ಸಿಎಂ ಕೊಟ್ಟ ಸುಳಿವು: 14ದಿನ ಕರ್ನಾಟಕ ಸಂಪೂರ್ಣ ಲಾಕ್ ಡೌನ್?
ಬೆಂಗಳೂರು, ಮೇ 7: ಪ್ರತಿದಿನ ಸುಮಾರು ಐವತ್ತು ಸಾವಿರ ಕೇಸುಗಳು ದಾಖಲಾಗುತ್ತಿರುವುದರಿಂದ ಕರ್ನಾಟಕ ಸರಕಾರ ಅತ್ಯಂತ ಕಠಿಣ ಕ್ರಮಕ್ಕೆ ಮುಂದಾಗುವ ಸಾಧ್ಯತೆ ದಟ್ಟವಾಗಿದೆ. ಮುಖ್ಯಮಂತ್ರಿಗಳೂ ಈ ಬಗ್ಗೆ ಸುಳಿವನ್ನು ನೀಡಿದ್ದಾರೆ.
"ಇವತ್ತು ನಾಳೆಯಲ್ಲಿ ಈ ಸಂಬಂಧ ಅಧಿಕಾರಿಗಳ ಸಭೆಯನ್ನು ಕರೆದಿದ್ದೇನೆ. ಇನ್ನೂ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆಯಿದೆ. ಯಾವ ರೀತಿಯ ಕಠಿಣ ಕ್ರಮ ಎನ್ನುವುದನ್ನು ಸಭೆಯ ನಂತರ ಹೇಳುತ್ತೇನೆ"ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
"ತಾಯಿ ಅಣ್ಣಮ್ಮದೇವಿಯಲ್ಲಿ ನನ್ನ ಪ್ರಾರ್ಥನೆ ಇಷ್ಟೇ.. ಕೊರೊನಾದಿಂದ ಮುಕ್ತವಾಗಿ, ದೇಶದಲ್ಲಿ ಎಲ್ಲರೂ ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ"ಎಂದು ಯಡಿಯೂರಪ್ಪ ಹೇಳಿದರು.

"ಜನತಾ ಕರ್ಫ್ಯೂವನ್ನು ಜನರು ಸರಿಯಾಗಿ ಪಾಲಿಸುತ್ತಿಲ್ಲ, ಕೊಡುವ ಎಚ್ಚರಿಕೆಗೂ ಜನರು ಸ್ಪಂದಿಸುತ್ತಿಲ್ಲ. ಹಾಗಾಗಿ, ಲಾಕ್ ಡೌನ್ ಅನಿವಾರ್ಯ ಆಗಬಹುದು. ಹಾಗಾಗಿ, ಇನ್ನೂ ಕಠಿಣ ಕ್ರಮ ತೆಗೆದುಕೊಳ್ಳಬಾರದು ಎಂದಿದ್ದರೆ ಜನರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಬಂದು ಸಹಕರಿಸಬೇಕು"ಎಂದು ಯಡಿಯೂರಪ್ಪ ಜನತೆಯಲ್ಲಿ ಮನವಿ ಮಾಡಿದ್ದಾರೆ.
"ಆಕ್ಸಿಜನ್ ಸಮಸ್ಯೆ ಬಗೆಹರಿಸಲು ಸಂಪೂರ್ಣ ಪ್ರಯತ್ನವನ್ನು ಸರಕಾರ ಮಾಡುತ್ತಿದೆ. ಸಂಬಂಧಪಟ್ಟ ಸಚಿವರು ಕೇಂದ್ರದ ಜೊತೆ ಮಾತನಾಡುತ್ತಿದ್ದಾರೆ. ಸದ್ಯದಲ್ಲೇ ಇದಕ್ಕೆ ಪರಿಹಾರ ಸಿಗಬಹುದು ಎನ್ನುವ ವಿಶ್ವಾಸದಲ್ಲಿದ್ದೇವೆ"ಎಂದು ಯಡಿಯೂರಪ್ಪ ಹೇಳಿದರು.
"ಸಾರ್ವಜನಿಕರು ಮುಖ್ಯಮಂತ್ರಿಗಳ ಕಚೇರಿ ಬಳಿ ಬರುವುದು ತಪ್ಪು ಎಂದು ಹೇಳುವುದಿಲ್ಲ. ಆದರೆ, ಈಗಿನ ಸಮಯ ಸರಿಯಿಲ್ಲ. ಹಾಗಾಗಿ, ಏನೇ ತೊಂದರೆ ಇದ್ದರೂ ಅಧಿಕಾರಿಗಳಿಗೆ ತಿಳಿಸಿದರೆ, ಅವರು ಅದರ ಬಗ್ಗೆ ಗಮನ ಹರಿಸುತ್ತಾರೆ"ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.











Click it and Unblock the Notifications