಿ ಮಾಡುವಂತೆ ಬೀದಿಗಿಳಿದು ಹೋರಾಟ ಮಾಡಿರುವುದನ್ನು ನಾವು ನೋಡಿದ್ದೇವೆ. ಹಾಗಾಗಿ ನಾವು ವೇಗವಾಗಿ 72,000 ಹುದ್ದೆಯನ್ನು ತುಂಬಲಿದ್ದೇವೆ ಎಂದು ಉದ್ಯೋಗಾಸಕ್ತರಿಗೆ ಗುಡ್ ನ್ಯೂಸ್ ನೀಡಿದರು.
ರೈತರ ಆಚೆ ಹಾಕಿ ಟೌನ್ಶಿಪ್ ನಿರ್ಮಾಣ ಅಸಾಧ್ಯ
ಬಿಡದಿ ಟೌನ್ಶಿಪ್ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಈ ಮೊದಲೇ ಹೇಳಿದಂತೆ ರೈತರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ನಾವು ಮಾಡುವುದಿಲ್ಲ. ಒತ್ತಾಯಪೂರ್ವಕವಾಗಿ ರೈತರನ್ನು ತೆಗೆದು ಆಚೆ ಹಾಕಿ ನಾವು ಟೌನ್ಶಿಪ್ ಕಟ್ಟುವುದರಲ್ಲಿ ಯಾವುದೇ ಅರ್ಥವಿಲ್ಲ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಒಪ್ಪಿಗೆಯ ಮೂಲಕ ಅವರ ಜಮೀನನ್ನು ಪಡೆದು ಟೌನ್ಶಿಪ್ ಮಾಡಲು ಈಗಾಗಲೇ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.
ಅವರಿಗೆ ಒಂದು ವೇಳೆ ತಮಗೆ ಕೊಡುವಂತಹ ಪರಿಹಾರ ಸಾಕಾಗುತ್ತಿಲ್ಲ ಎಂದನಿಸಿದರೆ ಅದನ್ನು ಕೂಡ ಇನ್ನು ಮುಂದೆ ಹೆಚ್ಚು ಮಾಡುವಂತಹ ಸಾಧ್ಯತೆಗಳು ಇದೆ. ಒಟ್ಟಾರೆ ಯಾವುದೇ ಗೊಂದಲ ಇಲ್ಲದೆ ಬಿಡದಿ ಟೌನ್ಶಿಪ್ ಮಾಡಬೇಕು ಎನ್ನುವುದು ನಮ್ಮ ಉದ್ದೇಶವೆಂದು ವಿವರಿಸಿದರು.
ಬಿಡದಿ ಟೌನ್ಶಿಪ್ ಎಐ ಸೆಂಟರ್ಗಾಗಿ ಅಲ್ಲ
ಎಐ ಹಬ್ಗಳಿಗೆ ಹೆಚ್ಚಿನ ನೀರಿನ ಅಗತ್ಯವಿರುವ ಹಿನ್ನೆಲೆ, ಬಿಡದಿ ಪ್ರದೇಶದ ನೀರಿನ ಲಭ್ಯತೆಯನ್ನು ಮುಂದಿನ 40 ವರ್ಷಗಳ ದೃಷ್ಟಿಯಿಂದ ಸರ್ಕಾರ ಬಳಸಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ಎಐ ಸೆಂಟರ್ ಮಾಡುವುದಕ್ಕೆ ಯಾವುದೆಲ್ಲ ಮಾನದಂಡಗಳು ಇವೆ ಎಂಬುದರ ಸ್ಪಷ್ಟ ಮಾಹಿತಿ ಯಾರಿಗೂ ಗೊತ್ತಿಲ್ಲ. ಈಗ ಅದನ್ನು ಸರ್ಕಾರ ಬೇರೆ ಬೇರೆ ಕಡೆ ಪತ್ತೆ ಮಾಡುತ್ತಿದ್ದೇವೆ. ಇದು ಎಐ ಹಬ್ಗಾಗಿ ಮಾಡುತ್ತಿರುವಂತದಲ್ಲ ಎಂದು ತಿಳಿಸಿದರು.
ಬೆಂಗಳೂರಿನ ಮೇಲೆ ಸಂಚಾರದಟ್ಟಣೆ ಸೇರಿದಂತೆ ಅನೇಕ ಒತ್ತಡವಿದೆ. ನೈಸ್ ಪ್ರಾಜೆಕ್ಟ್ ಮಾಡಿದ ಸಂದರ್ಭದಲ್ಲಿ 7 ಟೌನ್ಶಿಪ್ ಮಾಡಬೇಕು ಎಂದು ಪ್ರಸ್ತಾವನೆ ಬಂದಿದ್ದವು. ಇದರ ಉದ್ದೇಶ ಬೆಂಗಳೂರಿನ ಮೇಲಿರುವ ಒತ್ತಡ ಕಡಿಮೆ ಮಾಡಬೇಕು ಎನ್ನುವುದಾಗಿತ್ತು. ಪಕ್ಕದಲ್ಲಿರುವ ಕೋಲಾರ, ತುಮಕೂರು ರಾಮನಗರ ಪಟ್ಟಣವನ್ನು ಅಭಿವೃದ್ಧಿ ಮಾಡಿದರೆ ಬೆಂಗಳೂರಿನ ಮೇಲಿರುವ ಒತ್ತಡ ಕಡಿಮೆಯಾಗಲಿದೆ ಎನ್ನುವ ಉದ್ದೇಶ. ಈ ಕಾರಣಗಳಿಂದ ಬಿಡದಿ ಟೌನ್ಶಿಪ್ ಆದರೆ ಸ್ವಲ್ಪ ಸುಧಾರಿಸಬಹುದು ಎನ್ನುವ ಆಶಾಭಾವನೆ ಇದೆ ಎಂದರು.













Click it and Unblock the Notifications