5 ಗಂಟೆ ತಡವಾಗಿ ಸದನಕ್ಕೆ ಬಂದ ಸಿಎಂ ಎಚ್.ಡಿ.ಕುಮಾರಸ್ವಾಮಿ!
ಬೆಂಗಳೂರು, ಜುಲೈ 23 : ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತದ ಮೇಲಿನ ಚರ್ಚೆಯು ನಿರ್ಣಾಯಕ ಹಂತ ತಲುಪಿದೆ. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಮಧ್ಯಾಹ್ನ ವಿಧಾನಸೌಧಕ್ಕೆ ಆಗಮಿಸಿದರು.
ಮಂಗಳವಾರ ಸ್ಪೀಕರ್ ರಮೇಶ್ ಕುಮಾರ್ ಭೋಜನ ವಿರಾಮವನ್ನೂ ನೀಡದರೆ ಕಲಾಪವನ್ನು ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬೆಳಗ್ಗೆಯಿದ ವಿಧಾನಸೌಧಕ್ಕೆ ಆಗಮಿಸಿರಲಿಲ್ಲ. ಇದು ಪ್ರತಿಪಕ್ಷ ಬಿಜೆಪಿ ಆಕ್ರೋಶಕ್ಕೂ ಕಾರಣವಾಗಿತ್ತು.
ಎಚ್. ಡಿ. ಕುಮಾರಸ್ವಾಮಿ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿಯೇ ಇದ್ದರು. ಬೆಳಗ್ಗೆ ಎಚ್. ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ಕೊಟ್ಟಿದ್ದ ಕುಮಾರಸ್ವಾಮಿ ಬಳಿಕ ಹೋಟೆಲ್ಗೆ ವಾಪಸ್ ಆಗಿದ್ದರು. ಕೆಲವು ಸಚಿವರು ಹೋಟೆಲ್ಗೆ ಆಗಮಿಸಿ ಸಿಎಂ ಭೇಟಿಯಾಗಿದ್ದರು.

ಸಚಿವರು ವಿಧಾನಸೌಧಕ್ಕೆ ಆಗಮಿಸಿ ಕಲಾಪದಲ್ಲಿ ಪಾಲ್ಗೊಂಡರೂ ಎಚ್. ಡಿ. ಕುಮಾರಸ್ವಾಮಿ ಆಗಮಿಸಿರಲಿಲ್ಲ. ಮಧ್ಯಾಹ್ನ 3.15ರ ವೇಳೆಗೆ ಕುಮಾರಸ್ವಾಮಿ ವಿಧಾನಸೌಧಕ್ಕೆ ಆಗಮಿಸಿ ಕಲಾಪದಲ್ಲಿ ಪಾಲ್ಗೊಂಡಿದ್ದಾರೆ.
ಬೆಳಗ್ಗೆ ಕಲಾಪ ಆರಂಭವಾದಾಗ ಬಿಜೆಪಿ ಸದಸ್ಯ ಕೆ. ಎಸ್. ಈಶ್ವರಪ್ಪ, "ಸಿಎಂ ಅವರೇ ಸದನಕ್ಕೆ ಇನ್ನೂ ಬಂದಿಲ್ಲ ಎಂದ ಮೇಲೆ ಬೇರೆ ಶಾಸಕರು ಯಾಕೆ ಬರುತ್ತಾರೆ?. ಯಥಾ ರಾಜ ತಥಾ ಪ್ರಜಾ ಎನ್ನುವ ಹಾಗೆ ಪರಿಸ್ಥಿತಿ ಆಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಸದ್ಯ ಕಾಂಗ್ರೆಸ್ ಸಿಎಲ್ಪಿ ನಾಯಕ ಸಿದ್ದರಾಮಯ್ಯ ಸದನದಲ್ಲಿ ಭಾಷಣ ಮಾಡುತ್ತಿದ್ದಾರೆ. ಬಳಿಕ ಎಚ್. ಡಿ. ಕುಮಾರಸ್ವಾಮಿ ವಿದಾಯದ ಭಾಷಣ ಮಾಡಲಿದ್ದಾರೆ.












Click it and Unblock the Notifications