Government Employee; ಸರ್ಕಾರಿ ನೌಕರರು ಆಸ್ತಿ ಘೋಷಿಸುವುದು ಕಡ್ಡಾಯ?
ಬೆಂಗಳೂರು, ಮಾರ್ಚ್ 04: ಕರ್ನಾಟಕದ ಸರ್ಕಾರಿ ನೌಕರರು ಆಸ್ತಿ ವಿವರ ಘೋಷಣೆ ಮಾಡುವುದು ಕಡ್ಡಾಯವಾಗಲಿದೆಯೇ?. ಇಂತಹ ಚರ್ಚೆ ಈಗ ಆರಂಭವಾಗಿದೆ. ಇದಕ್ಕೆ ಕಾರಣವಾಗಿರುವುದು ಸರ್ಕಾರಕ್ಕೆ ಸಲ್ಲಿಕೆಯಾಗಿರುವ ವರದಿ.
ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರ 7ನೇ ವರದಿಯನ್ನು ಕರ್ನಾಟಕ ಆಡಳಿತ ಸುಧಾರಣಾ ಆಯೋಗ 2ರ ಅಧ್ಯಕ್ಷ, ನಿವೃತ್ತ ಮುಖ್ಯಕಾರ್ಯದರ್ಶಿ ಟಿ. ಎಂ. ವಿಜಯಭಾಸ್ಕರ್ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಲ್ಲಿಕೆ ಮಾಡಿದರು.

ಕರ್ನಾಟಕ ಸರ್ಕಾರ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ಅನ್ನು ದಿನಾಂಕ 7/1/2021ರ ಸರ್ಕಾರಿ ಆದೇಶದ ಮೂಲಕ ರಚಿಸಲಾಗಿದೆ. ಆಯೋಗವು 30 ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು 4,512 ಶಿಫಾರಸುಗಳನ್ನು ಒಳಗೊಂಡ 6 ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ. 7ನೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ದಿನಾಂಕ 11/01/2021ರಿಂದ 31/10/2023ರವರೆಗೆ ಆಯೋಗವು 30 ಜಿಲ್ಲೆಗಳು, 74 ತಾಲ್ಲೂಕುಗಳು, 171 ನಗರ/ ಪಟ್ಟಣಗಳಿಗೆ ಮತ್ತು 53 ಗ್ರಾಮ ಪಂಚಾಯಿತಿಗಳಿಗೆ ಹಾಗೂ 298 ಕಚೇರಿಗಳು/ ಸಂಸ್ಥೆಗಳಿಗೆ ಭೇಟಿ ನೀಡಿ 4,564 ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಿದೆ. 511 ಸಭೆಗಳನ್ನು ನಡೆಸಲಾಗಿದ್ದು, ಇದರಲ್ಲಿ ಭಾಗವಹಿಸಿದವರ ಸಂಖ್ಯೆ ಸುಮಾರು 7,647.
ಆಯೋಗದ 7ನೇ ವರದಿಯಲ್ಲಿ 9 ಇಲಾಖೆಗಳನ್ನು ತೆಗೆದುಕೊಳ್ಳಲಾಗಿದ್ದು, ವರದಿಯು 527 ಶಿಫಾರಸುಗಳನ್ನು ಒಳಗೊಂಡಿದೆ. ಇದಲ್ಲದೆ, ಕಂದಾಯ ಇಲಾಖೆಗೆ ಸಂಬಂಧಿಸಿದ ಶಿಫಾರಸುಗಳನ್ನು ಸಹ ವರದಿಯಲ್ಲಿ ಸೇರಿಸಲಾಗಿದೆ.
ಆಸ್ತಿ ವಿವರ ಸಲ್ಲಿಕೆ ಕಡ್ಡಾಯ: ಈ ವರದಿಯಲ್ಲಿ ಸರ್ಕಾರಿ ನೌಕರರು ಆಸ್ತಿ ವಿವರ ಘೋಷಣೆ ಮಾಡುವುದು ಕಡ್ಡಾಯ ಮಾಡುವ ಕುರಿತು ಶಿಫಾರಸುಗಳನ್ನು ಮಾಡಲಾಗಿದೆ. ಆದರೆ ಇದು ಕೇವಲ ಶಿಫಾರಸು ಮಾತ್ರ. ಇದನ್ನು ಸರ್ಕಾರ ಒಪ್ಪಿ ಅಧಿಕೃತವಾಗಿ ಜಾರಿಗೊಳಿಸಿದ ಬಳಿಕ
ಭಾರತ ಸರ್ಕಾರವು ಐಎಎಸ್ ಅಧಿಕಾರಿಗಳು ಸಲ್ಲಿಸಿದ ಸ್ಥಿರಾಸ್ತಿ ವರದಿಗಳನ್ನು ಸಾರ್ವಜನಿಕ ಮಾಹಿತಿಗಾಗಿ ಲಭ್ಯಗೊಳಿಸುತ್ತದೆ. ಅದೇ ರೀತಿ, ಕರ್ನಾಟಕ ಸರ್ಕಾರದ ಎಲ್ಲಾ ಗ್ರೂಪ್ ಎ, ಬಿ ಮತ್ತು ಸಿ ನೌಕರರು ಮತ್ತು ಸಾರ್ವಜನಿಕ ವಲಯದ ಮಂಡಳಿಗಳು ಮತ್ತು ನಿಗಮಗಳಲ್ಲಿ ಕೆಲಸ ಮಾಡುವ ನೌಕರರ ಆಸ್ತಿ ಮತ್ತು ಹೊಣೆಗಾರಿಕೆ ತಃಖ್ತೆಗಳನ್ನು ಆಡಳಿತ ಇಲಾಖೆಗಳ ವೆಬ್ಸೈಟ್ಗಳಲ್ಲಿ ಸಾರ್ವಜನಿಕ ಮಾಹಿತಿಗಾಗಿ ಲಭ್ಯಗೊಳಿಸಬಹುದು ಎಂದು ಹೇಳಿದೆ.
ನಿಯಮ ಹೇಳುವುದೇನು?: ಕರ್ನಾಟಕದ ಸರ್ಕಾರಿ ನೌಕರರು ಆಸ್ತಿ ಮತ್ತು ದಾಯಿತ್ವ ತಃಖ್ತೆ ಸಲ್ಲಿಸುವ ಬಗ್ಗೆ ನಿಯಮ ಏನು ಹೇಳುತ್ತದೆ?. ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು 1966ರ ನಿಯಮ 23ರ ಪ್ರಕಾರ ಸರ್ಕಾರಿ ನೌಕರರು ಸೇವೆಗೆ ಸೇರಿದ ದಿನಾಂಕದಿಂದ ಪ್ರತಿ ಆರ್ಥಿಕ ವರ್ಷದ ಅಂತ್ಯಕ್ಕೆ ಆಸ್ತಿ ಮತ್ತು ದಾಯಿತ್ವ ತ:ಖ್ತೆಗಳನ್ನು ಸರ್ಕಾರವು ನಿಗಧಿಪಡಿಸಿದ ನಮೂನೆಯಲ್ಲಿ ಸಂಬಂಧಿಸಿದ ಸಕ್ಷಮ ಪ್ರಾಧಿಕಾರಿಗಳಿಗೆ ಕಡ್ಡಾಯವಾಗಿ ಸಲ್ಲಿಸಬೇಕಾಗಿರುತ್ತದೆ.
ಈ ನಿಯಮದ ಪಾಲನೆಗಾಗಿ ಅಧಿಕಾರಿಗಳಿಗೆ/ ಸಿಬ್ಬಂದಿಗಳಿಗೆ ಪ್ರತ್ಯೇಕವಾಗಿ ಆಗಾಗ್ಗೆ ಪತ್ರ ಬರೆದು ಎಚ್ಚರಿಸಲಾಗುತ್ತದೆ. ಆದಾಗ್ಯೂ ಕೆಲವು ಅಧಿಕಾರಿಗಳು/ ಸಿಬ್ಬಂದಿಗಳು ಆಸ್ತಿ ಮತ್ತು ದಾಯಿತ್ವ ತ:ಖ್ತೆಗಳನ್ನು ಸರಿಯಾಗಿ ಸಲ್ಲಿಸದೇ ಇರುವುದು ಗಮನಕ್ಕೆ ಬಂದಿರುತ್ತದೆ. ಈಗಾಗಲೇ ಸಲ್ಲಿಸಲಾಗಿರುವ ಅಧಿಕಾರಿಗಳ/ ಸಿಬ್ಬಂದಿಗಳ ಆಸ್ತಿ ಮತ್ತು ದಾಯಿತ್ವ ತ:ಖ್ತೆಗಳನ್ನು ಪರಿಶೀಲಿಸಲಾಗಿ ನಮೂನೆಯಲ್ಲಿನ ಚರ/ ಚಿರಾಸ್ತಿಗಳ ಕಾಲಂಗಳಲ್ಲಿ ಸರಿಯಾದ ಮಾಹಿತಿಗಳನ್ನು ಭರ್ತಿಮಾಡಿ ಕಳುಹಿಸದಿರುವುದು ಕಂಡು ಬಂದಿರುತ್ತದೆ. ಆದುದರಿಂದ ಆಸ್ತಿ ಮತ್ತು ದಾಯಿತ್ವ ಶಕ್ತಿಗಳನ್ನು ಸಲ್ಲಿಸುವಾಗ ಯಾವ ಅಂಶಗಳನ್ನು ಭರ್ತಿ ಮಾಡಬೇಕು ಎಂಬ ಮಾಹಿತಿಯನ್ನು ನೀಡಲಾಗಿದೆ.
ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಆರ್) ಅಡಿ ವಿವಿಧ ಶಿಫಾರಸುಗಳನ್ನು ಮಾಡಿದೆ. ಇದರದಲ್ಲಿ ಆಸ್ತಿ ವಿವರಗಳನ್ನು ಸಹ ಸೇರಿಸಲಾಗಿದೆ. ಸರ್ಕಾರ ಈ ವರದಿಯನ್ನು ಒಪ್ಪಿ ಅದನ್ನು ಜಾರಿಗೊಳಿಸುತ್ತದೆಯೇ? ಎಂದು ಕಾದು ನೋಡಬೇಕಿದೆ.












Click it and Unblock the Notifications