ಪ್ರಶ್ನೆ ಪತ್ರಿಕೆ ಸೋರಿಕೆ, ರಾಜ್ಯದಲ್ಲಿ 2 ದಿನ ವಾಟ್ಸಪ್ ಬ್ಯಾನ್?
ಬೆಂಗಳೂರು, ಏಪ್ರಿಲ್, 6: ಸೋರಿಕೆ ಗೊಂದಲಕ್ಕೆ ಸಿಕ್ಕಿದ್ದ ದ್ವೀತೀಯ ಪಿಯುಸಿ ರಸಾಯನ ಶಾಸ್ತ್ರ ಪರೀಕ್ಷೆ ಏಪ್ರಿಲ್ 12ರಂದು ನಡೆಯಲಿದೆ. ಈ ಹಿನ್ನಲೆಯಲ್ಲಿ ವಾಟ್ಸಪ್ ನ್ನು ಎರಡು ದಿನಗಳ ಮಟ್ಟಿಗೆ ಬ್ಯಾನ್ ಮಾಡುವ ಚಿಂತನೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಮಾಡಿದೆ.
ಎರಡು ದಿನ ವಾಟ್ಸಪ್ ಗೆ ನಿಷೇಧ ಹೇರುವ ಬಗ್ಗೆ ಈಗಾಗಲೇ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಜೊತೆ ಮಾತಾನಾಡಿದ್ದೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.[ಬೆಂಗಳೂರಿನ ಯುವ ಪೀಳಿಗೆಯ ಆಯ್ಕೆ: ಫೇಸ್ಬುಕ್? ವಾಟ್ಸಪ್?]

ಪಿಯು ಪತ್ರಿಕೆ ಸೋರಿಕೆ ಸಂಬಂಧ ಸಿಐಡಿ ಅಧಿಕಾರಿಗಳು ಮೂರು ಜನ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ಪ್ರಗತಿಯಲ್ಲಿದೆ. ಸರ್ಕಾರದ ಜೊತೆ ಚರ್ಚಿಸಿ ತೀರ್ಮಾನ ಕೈಗೊಂಡರೆ ಕರ್ನಾಟಕದಲ್ಲಿ ಏಪ್ರಿಲ್ 11 ಮತ್ತು 12ರಂದು ವಾಟ್ಸಪ್ ಬ್ಯಾನ್ ಆಗುವ ಸಾಧ್ಯತೆಯಿದೆ.[ಪಿಯು ಪತ್ರಿಕೆ ಖರೀದಿ ಆಗಿದೆ, ಮಾರಿದವರು ಯಾರು?]
ಇದೇ ಬಗೆಯ ಸಮಸ್ಯೆ ಗುಜರಾತ್ ಮತ್ತು ಜಮ್ಮು ಕಾಶ್ಮೀರದಲ್ಲಿ ಉಂಟಾಗಿದ್ದಾಗ ವಾಟ್ಸಪ್ ಬ್ಯಾನ್ ಮಾಡಲಾಗಿತ್ತು. ಈ ಬಗೆಯಲ್ಲಿ ಬ್ಯಾನ್ ಮಾಡುವ ಅಂತಿಮ ತೀರ್ಮಾನವನ್ನು ಕೇಂದ್ರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ತೆಗೆದುಕೊಳ್ಳಬೇಕಾಗಿದ್ದು ಕರ್ನಾಟಕ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಕೆಗೆ ಸಿದ್ಧತೆ ಮಾಡಿಕೊಂಡಿದೆ.
ಪರೀಕ್ಷೆ ರದ್ದಾಗಿತ್ತು : 2016ರ ಮಾರ್ಚ್ 21ರಂದು 1.75 ಲಕ್ಷ ವಿದ್ಯಾರ್ಥಿಗಳು ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಆ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಈ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿತ್ತು. ಮಾರ್ಚ್ 31ರಂದು ಮರುಪರೀಕ್ಷೆ ನಡೆಸುವ ದಿನಾಂಕ ಘೋಷಿಸಲಾಗಿತ್ತು. ಆದರೆ, ಪುನಃ ಪತ್ರಿಕೆ ಸೋರಿಕೆಯಾದ ಕಾರಣ ಪರೀಕ್ಷೆ ರದ್ದುಗೊಳಿಸಲಾಗಿತ್ತು. ಸದ್ಯ, ಏ.12ರಂದು ಮರು ಪರೀಕ್ಷೆ ನಡೆಸುವುದಾಗಿ ದಿನಾಂಕ ಘೋಷಣೆ ಮಾಡಲಾಗಿದೆ.












Click it and Unblock the Notifications