Government Employee: ಸಾಮಾಜಿಕ ಭದ್ರತಾ ವ್ಯವಸ್ಥೆ ಜಾರಿ ಕುರಿತ ಆದೇಶ, ವಿವರ
ಬೆಂಗಳೂರು, ಫೆಬ್ರವರಿ 24: ಕರ್ನಾಟಕ ಸರ್ಕಾರ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರುವ ಅಥವಾ ವಿಸ್ತರಿಸುವ ಬಗ್ಗೆ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಸರ್ಕಾರದಿಂದ ನೇರವಾಗಿ/ ಪರೋಕ್ಷವಾಗಿ ನೇಮಕಗೊಂಡಿರುವ ಅಧಿಕಾರಿ/ ನೌಕರರಿಗೆ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರುವ ಅಥವಾ ವಿಸ್ತರಿಸುವ ಬಗ್ಗೆ ಆದೇಶದಲ್ಲಿ ವಿವರಣೆ ನೀಡಿದೆ. ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಹೇಳಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಡಾ. ವಿಶಾಲ್ ಆರ್. ಸರ್ಕಾರದ ಕಾರ್ಯದರ್ಶಿ, ವಿತ್ತೀಯ ಸುಧಾರಣೆ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ ಸರ್ಕಾರದಿಂದ ನೇರವಾಗಿ/ ಪರೋಕ್ಷವಾಗಿ ನೇಮಕಗೊಂಡಿರುವ ಅಧಿಕಾರಿಗಳು/ ನೌಕರರಿಗೆ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರುವ ಅಥವಾ ವಿಸ್ತರಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

ಸರ್ಕಾರಿ ಇಲಾಖೆಗಳು, ಸರ್ಕಾರಿ ಸಂಸ್ಥೆಗಳು, ಮಂಡಳಿಗಳು, ನಿಗಮಗಳು ಇತ್ಯಾದಿಗಳಲ್ಲಿ ಇರುವ ಒಟ್ಟು ಉದ್ಯೋಗಿಗಳ ಸಂಖ್ಯೆ 11 ಲಕ್ಷಕ್ಕೂ ಹೆಚ್ಚು ಇದ್ದು, ಕರ್ನಾಟಕ ಸರ್ಕಾರವು ಮಾದರಿ ಉದ್ಯೋಗದಾತರಾಗಿ, ಸರ್ಕಾರಿ ಮತ್ತು ಇತರ ಸರ್ಕಾರಿ ಅಂಗ (ಸ್ವಾಯತ್ತ) ಸಂಸ್ಥೆಗಳ ವಿವಿಧ ಉದ್ಯೋಗಿಗಳಿಗೆ (ಖಾಯಂ/ ಗುತ್ತಿಗೆ/ ಹೊರಗುತ್ತಿಗೆ ಇತ್ಯಾದಿ) ವಿವಿಧ ಕಲ್ಯಾಣ ಕ್ರಮಗಳನ್ನು (ಪಿಎಫ್, ಕೆಜಿಐಡಿ, ಇಎಸ್ಐ, ವೈದ್ಯಕೀಯ ಮರುಪಾವತಿ ಇತ್ಯಾದಿ) ಪರಿಚಯಿಸುವಲ್ಲಿ ನಿರಂತರವಾಗಿ ಪ್ರಮುಖ ಪಾತ್ರವಹಿಸುತ್ತಾ ಬಂದಿರುತ್ತದೆ.
ಅಧಿಕಾರಿ/ ನೌಕರರ ಸಾಮಾಜಿಕ ಭದ್ರತೆಯು ಸರ್ಕಾರದ ಪ್ರಮುಖ ವಿಷಯವಾಗಿರುವುದರಿಂದ ಸಾಮಾಜಿಕ ಭದ್ರತೆ ಇದ್ದಲ್ಲಿ, ನೌಕರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ, ಕಾರ್ಯನಿರ್ವಹಿಸುತ್ತಾರೆ.
ಇತ್ತೀಚೆಗೆ, ಅನೇಕ ಬ್ಯಾಂಕುಗಳು ಸರ್ಕಾರಿ ಅಧಿಕಾರಿಗಳು/ ನೌಕರರು ತಮ್ಮ ಉಳಿತಾಯ ಬ್ಯಾಂಕ್ ಖಾತೆಗಳನ್ನು ತೆರೆಯಲು ಆಕರ್ಷಕ ಸಂಬಳ ಪ್ಯಾಕೇಜ್ಗಳನ್ನು ನೀಡುತ್ತಿವೆ, ಇದರಲ್ಲಿ ಅಧಿಕಾರಿಗಳು/ ನೌಕರರಿಗೆ ವಿವಿಧ ರಿಯಾಯಿತಿಗಳು ಮತ್ತು ಅಧಿಕಾರಿ/ ನೌಕರರ ಕುಟುಂಬಗಳಿಗೆ ಹೆಚ್ಚುವರಿ ಪ್ರಯೋಜನಗಳು ಸೇರಿವೆ.
ಈ ಸಂಬಳ ಪ್ಯಾಕೇಜ್ಗಳಲ್ಲಿ, ಬ್ಯಾಂಕುಗಳ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅಗತ್ಯವನ್ನು ಕಡ್ಡಾಯಗೊಳಿಸದೇ ಇರುವುದು, 2 ಅಥವಾ 3 ತಿಂಗಳ ನಿವ್ವಳ ವೇತನವನ್ನು ಓವರ್ ಡ್ರಾಫ್ಟ್ (ಮುಂಗಡ) ಆಗಿ ನೀಡುವುದು, ವಸತಿ ಸಾಲಗಳ ಮೇಲೆ ಕಡಿಮೆ ಬಡ್ಡಿದರವನ್ನು ವಿಸ್ತರಿಸುವುದು, ಉಚಿತ NEFT/ RTGS ವರ್ಗಾವಣೆಗಳು, ಉಚಿತ ಡಿಮ್ಯಾಂಡ್ ಡ್ರಾಫ್ಟ್ಗಳು, ಉಚಿತ ರುಪೇ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ವಿಮೆ, ಬ್ಯಾಗೇಜ್ ವಿಮೆಗಳನ್ನು ನೀಡುವುದು, ಮತ್ತು ಲಾಕರ್ ಬಾಡಿಗೆಯಲ್ಲಿ ರಿಯಾಯಿತಿ ಇತ್ಯಾದಿಗಳನ್ನು ನೀಡುವುದು, ಈ ಕೊಡುಗೆಗಳು ಬ್ಯಾಂಕಿನಿಂದ ಬ್ಯಾಂಕಿಗೆ ಭಿನ್ನವಾಗಿರುತ್ತವೆ.
ಮೇಲಿನ ಸೌಲಭ್ಯಗಳ ಜೊತೆಗೆ, ಅಧಿಕಾರಿ/ ನೌಕರರ ನಿವ್ವಳ ಸಂಬಳವನ್ನು ಅವಲಂಬಿಸಿ ವಿವಿಧ ಯೋಜನೆಗಳ ಅಡಿಯಲ್ಲಿ ವೈಯಕ್ತಿಕ ಅಪಘಾತ ವಿಮೆ (PAI) ವ್ಯಾಪ್ತಿಯನ್ನು ಯಾವುದೇ ಹೆಚ್ಚುವರಿ ಪ್ರೀಮಿಯಂ ಅನ್ನು ವಿಧಿಸದೆ ನೀಡುತ್ತವೆ. ಈ ಪ್ರಯೋಜನಗಳ ಹೊರತಾಗಿಯೂ, ಬ್ಯಾಂಕ್ ನೀಡುವ ಸಂಬಳ ಪ್ಯಾಕೇಜ್ ಸೌಲಭ್ಯಗಳನ್ನು ಕೆಳಗಿನ ಕಾರಣಗಳಿಂದಾಗಿ ಅಧಿಕಾರಿ/ ನೌಕರರು ಪಡೆಯುತ್ತಿಲ್ಲ ಎಂಬುದನ್ನು ಗಮನಿಸಲಾಗಿದೆ
* ಬ್ಯಾಂಕ್ ಸಂಬಳ ಪ್ಯಾಕೇಜ್ಗಳನ್ನು ನೀಡುತ್ತಿದ್ದರೂ ಸಹ, ಸಂಬಳ ಪ್ಯಾಕೇಜ್ಗಳ ಪ್ರಯೋಜನಗಳನ್ನು ಪಡೆಯಲು, ಅಧಿಕಾರಿ/ ನೌಕರರು ಬ್ಯಾಂಕಿಗೆ ನಿರ್ದಿಷ್ಟ ಮನವಿಯನ್ನು ಸಲ್ಲಿಸಬೇಕಾಗಿರುತ್ತದೆ.
* ಕೆಲವು ಅಧಿಕಾರಿ/ ನೌಕರರು ಬ್ಯಾಂಕಿನಲ್ಲಿ ನೀಡಲಾಗುವ ಪ್ರಯೋಜನಗಳ ಬಗ್ಗೆ ಅರಿವಿಲ್ಲದ ಹಾಗೂ ನಿರ್ಲಕ್ಷ್ಯದ ಕಾರಣದಿಂದ ಬ್ಯಾಂಕಿನಲ್ಲಿ ನೀಡುತ್ತಿರುವ ಸಂಬಳ ಪ್ಯಾಕೇಜ್ಗಳನ್ನು ಪಡೆಯುತ್ತಿಲ್ಲ.
* ಕೆಲವು ಅಧಿಕಾರಿ/ ನೌಕರರು ಸಂಬಳ ಪ್ಯಾಕೇಜ್ಗಳನ್ನು ನೀಡದ ಬ್ಯಾಂಕುಗಳೊಂದಿಗೆ ವ್ಯವಹರಿಸುತ್ತಿದ್ದಾರೆ.
ಇದಲ್ಲದೆ, ಸರ್ಕಾರದ ಸಾಮಾಜಿಕ ಭದ್ರತಾ ವಿಮಾ ಯೋಜನೆಗಳಾದ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಯು ಅವಧಿ ವಿಮಾ (Term Insurance) ಯೋಜನೆಯಾಗಿರುತ್ತದೆ ಮತ್ತು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಯು ಅಪಘಾತ ವಿಮಾ ಯೋಜನೆಯಾಗಿದ್ದು, ಅತೀ ಕಡಿಮೆ ಪ್ರೀಮಿಯಂನಲ್ಲಿ (ರೂ. 436 + ರೂ. 20) ತಲಾ ರೂ. 2 ಲಕ್ಷ ವಿಮಾ ಸೌಲಭ್ಯವನ್ನು ಒದಗಿಸುತ್ತದೆ.
ಈ ವಿಮಾ ಯೋಜನೆಗಳ ಜೊತೆಗೆ, ಅನೇಕ ಬ್ಯಾಂಕುಗಳು ಅತೀ ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚುವರಿ ವೈಯಕ್ತಿಕ ಅಪಘಾತ ವಿಮಾ ಯೋಜನೆಗಳನ್ನು ಸಹ ನೀಡುತ್ತಿವೆ. ಇಂತಹ ಸೌಲಭ್ಯಗಳನ್ನು ಸಹ ಅಧಿಕಾರಿ/ ನೌಕರರು ಪಡೆಯಬಹುದಾಗಿದೆ.
ದಿನಾಂಕ 30.01.2025 ರಂದು ನಡೆದ ಸಚಿವ ಸಂಪುಟ ಸಭೆಯ ತೀರ್ಮಾನಿಸಿದಂತೆ, ನೌಕರರ ಮತ್ತು ಅವಲಂಬಿತ ಕುಟುಂಬ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ವಿವಿಧ ಬ್ಯಾಂಕುಗಳು ಒದಗಿಸುವ ಸಂಬಳ ಪ್ಯಾಕೇಜ್ಗಳ ಅಡಿಯಲ್ಲಿ ಖಾತೆಗಳನ್ನು ತೆರೆಯುವುದು/ ಆಯ್ಕೆ ಮಾಡಿಕೊಳ್ಳುವುದನ್ನು ಎಲ್ಲಾ ಅಧಿಕಾರಿ/ ನೌಕರರಿಗೆ (ಸರ್ಕಾರಿ / ಸರ್ಕಾರಿ ಸಂಸ್ಥೆಗಳು, ಇತ್ಯಾದಿ) ಕಡ್ಡಾಯಗೊಳಿಸುವ ಬಗ್ಗೆ ಆದೇಶಿಸಲಾಗಿದೆ.
ಆದೇಶದ ವಿವರ: ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆ ಹಾಗೂ ಸಚಿವ ಸಂಪುಟದ ಸಭೆಯಲ್ಲಿ ತಿರ್ಮಾನಿಸಿದಂತೆ, ನೌಕರರ ಮತ್ತು ಅವಲಂಬಿತ ಕುಟುಂಬ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಈ ಕೆಳಗಿನಂತೆ ಆದೇಶಿಸಲಾಗಿದೆ.
* ವಿವಿಧ ಬ್ಯಾಂಕುಗಳು ಒದಗಿಸುವ ಸಂಬಳ ಪ್ಯಾಕೇಜ್ಗಳ ಅಡಿಯಲ್ಲಿ ಖಾತೆಗಳನ್ನು ತೆರೆಯುವುದು/ ಆಯ್ಕೆ ಮಾಡಿಕೊಳ್ಳುವುದನ್ನು ಎಲ್ಲಾ ಅಧಿಕಾರಿ/ ನೌಕರರಿಗೆ (ಸರ್ಕಾರಿ / ಸರ್ಕಾರಿ ಸಂಸ್ಥೆಗಳು, ಇತ್ಯಾದಿ) ಕಡ್ಡಾಯಗೊಳಿಸಿದೆ.
* ಬ್ಯಾಂಕ್ಗಳು/ ಅಂಚೆ ಕಛೇರಿಗಳು ನೀಡುವ PMJJBY ಮತ್ತು PMSBY ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತ ಆಧಾರದ ಮೇಲೆ ವಿಮಾ ರಕ್ಷಣೆಯನ್ನು ಪಡೆಯಲು ಅಧಿಕಾರಿ/ ನೌಕರರನ್ನು ಸಂಬಂಧಪಟ್ಟ ಇಲಾಖೆ ಪ್ರೋತ್ಸಾಹಿಸುವುದು.
* ಬ್ಯಾಂಕ್ಗಳು ನೀಡುವ ವಿವಿಧ ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತ ಆಧಾರದ ಮೇಲೆ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಪಡೆಯಲು ಅಧಿಕಾರಿ/ ನೌಕರರನ್ನು ಸಂಬಂಧಪಟ್ಟ ಇಲಾಖೆ ಪ್ರೋತ್ಸಾಹಿಸುವುದು.
ವಿವಿಧ ಹಂತಗಳಲ್ಲಿರುವ ವೇತನ ಸೆಳೆಯುವ ಅಧಿಕಾರಿ/ ಹಣ ಸೆಳೆಯುವ ಮತ್ತು ಬಟವಾಡೆ ಮಾಡುವ (ಡಿಡಿಒ)ಗಳು ಈ ಆದೇಶವನ್ನು ಜಾರಿಗೊಳಿಸುವಲ್ಲಿ ಕಚೇರಿ ಮಟ್ಟದಲ್ಲಿ ಜವಾಬ್ದಾರರಾಗಿರುತ್ತಾರೆ. ಮುಂದಿನ ಮೂರು ತಿಂಗಳ ಅವಧಿಯಲ್ಲಿ ತಮ್ಮ ಇಲಾಖೆಗಳಲ್ಲಿ ತಮ್ಮ ಅಧೀನದಲ್ಲಿ ಬರುವ ಕ್ಷೇತ್ರ ಇಲಾಖೆ/ ಅಂಗ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ/ ನೌಕರರು ಸಚಿವ ಸಂಪುಟದ ಆದೇಶದಲ್ಲಿ ಮೇಲೆ ವಿವರಿಸಿದಂತೆ ನೋಂದಾಯಿಸಿಕೊಳ್ಳುವಂತೆ ಇಲಾಖಾ ಮುಖ್ಯಸ್ಥರು ಸೂಕ್ತ ಕ್ರಮವಹಿಸುವುದು ಎಂದು ಆದೇಶ ಹೇಳಿದೆ.












Click it and Unblock the Notifications