ಬೆಂಗಳೂರಲ್ಲಿ ನೀರಿನ ಸಮಸ್ಯೆಗೆ ಶೀಘ್ರದಲ್ಲೇ ಸಿಗುತ್ತೆ ಮುಕ್ತಿ!
ಬೆಂಗಳೂರಿನ ನೀರಿನ ಪರಿಸ್ಥಿತಿ ಭೀಕರವಾಗಿದ್ದು, ಸರ್ಕಾರ ಕೂಡ ಸೂಕ್ತವಾಗಿ ನೀರನ್ನ ಈಗ ಜನರಿಗೆ ಒದಗಿಸಲು ಹಲವು ರೀತಿಯ ಕ್ರಮ ಕೈಗೊಂಡಿದೆ. ಹಾಗೇ ವಾಟರ್ ಟ್ಯಾಂಕರ್ಗಳ ಮಾಫಿಯಾಗೆ ಕೂಡ ಬ್ರೇಕ್ ಹಾಕುತ್ತಿದೆ. ಹೀಗಿದ್ದಾಗಲೇ ಬೆಂಗಳೂರಿನ ಅಂತರ್ಜಲ ವೃದ್ಧಿಗೆ ಇದೀಗ ಮಹತ್ವದ ಕ್ರಮ ಕೈಗೊಂಡಿದೆ. ಈ ಮೂಲಕ ಬೆಂಗಳೂರಿನ ಜನರಿಗೆ ಭರಪೂರವಾಗಿ ಕುಡಿಯುವ ನೀರು ಸಿಗುವಂತೆ ಮಾಡಲು ಸರ್ಕಾರ ಯೋಜನೆ ರೂಪಿಸಿದೆ, ಅದು ಹೇಗೆ ಗೊತ್ತಾ? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.
ಮಳೆರಾಯ ಕೈಕೊಟ್ಟು ಹೋಗಿದ್ದು, ಧೋ ಅಂತಾ ಮಳೆ ಸುರಿಯಬೇಕಿದ್ದ ಸಮಯದಲ್ಲಿಯೂ ಬಿಸಿಲು ಧಗಧಗಿಸಿದ್ದರಿಂದ 2023 ಕರ್ನಾಟಕ ಪಾಲಿಗೆ ಬೇಸರದ ವರ್ಷವಾಗಿತ್ತು. ಹೀಗಾಗಿಯೇ, ಕರ್ನಾಟಕದಲ್ಲಿ ಬರದ ಛಾಯೆ ಆವರಿಸಿದ್ದು ಬೇಸಿಗೆ ಆರಂಭಕ್ಕೆ ಮೊದಲೇ ನೀರಿಗೋಸ್ಕರ ಭಾರಿ ತಿಕ್ಕಾಟ ಶುರುವಾಗಿದೆ. ಇನ್ನು ರಾಜಧಾನಿ ಬೆಂಗಳೂರಿನ ಪರಿಸ್ಥಿತಿ ಯಾರಿಗೂ ಬೇಡ. ಹಿಂದೆ ಹಲವು ವರ್ಷಗಳ ಕಾಲ ಭಾರಿ ಮಳೆ ಪರಿಣಾಮ ಬೆಂಗಳೂರಲ್ಲಿ ನೆರೆ ಪರಿಸ್ಥಿತಿ, ನಿರ್ಮಾಣ ಆಗಿತ್ತು. ಆದರೆ 2023ರಲ್ಲಿ ಮಳೆಯೇ ಬೀಳಲಿಲ್ಲ, ಹೀಗಾಗಿ ಜನರು ಕೂಡ ಪರದಾಡಿದ್ದರು. ಮತ್ತೊಂದು ಕಡೆ ಬೆಂಗಳೂರಿನಲ್ಲಿ ಕೆರೆ & ಬೋರ್ವೆಲ್ ಸಂಪೂರ್ಣ ಬತ್ತಿ ಹೋಗಿರುವಾಗ ಸರ್ಕಾರ ಮಹತ್ವದ ಯೋಜನೆಗೆ ಮುಂದಾಗಿದೆ.

ತುಂಬಿ ತುಳುಕಲಿವೆ ಕೆರೆಗಳು!
ಬೆಂಗಳೂರಿನ ನೀರಿನ ಬಿಕ್ಕಟ್ಟು ತೀವ್ರವಾದ ಕಾರಣ, ಸಿಲಿಕಾನ್ ಸಿಟಿಯಲ್ಲಿ ಇದೀಗ ಬೋರ್ ನೀರಿನ ಮಟ್ಟವನ್ನು ಹೆಚ್ಚಿಸಲು ಬೆಂಗಳೂರು ಜಲ ಮಂಡಳಿ ಭರ್ಜರಿ ನಿರ್ಧಾರವನ್ನ ಇದೀಗ ಕೈಗೊಂಡಿದೆ. ಅದರಲ್ಲೂ ಮಳೆಯೇ ಬೀಳದ ಕಾರಣಕ್ಕೆ ಒಣಗಿ ಬರಡಾಗಿ ಹೋಗಿರುವಂಥ ಬೆಂಗಳೂರಿನ ಕೆರೆಗಳಿಗೆ ಮತ್ತೆ ಜೀವ ನೀಡಲು ಇದೀಗ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ಜನರು ನೀರೇ ಇಲ್ಲ ಅಂತಾ ಪರದಾಡುವ ಸಮಯದಲ್ಲಿ ಒಣಗಿರುವ ಕೆರೆಗಳಿಗೆ ಸಂಸ್ಕರಿಸಿದ ನೀರನ್ನ ಪೂರೈಕೆ ಮಾಡಲು ಮಹತ್ವದ ನಿರ್ಧಾರ ಮಾಡಲಾಗಿದೆ. ಈ ಮೂಲಕ ಬೆಂಗಳೂರಿನ ಕೆರೆಗಳು ಮತ್ತೆ ತುಂಬಿ ತುಳುಕುವುದು ಬಹುತೇಕ ಪಕ್ಕಾ ಆಗುತ್ತಿದೆ.
ನೀರಿಗಾಗಿ ಬೆಂಗಳೂರಿಗರ ಪರದಾಟ
ಬೆಂಗಳೂರಿನ ಯಾವ ಭಾಗದಲ್ಲೂ ನೀರು ಸಿಗುತ್ತಿಲ್ಲ, ಮಳೆ ಇಲ್ಲದ ಕಾರಣ ಬೆಂಗಳೂರಿನಲ್ಲಿ ಶೇಕಡಾ 50 ರಷ್ಟು ಬೋರ್ವೆಲ್ ಸಂಪೂರ್ಣ ಬತ್ತಿ ಹೋಗಿವೆ. ಇದೇ ಕಾರಣಕ್ಕೆ ಅಂತರ್ಜಲ ಮರುಪೂರಣ ಮಾಡಲು ಒಣಗುತ್ತಿರುವ ಕೆರೆಗಳಿಗೆ ಪ್ರತಿ ದಿನಕ್ಕೆ 1,300 ಮಿಲಿಯನ್ ಲೀಟರ್ ಶುದ್ಧೀಕರಿಸಿದ ನೀರನ್ನ ಬಿಡಲು ಬೆಂಗಳೂರು ಜಲಮಂಡಳಿ ಅಧಿಕಾರಿಗಳು ನಿರ್ಧರಿಸಿದ್ದಾರಂತೆ. ಈ ಮೂಲಕ ಬೆಂಗಳೂರಿನಲ್ಲಿ ಒಂದಷ್ಟು ನೀರಿನ ಪರಿಸ್ಥಿತಿ ಸುಧಾರಿಸುವಂತೆ ಮಾಡೋದಕ್ಕೆ ಈಗ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರಿಗೆ ಎಷ್ಟು ನೀರು ಬೇಕು?
ಮತ್ತೊಂದು ಕಡೆ ಇದೀಗ ಬೆಂಗಳೂರಿಗೆ 2,100 ಎಂಎಲ್ಡಿ ಕುಡಿಯುವ ನೀರಿನ ಅಗತ್ಯವಿದೆ. ಈ ನೀರಿನಲ್ಲಿ 1,450 ಎಂಎಲ್ಡಿ, ಕಾವೇರಿ ನದಿಯಿಂದ ಬರುತ್ತದೆ. ನೀರಿನ ಬಿಕ್ಕಟ್ಟಿನ ಕುರಿತು ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗೇ ಇದರ ಜೊತೆ 2024ರ ಜುಲೈವರೆಗೆ ಜಲಾಶಯಗಳಲ್ಲಿ ಸಾಕಷ್ಟು ನೀರು ಇದೆಯಂತೆ. ಅಷ್ಟರ ಒಳಗಾಗಿ ಮತ್ತೆ ಮಳೆ ಬರುವ ನಿರೀಕ್ಷೆ ಕೂಡ ಇರುವ ಕಾರಣಕ್ಕೆ ಭಯಪಡುವ ಅಗತ್ಯತೆ ಇಲ್ಲ ಎನ್ನಲಾಗಿದೆ.
ಒಟ್ನಲ್ಲಿ ಏನಾದರೂ ಆಗಲಿ ಈಗ ನಮಗೆ ನೀರು ಸಿಗಲಿ ಅಂತಿದ್ದಾರೆ ಬೆಂಗಳೂರಿನ ಪ್ರಜೆಗಳು. ಹೀಗಾಗಿ ಸರ್ಕಾರ ಹಾಗೂ ಸ್ಥಳೀಯ ಆಡಳಿತಗಳು ಕೂಡ ನೀರಿನ ಸಮಸ್ಯೆ ಬಗೆಹರಿಸೋದಕ್ಕೆ ಹಲವು ಕ್ರಮ ಕೈಗೊಂಡಿವೆ. ಇನ್ನು ಕೆಲವೇ ದಿನದಲ್ಲಿ, ಬೆಂಗಳೂರು ನಿವಾಸಿಗಳ ನೀರಿನ ಸಮಸ್ಯೆ ಈ ಮೂಲಕ ಬಗೆಹರಿಯುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications