ಡಿಸೆಂಬರ್ 8 ರಂದು ಭಾರತ ಬಂದ್: ಕರ್ನಾಟಕ ರೈತ ಸಂಘ ಬೆಂಬಲ
ಬೆಂಗಳೂರು, ಡಿಸೆಂಬರ್ 07: ಕೇಂದ್ರದ ನೂತನ ಕೃಷಿ ಮಸೂದೆ ವಿರೋಧಿಸಿ ಡಿ.8 ರಂದು ಕರೆ ನೀಡಿರುವ ಬಂದ್ಗೆ ಕರ್ನಾಟಕ ರೈತ ಸಂಘ ಬೆಂಬಲ ಸೂಚಿಸಿದೆ.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ ಚಂದ್ರಶೇಖರ್ ಮಾತನಾಡಿ, ಸಂಘದ 300ಕ್ಕೂ ಹೆಚ್ಚು ರೈತರು ಬೆಂಬಲ ಸೂಚಿಸಿದ್ದಾರೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುವ ಭಾರತ ಬಂದ್ ನಲ್ಲಿ ನಾವು ಕೂಡ ಪಾಲ್ಗೊಳ್ಳಲಿದ್ದೇವೆ ಎಂದು ಮಾಹಿತಿ ನೀಡಿದರು.
ಬೇರೆ ಬೇರೆ ಜಿಲ್ಲೆಗಳಿಂದ ರೈತರು ಮಂಗಳವಾರ ಬೆಂಗಳೂರಿಗೆ ಆಗಮಿಸಲಿದ್ದು, ಇಲ್ಲಿ ಎಲ್ಲರೂ ಸೇರಿ ಪ್ರತಿಭಟನೆ ನಡೆಸಲಿದ್ದೇವೆ. ನಾವು ಕೂಡ ಎಪಿಎಂಸಿ ಬಿಲ್ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ಕೇಂದ್ರ ಸರ್ಕಾರ ತಂದಿರುವ ಹೊ ಕೃಷಿ ಕಾಯ್ದೆಗಳಿಂದ ರೈತರ ಕಲ್ಯಾಣವಾಗುವುದಿಲ್ಲ ಎಂದರು.

ತಮ್ಮ ಸಂಘದ 12ಕ್ಕೂ ಹೆಚ್ಚು ಮಂದಿ ದೆಹಲಿ, ಪಂಜಾಬ್ನ ಗಡಿಯಲ್ಲಿ ವಾರಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಕರ್ನಾಟಕ ಬಂದ್ಗೆ ಬೆಂಬಲ ನೀಡಿವೆ.
50 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರೈತರು ಪ್ರತಿಭಟನಾ ಮೆರವಣಿಗೆ, ಸಾರ್ವಜನಿಕ ಸಭೆಯನ್ನು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸಲಿದ್ದಾರೆ.
ಕೇಂದ್ರ ಸರ್ಕಾರ ರೈತ ವಿರೋಧಿ ಮಸೂದೆಗಳನ್ನು ತರಾತುರಿಯಲ್ಲಿ ಸಂಸತ್ತಿನಲ್ಲಿ ಮಂಡಿಸಿ, ಸರಿಯಾದ ಚರ್ಚೆಗೂ ಅವಕಾಶ ನೀಡದೇ, ವಿರೋಧಪಕ್ಷಗಳ ಹಕ್ಕುಗಳನ್ನು ಮೊಟಕುಗೊಳಿಸಿ ಅಸಾಂವಿಧಾನಿಕವಾಗಿ ಜಾರಿಗೊಳಿಸಿತು. ಹೀಗೆ ಕಾನೂನುಗಳನ್ನು ಆಕ್ರಮಣಕಾರಿಯಾಗಿ ಜಾರಿಗೊಳಿಸಿದ್ದು ದೇಶದ ಇತಿಹಾಸದಲ್ಲೇ ಇದೇ ಮೊದಲು.
ದೇಶದ ರೈತರು ಅಲ್ಪಸ್ವಲ್ಪ ಉಸಿರಾಡುತ್ತಿರುವುದು ಕೃಷಿ ಉತ್ಪನ್ನ ಮಾರುಕಟ್ಟೆಗಳು ಮತ್ತು ಕನಿಷ್ಠ ಬೆಂಬಲ ಬೆಲೆಯಿಂದಾಗಿ. ಆದರೆ ಎಪಿಎಂಸಿಗಳನ್ನು ಕೇಂದ್ರ ಸರ್ಕಾರ ನಗಣ್ಯಗೊಳಿಸುವ, ಅದರ ಮೂಲಕ ನಾಶಪಡಿಸುವ ಉದ್ದೇಶ ಹೊಂದಿದೆ. ಖಾಸಗಿ ಮಂಡಿಗಳನ್ನು ತಂದು, ರೈತರನ್ನು ಮೊದಮೊದಲು ಆಕರ್ಷಿಸಿ ನಂತರ ಪಾತಾಳಕ್ಕೆ ತಳ್ಳುವ ಕಾಯ್ದೆಯಿದು ಎಂದು ಆರೋಪಿಸಿದರು.












Click it and Unblock the Notifications