ಕರ್ನಾಟಕದ ಸರ್ಕಾರಿ ನೌಕರರಿಗೆ ಸಿಗುವುದೇ ಹೆಚ್ಚುವರಿ ರಜೆ?
ಬೆಂಗಳೂರು,ಫೆಬ್ರವರಿ 03: ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನಗಳು ಮಾತ್ರ ಕೆಲಸ, ಸಾರ್ವಜನಿಕ ರಜೆದಿನಗಳಲ್ಲಿ ಕಡಿತ ಮುಂತಾದ ಶಿಫಾರಸ್ಸುಗಳನ್ನು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರು ಸರ್ಕಾರದ ಮುಂದಿಟ್ಟಿದ್ದು ನೆನಪಿರಬಹುದು. ಈ ಪೈಕಿ ರಜೆ ದಿನಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಮಹತ್ವ ಅದೇಶ ಹೊರಡಿಸಲು ಮುಂದಾಗಿದೆ.
ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆ ಸಿಗುವ ಸಾಧ್ಯತೆಯಿದೆ. ಆದರೆ, 8ಕ್ಕೂ ಅಧಿಕ ವಿವಿಧ ಜಯಂತಿ ಆಚರಣೆ ಸಂದರ್ಭದಲ್ಲಿ ಸಿಗುತ್ತಿದ್ದ ಸಾಂದರ್ಭಿಕ ರಜೆ ರದ್ದಾಗುವ ಸಾಧ್ಯತೆಯಿದೆ.
ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನಗಳ ಕೆಲಸ: ಎಚ್ಡಿಕೆಗೆ ಪ್ರಿಯಾಂಕ್ ಶಿಫಾರಸು
ಆರನೇ ವೇತನ ಆಯೋಗ ನೀಡಿದ್ದ 2ನೇ ವರದಿಯಲ್ಲಿ ರಜೆಗಳಿಗೆ ಸಂಬಂಧಿಸಿದಂತೆ ಕೆಲವು ಶಿಫಾರಸು ಮಾಡಿತ್ತು. ಸಾಂರ್ದಭಿಕ ರಜೆ ಕಡಿತ, ಜಯಂತಿಗಳಿಗೆ ಇರುವ ರಜೆ ರದ್ದು ಸೇರಿ ಕೆಲ ಸಲಹೆಗಳನ್ನು ಆಯೋಗ ನೀಡಿತ್ತು.
6ನೇ ವೇತನ ಆಯೋಗದ ವರದಿಗೆ ಸಂಬಂಧಪಟ್ಟಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ನೇತೃತ್ವದ ಉಪಸಮಿತಿ ವಿವಿಧ ಸಮುದಾಯ, ಸರ್ಕಾರಿ ನೌಕರರ ಸಂಘಟನೆ, ಸರ್ಕಾರಿ ಆಡಳಿತ ಕ್ಷೇತ್ರದ ತಜ್ಞರ ಜೊತೆ ಸಮಾಲೋಚಿಸಿ ಕೆಲ ಶಿಫಾರಸು ಮಾಡಿದೆ.
ಸರ್ಕಾರಿ ನೌಕರರಿಗೆ 15 ಸಾಂದರ್ಭಿಕ ರಜೆ ಇದೆ
ಸರ್ಕಾರಿ ನೌಕರರಿಗೆ ಈಗ ಇರುವಂಥ 15 ಸಾಂದರ್ಭಿಕ ರಜೆಗಳಿವೆ. ಈ ಪೈಕಿ ಮೂರು ಕಡಿಮೆ ಮಾಡಲು ಶಿಫಾರಸು ಬಂದಿದೆ. ಹೀಗಾಗಿ, ತಿಂಗಳಿಗೆ ಒಂದರಂತೆ ವರ್ಷಕ್ಕೆ 12 ಸಿಎಲ್ಗಳಿಗೆ ಕಡಿತಗೊಳ್ಳಲಿದೆ. ಹಬ್ಬ ಹಾಗೂ ವಿವಿಧ ಜಯಂತಿ ಸೇರಿ 23 ರಜೆ ಪೈಕಿ 8 ಜಯಂತಿಗಳನ್ನು ರದ್ದು ಮಾಡುವುದಕ್ಕೆ ಶಿಫಾರಸು ಮಾಡಿರುವ ಸುದ್ದಿ ಬಂದಿದೆ.
ಯಾವ ಯಾವ ಜಯಂತಿಗೆ ರಜೆ ರದ್ದು
ಸದ್ಯದ ಮಾಹಿತಿಗಳ ಪ್ರಕಾರ ಕನಕ ಜಯಂತಿ, ಬಸವ ಜಯಂತಿ, ವಾಲ್ಮೀಕಿ ಜಯಂತಿ, ಮಹಾವೀರ ಜಯಂತಿ, ಮಹಾಲಯ ಅಮಾವಾಸ್ಯೆ, ಈದ್ ಮಿಲಾದ್, ಕಾರ್ಮಿಕ ದಿನ, ಗುಡ್ಫ್ರೈಡೆಗಳಿಗೆ ನೀಡಲಾಗುವ ರಜೆಯನ್ನು ರದ್ದುಗೊಳಿಸಬಹುದು ಎಂದು ಶಿಫಾರಸು ಮಾಡಿದೆ.
ರಜೆ ತೆಗೆದುಕೊಳ್ಳುವ ಪ್ರಮಾಣ ಅಧಿಕ
ಸರ್ಕಾರಿ ನೌಕರರು 100 ಕ್ಕೂ ಹೆಚ್ಚು ರಜೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. 54 ವಾರದ ರಜಾ ದಿನಗಳು, 12 ಎರಡನೇ ಶನಿವಾರ, 21 ಸಾರ್ವತ್ರಿಕ ರಜಾ ದಿನಗಳು ಬರುತ್ತದೆ. 15 ಸಾಂದರ್ಭಿಕ ರಜೆಗಳಿದ್ದು, ರಜಾ ದಿನಗಳ ಸಂಖ್ಯೆ ಹೆಚ್ಚಿರುವ ಕಾರಣ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಕಾರಣಕ್ಕಾಗಿ ರಜೆಯಲ್ಲಿ ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ.
ರಜೆ ಬಗ್ಗೆ ಇನ್ನು ಸ್ಪಷ್ಟ ಮಾಹಿತಿಯಿಲ್ಲ.
ರಾಜ್ಯ ಸರಕಾರಿ ನೌಕರರಿಗೆ ಮಾತ್ರ ಇದು ಸಂಬಂಧಪಟ್ಟದ್ದು. ರಾಜ್ಯದ, ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳು ರಿಸರ್ವ್ ಬ್ಯಾಂಕಿನ ನೆಗೋಶಿಯೇಬಲ್ instruments ಆಕ್ಟ್ -1881 ಪ್ರಕಾರ ಕೆಲಸ ನಿರ್ವಹಿಸಲಿದೆ. ಅಂದರೆ, ಎರಡನೇ ಶನಿವಾರ ರಜೆ, ಮೂರನೇ ಶನಿವಾರ ಕೆಲಸ ನಿರ್ವಹಿಸಲಿದೆ. ಎರಡನೇ ಶನಿವಾರ ರಜೆ ನೀಡುವ ಪದ್ದತಿ 1986ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಅವಧಿಯಿಂದ ಆರಂಭವಾಗಿತ್ತು.