ನಾಡಿನ ಸಮಸ್ತ ಕುಡುಕರಿಗೆ ಸರಕಾರದಿಂದ ಸಿಹಿ ಟಾನಿಕ್
ಬೆಂಗಳೂರು, ನ 7: ಪಕ್ಕದ ಕೇರಳದಲ್ಲಿ ಉಮ್ಮನ್ ಚಾಂಡಿ ಸರಕಾರ ಮದ್ಯಪಾನ ನಿಷೇಧಕ್ಕೆ ಮುಂದಾಗಿದ್ದರೆ, ಇತ್ತ ಕರ್ನಾಟಕ ಸರಕಾರ ಕುಡುಕರಿಗೆ ಸದ್ಯದಲ್ಲೇ ಸಿಹಿಸುದ್ದಿ ನೀಡಲು ಮುಂದಾಗಿದೆ.
ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ವಿತರಿಸಲಾಗುವ ಮದ್ಯದ ಮೇಲೆ ವಿಧಿಸಲಾಗಿದ್ದ ಮೌಲ್ಯವರ್ಧಿತ ತೆರಿಗೆಯನ್ನು (VAT) ಹಿಂದಕ್ಕೆ ಪಡೆಯಲು ಸರಕಾರ ನಿರ್ಧರಿಸಿದೆ.
ಬಾರ್ ಮಾಲೀಕರ ಮನವಿಯಂತೆ ವ್ಯಾಟ್ ಶೇ. 5.5 ತೆರಿಗೆಯನ್ನು ರದ್ದು ಮಾಡಲು ನಿರ್ಧರಿಸಲಾಗಿದೆ ಎಂದು ಅಬಕಾರಿ ಸಚಿವ ಮತ್ತು ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ ಅವರ ಒಪ್ಪಿಗೆಯನ್ನು ಪಡೆಯಲಾಗುವುದು. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಲಿದ್ದೇವೆಂದು ಸಚಿವರು ಹೇಳಿದ್ದಾರೆ. (ರಾಜ್ಯದಲ್ಲಿ ಮದ್ಯ ಮಾರಾಟ ; ಲೀಟರುಗಳ ಲೆಕ್ಕದಲ್ಲಿ)
ಇನ್ನು ಮುಂದೆ ಮದ್ಯದಂಗಡಿ ಪರವಾನಿಗೆ ನೀಡುವಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ನೀಡುವ ಪದ್ದತಿಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಸಿಎಂ ಜೊತೆ ಮಾತುಕತೆ ನಡೆಸಿ ಪರವಾನಿಗೆಯಲ್ಲಿನ ಪ್ರಮಾಣವನ್ನು ನಿರ್ಧರಿಸಲಾಗುವುದು ಎಂದು ಸಚಿವ ಜಾರಕಿಹೊಳಿ ಹೇಳಿದ್ದಾರೆ.

ಬಾರ್ ಗಳಲ್ಲಿ ಮಾರಾಟ ಮಾಡುವ ಮದ್ಯಗಳಿಗೆ ಮಾತ್ರ ವ್ಯಾಟ್ ವಿಧಿಸಲಾಗುತ್ತಿದೆ. ವೈನ್ ಶಾಪ್ ಗಳನ್ನು ಈ ತೆರಿಗೆಯಿಂದ ಹೊರಗಿಡಲಾಗಿತ್ತು. ಹಾಗಾಗಿ ಗ್ರಾಹಕರು ವೈನ್ ಶಾಪ್ ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದಾರೆಂದು ಬಾರ್ ಮಾಲೀಕರು ಸಭೆಯ ವೇಳೆ ಸಚಿವರಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದರು.
ಬಾರ್ ಮತ್ತು ವೈನ್ ಸ್ಟೋರ್ ಗಳಲ್ಲಿನ VAT ತಾರತಮ್ಯ ತೆಗೆದು ಹಾಕಲು ಸರಕಾರ ನಿರ್ಧರಿಸಿದೆ. ಹಾಗಾಗಿ ಮದ್ಯ ಮಾರಾಟದ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯಲು ಸರಕಾರ ನಿರ್ಧರಿಸಿದೆ ಎಂದು ಸಚಿವ ಜಾರಕಿಹೊಳಿ ಸಭೆಯ ನಂತರ ಹೇಳಿಕೆ ನೀಡಿದ್ದಾರೆ.
ಸತ್ಯ ಒಪ್ಪಿಕೊಂಡ ಸಚಿವ: ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮಾಸಿಕ 250-300 ಕೋಟಿ ಲಂಚ ನೀಡಬೇಕಾಗುತ್ತದೆ ಎನ್ನುವ ಆರೋಪಕ್ಕೆ ಉತ್ತರಿಸಿದ ಜಾರಕಿಹೊಳಿ, ಇಲಾಖೆ ಭ್ರಷ್ಟಾಚಾರ ಮುಕ್ತವಾಗಿಲ್ಲ ಎನ್ನುವ ಸತ್ಯವನ್ನು ಒಪ್ಪಿಕೊಳ್ಳುತ್ತೇನೆ. ಆದರೂ ನಾವು ಇಲಾಖೆಯನ್ನು ಲಂಚಮುಕ್ತವಾಗಿರಿಸಲು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ.












Click it and Unblock the Notifications