ಮಧುಗಿರಿ ಏಕಶಿಲಾ ಬೆಟ್ಟ ಹಾಗೂ ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ ಅನುಮೋದನೆ
ರಾಜ್ಯದ ಎರಡು ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ರೋಪ್ ವೇ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದರಿಂದ ಸಾರ್ವಜನಿಕರನ್ನು ಆಕರ್ಷಿಸುವ ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸುವ ದೃಷ್ಟಿಯಿಂದ ಸರ್ಕಾರ ರೋಪ್ ವೇಗೆ ಅನುಮೋದನೆ ನೀಡಿದೆ.
ಹೌದು.. ಕೊಪ್ಪಳದ ಗಂಗಾವತಿ ತಾಲೂಕಿನ ಚಿಕ್ಕರಾಂಪೂರ ಗ್ರಾಮದ ಅಂಜನಾದ್ರಿ ಬೆಟ್ಟ ಹಾಗೂ ತುಮಕೂರಿನ ಮಧುಗಿರಿಯ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಕಾಮಗಾರಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಇದರ ನಿರ್ಮಾಣ ಕಾರ್ಯಕ್ಕಾಗಿ ಶೀರ್ಘವೇ ಟೆಂಡರ್ ಕರೆಯುವ ಸಾಧ್ಯತೆ ಇದೆ.

ಮಧುಗಿರಿ ಏಕಶಿಲಾ ಬೆಟ್ಟ ರೋಪ್ ವೇ
ತುಮಕೂರಿನ ಮಧುಗಿರಿಯ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಯೋಜನೆಗೆ ಒಂತ್ತು ಎಕರೆ ಜಾಗ ಮೀಡಲು ಇಡಲಾಗಿದೆ. 50 ಕೋಟಿ ರೂಪಾಯಿಯಲ್ಲಿ ಈ ರೋಪ್ ವೇ ನಿರ್ಮಾಣಗೊಳ್ಳಲಿದೆ. ಹಂತ ಹಂತವಾಗಿ ಸರ್ಕಾರ ಹಣ ಬಿಡುಗಡೆ ಮಾಡಲಿದೆ. ಇದಕ್ಕಾಗಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದೆ.
ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ
ಇನ್ನೂ ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ ಅನುಮೋದನೆ ನೀಡಿದ ಕಾರಣ ಈಗಾಗಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರ ನೇತೃತ್ವದಲ್ಲಿ ಕೇಂದ್ರ ಆರ್ಐಟಿಇಎಸ್ ಸಂಸ್ಥೆಯ ಪ್ರತಿನಿಧಿಗಳು ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ರೋಪ್ ವೇ ಮೂಲಕ 800 ಭಕ್ತಾಧಿಗಳು ಒಂದು ಗಂಟೆಯಲ್ಲಿ ಅಂಜನಾದ್ರಿ ಬೆಟ್ಟಕ್ಕೆ ತಲುಪಬಹುದು. ಇದು ಸುಮಾರು 450 ಮೀ. ಉದ್ದದ ರೋಪ್ ವೇ ಆಗಿದೆ.

ಅಂಜನಾದ್ರಿ ಬೆಟ್ಟ ಕೇವಲ ಧಾರ್ಮಿಕ ತಾಣವಷ್ಟೇ ಅಲ್ಲ. ದೇಶ ಮತ್ತು ವಿದೇಶಗಳಿಂದ ಕೋಟ್ಯಾಂತರ ಜನ ಇಲ್ಲಿ ಬರುತ್ತಾರೆ. ಪ್ರತಿ ಶನಿವಾರ, ಭಾನುವಾರ, ಅಮಾವಾಸ್ಯೆ, ಹುಣ್ಣಿಮೆ, ಹನುಮ ಜಯಂತಿ, ಹನುಮಮಾಲಾ ವಿಸರ್ಜನೆ ಹೀಗೆ ವಿಶೇಷ ದಿನಗಳಲ್ಲಿ ಜನಸಂದಣಿ ಇರುತ್ತದೆ. ಜನಸಂದಣಿ ಹೆಚ್ಚಾದಂತೆ ಭಕ್ತರು ಬೆಟ್ಟದ ಮೆಟ್ಟಿಲುಗಳ ಮೇಲೆ ಒಂದೊಂದು ಹೆಜ್ಜೆ ಇಡಲು ಪರದಾಡುವ ಸ್ಥಿತಿ ಇರುತ್ತದೆ.
ಅಂಜನಾದ್ರಿ ಪ್ರಖ್ಯಾತಿ ಪಡೆದ ಬಳಿಕ ದೇವಸ್ಥಾನಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಈ ಬೆಟ್ಟಕ್ಕೆ ಎತ್ತರದ 575 ಮೆಟ್ಟಿಲುಗಳಿದ್ದು ವಯಸ್ಸಾದವರು, ಮಕ್ಕಳು, ಗಂಭೀರ ಕಾಯಿಲೆಗಳು ಇರುವವರು ಮೆಟ್ಟಿಲು ಹತ್ತುವುದು ತುಂಬಾ ಕಷ್ಟ. ಅಲ್ಲದೆ ಬೆಟ್ಟ ಏರುವಾಗಲೇ ಕಳೆದ ಏಳೆಂಟು ವರ್ಷಗಳಲ್ಲಿ ಸಾಕಷ್ಟು ಜನ ಮೃತಪಟ್ಟಿದ್ದಾರೆ. ಹೀಗಾಗಿ ರೋಪ್ ವೇ ಆದರೆ ಬೆಟ್ಟಕ್ಕೆ ಹೋಗುವ ದಾರಿ ಸುಗಮವಾಗಲಿದೆ.
ಈ ಬಗ್ಗೆ ಮಾತನಾಡಿದ ಗಾಲಿ ಜನಾರ್ಧನ ರೆಡ್ಡಿ, 'ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಜೊತೆ ಮಾತುಕತೆ ನಡೆಸಿ, ರೋಪ್ ವೇ ನಿರ್ಮಾಣಕ್ಕೆ ಮನವಿ ಮಾಡಿಕೊಂಡಿದ್ದೆನು. ಮನವಿಗೆ ಅವರು ಸ್ಪಂದಿಸಿದ್ದಾರೆ. ರೋಪ್ ವೇ ನಿರ್ಮಾಣ ಮಾಡಲು ಒಪ್ಪಿಗೆ ನೀಡಿದ್ದಾರೆ. ರಾಜ್ಯ ಸರ್ಕಾರ ಕೂಡ ಅನುಮೋದನೆ ನೀಡಿದೆ. ಸ್ಥಳ ಪರಿಶೀಲನಾ ವರದಿ ಸರ್ಕಾರಕ್ಕೆ ಸಲ್ಲಿಸಿದ ಬಳಿಕ ಕಾಮಗಾರಿ ಶುರುವಾಗಲಿದೆ. ಇದು ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ' ಎಂದರು.












Click it and Unblock the Notifications