ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ರಾಜೀನಾಮೆ
ಬೆಂಗಳೂರು, ಜೂನ್ 17 : ಕರ್ನಾಟಕದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತಮ್ಮ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ತಮ್ಮ ಅಧಿಕಾರಾವಧಿ 13 ದಿನಗಳು ಬಾಕಿ ಇರುವಂತೆಯೇ ರಾಜ್ಯಪಾಲರು ರಾಜೀನಾಮೆ ಸಲ್ಲಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ನವದೆಹಲಿಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿದ ಎಚ್.ಆರ್.ಭಾರದ್ವಾಜ್ ಅವರು ತಮ್ಮ ರಾಜೀನಾಮೆಯನ್ನು ಅವರಿಗೆ ಸಲ್ಲಿಸಿದ್ದಾರೆ. 2009ರಿಂದ ಎಚ್.ಆರ್.ಭಾರದ್ವಾಜ್ ಅವರು ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದು, ಜೂ.29ರಂದು ಅವರ ಅಧಿಕಾರಾವಧಿ ಅಂತ್ಯಗೊಳ್ಳುತ್ತಿತ್ತು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕರ್ನಾಟಕ ಸೇರಿದಂತೆ ಏಳು ರಾಜ್ಯಗಳ ರಾಜ್ಯಪಾಲರನ್ನು ನೇಮಕ ಮಾಡುವ ಪ್ರಕ್ರಿಯಿಗೆ ಚಾಲನೆ ನೀಡಿದೆ. ಎಚ್.ಆರ್.ಭಾರದ್ವಾಜ್ ಅವರಿಂದ ತೆರವಾಗುವ ಸ್ಥಾನಕ್ಕೆ ಬಿಜೆಪಿ ಹಿರಿಯ ನಾಯಕರಾದ ಯಶವಂತ ಸಿನ್ಹಾ ಹಾಗೂ ವಿ.ಕೆ.ಮಲ್ಹೋತ್ರಾ ಮತ್ತು ಕಲ್ಯಾಣ್ ಸಿಂಗ್ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.
ಸೋಮವಾರ ಸಂಜೆಯೇ ಎಚ್.ಆರ್.ಭಾರದ್ವಾಜ್ ಅವರು ದೆಹಲಿಗೆ ತೆರಳಿದ್ದು ಜೂನ್ 21ರಂದು ಬೆಂಗಳೂರಿಗೆ ಮರಳಲಿದ್ದಾರೆ. ಜೂ.29ರಂದು ಅವರು ನಿವೃತ್ತರಾಗಲಿದ್ದು, ಹೊಸ ರಾಜ್ಯಪಾಲರು ಯಾರು ಎಂಬುದು ಕುತೂಹಲ ಮೂಡಿಸಿದೆ.
ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಮಾತನಾಡಿದ್ದ ರಾಜ್ಯಪಾಲರು, ಕರ್ನಾಟಕದ ರಾಜ್ಯಪಾಲನಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿರುವ ತೃಪ್ತಿ ಇದೆ. ನನ್ನ ಅವಧಿ ಜೂ.29ರವರೆಗೆ ಇದೆ. ಅಲ್ಲಿಯವರೆಗೆ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದರು. ಸದ್ಯ 13 ದಿನಗಳ ಮೊದಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. [ಅವಧಿಗೂ ಮುನ್ನ ನಾನೇಕೆ ರಾಜೀನಾಮೆ ಕೊಡ್ಲಿ]
ಸಿದ್ದು ಸರ್ಕಾರ ವಿರುದ್ಧ ಅಸಮಾಧಾನ : ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಸದಾ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಎಚ್.ಆರ್.ಭಾರದ್ವಾಜ್ ಅವರು, ವಿಧಾನಪರಿಷತ್ತಿನ ಐದು ಸ್ಥಾನಗಳಿಗೆ ಹೊಸ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ಸರ್ಕಾರ ಕಳುಹಿಸಿದ್ದ ಪಟ್ಟಿಯ ಬಗ್ಗೆ ಸೋಮವಾರ ಸಂಜೆ ಅತೃಪ್ತಿ ವ್ಯಕ್ತಪಡಿಸಿದ್ದರು. ಪಟ್ಟಿಯನ್ನು ಮರು ಪರಿಶೀಲಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದ್ದರು. [ಪರಿಷತ್ ನಾಮನಿರ್ದೇಶನಕ್ಕೆ ಗೌರ್ನರ್ ಗರಂ]
ರಾಜ್ಯಪಾಲರ ರಾಜೀನಾಮೆ ಪರ್ವ : ಯುಪಿಎ ಸರ್ಕಾರದ ಆಡಳಿತದವ ಅವಧಿಯಲ್ಲಿ ನೇಮಕವಾದ ರಾಜ್ಯಪಾಲರು ರಾಜೀನಾಮೆ ಸಲ್ಲಿಸಲು ಆರಂಭಿಸಿದ್ದಾರೆ. ಉತ್ತರಪ್ರದೇಶದ ರಾಜ್ಯಪಾಲ ಬಿ.ಎಲ್.ಜೋಷಿ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ರಾಜಸ್ಥಾನದ ರಾಜ್ಯಪಾಲರಾದ ಕರ್ನಾಟಕ ಮೂಲದ ಮಾರ್ಗರೇಟ್ ಆಳ್ವಾ ಸಹ ಇಂದು ಪ್ರಧಾನಿಯನ್ನು ಭೇಟಿ ಮಾಡಲಿದ್ದು, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ.
ಉಳಿದಂತೆ ಕೇಂದ್ರ ಸರ್ಕಾರ ಕೇರಳ ರಾಜ್ಯಪಾಲೆ ಶೀಲಾ ದೀಕ್ಷಿತ್, ಪಂಜಾಬ್ ರಾಜ್ಯಪಾಲರಾದ ಶಿವರಾಜ್ ಪಾಟೀಲ್, ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಎಂ.ಕೆ.ನಾರಾಯಣ್, ಮಧ್ಯಪ್ರದೇಶ ರಾಜ್ಯಪಾಲ ರಾಮ್ ನರೇಶ್ ಯಾದವ್, ಗುಜರಾತ್ ರಾಜ್ಯಪಾಲರಾದ ಕಮಲಾ ಬೇನಿವಾಲ್, ಮಹಾರಾಷ್ಟ್ರ ರಾಜ್ಯಪಾಲ ಕೆ.ಸತ್ಯನಾರಾಯಣ ಮತ್ತು ತ್ರಿಪುರ ರಾಜ್ಯಪಾಲ ದೇವೇಂದ್ರ ಕೋನಾರ್ ಅವರನ್ನು ಬದಲಾವಣೆ ಮಾಡುವ ಸಾಧ್ಯತೆ ಇದ್ದು, ಅವರು ತಮ್ಮ ಸ್ಥಾನಗಳಿಗೆ ಶೀಘ್ರದಲ್ಲೇ ರಾಜೀನಾಮೆ ನೀಡುವ ಸಾಧ್ಯತೆ ಇದೆ.












Click it and Unblock the Notifications