ಇವತ್ತು ಛತ್ರಿ ತಂದಿರದಿದ್ದರೆ ನಿಮ್ಮನ್ನು ನೀವೇ ಬೈದುಕೊಳ್ಳಿ
ಬೆಂಗಳೂರು, ಜೂ. 16: ಮುಂಗಾರು ಮಾರುತಗಳ ಪರಿಣಾಮ ಜೂನ್ 15 ರಂದು ರಾಜ್ಯಾದ್ಯಂತ ಮಳೆಯಾಗಿದೆ. ಜೂನ್ 16 ರಂದು ಬೆಂಗಳೂರು ಸೇರಿದಂತೆ ಹಲವೆಡೆ ಗುಡುಗಿನಿಂದ ಕೂಡಿದ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಇಡೀ ದಿನ ಮೋಡ ಕವಿದ ವಾತಾವರಣ ಇರಲಿದ್ದು ಸಂಜೆ ಅಥವಾ ರಾತ್ರಿ ಗುಡುಗಿನಿಂದ ಕೂಡಿದ ಮಳೆ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.[ದೇಶಾದ್ಯಂತ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆ]

ಸೋಮವಾರ ಮಹಾನಗರದಲ್ಲಿ 0.7 ಮೀ ಮೀ ಮಳೆಯಾಗಿದೆ. ಗರಿಷ್ಠ 29 ಡಿಗ್ರಿ ಮತ್ತು ಕನಿಷ್ಠ 20 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ಮಂಗಳವಾರ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು ಮಹತ್ವದ ಯಾವ ಬದಲಾವಣೆ ಆಗುವುದಿಲ್ಲ.
ಉಳಿದಂತೆ ರಾಜ್ಯದ ಕರಾವಳಿ ಹಾಗೂ ಉತ್ತರಕರ್ನಾಟದ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಮೈಸೂರು ಭಾಗದಲ್ಲಿ ಸಾಧಾರಣ ಮಳೆ ಸುರಿದಿದೆ. ವಿಜಯಪುರದಲ್ಲಿ ಧಾರಾಕಾರ ಮಳೆ ಸುರಿದಿದ್ದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ.[ಮಳೆ ಬಂದರೆ ಬೆಂಗಳೂರಿಗರ ಕತೆ]
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿದ್ದ ಮಳೆ ಸೋಮವಾರ ಇಳಿಮುಖವಾಗಿದ್ದು, ಮುಂಡಗೋಡು, ಹಳಿಯಾಳ ವ್ಯಾಪ್ತಿಯ ಅರೆ ಬಯಲುಸೀಮೆಯಲ್ಲಿ ತುಂತುರು ಮಳೆಯಾಗಿದೆ. ದಾಂಡೇಲಿ, ಮುಂಡಗೋಡ ಹಾಗೂ ಹಳಿಯಾಳದಲ್ಲಿ ಕೆಲ ಸಮಯ ತುಂತುರು ಮಳೆಯಾಗಿದೆ. ಮಂಗಳೂರು ಮತ್ತು ಸುಳ್ಯ ಮತ್ತು ಕಾಸರಗೋಡು ಭಾಗದಲ್ಲೂ ಉತ್ತಮ ಮಳೆಯಾಗಿದೆ.
ರಾಜ್ಯಾದ್ಯಂತ ಕೃಷಿ ಕೆಲಸಗಳು ಆರಂಭಗೊಂಡಿವೆ. ಬಯಲು ಸೀಮೆ ಭಾಗದಲ್ಲಿಯೂ ಮಳೆಯಾಗಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಈ ಬಾರಿ ಮುಂಗಾರು ಕುಂಠಿತ ಎಂದೇ ಹೇಳಲಾಗಿತ್ತಾದರೂ ಹದ ಮಳೆ ಬೀಳುತ್ತಿರುವುದು ಜಲಾಶಯಗಳ ಮಟ್ಟದ ಏರಿಕೆಗೂ ಕಾರಣವಾಗಿದೆ.












Click it and Unblock the Notifications