ಯುಪಿಎಸ್ಸಿ: ರಾಜ್ಯಕ್ಕೆ ಹೆಮ್ಮೆ ತಂದ ಅಭ್ಯರ್ಥಿಗಳು
ಬೆಂಗಳೂರು, ಜು. 04: : ನಾಗರಿಕ ಸೇವಾ ಹುದ್ದೆಗಳ ಫಲಿತಾಂಶದಲ್ಲಿ ರಾಜ್ಯದ ವಿದ್ಯಾರ್ಥಿಗಳು ಮಹತ್ತರ ಸಾಧನೆ ಮಾಡಿದ್ದಾರೆ. ಐಎಎಸ್, ಐಎಫ್ಎಸ್, ಐಪಿಎಸ್ ಮತ್ತು ಸೆಂಟ್ರಲ್ ಸರ್ವಿಸ್ನ 2014ನೇ ಸಾಲಿನ ಅಂತಿಮ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯಕ್ಕೆ ಟಾಪ್ 10 ಶ್ರೆಂಯಾಕದಲ್ಲೂ ಸ್ಥಾನ ಸಿಕ್ಕಿದೆ.
ಉಡುಪಿಯ ಅಂಬಾಗಿಲಿನ ನಿತೀಶ್ ಕೆ. ದೇಶಕ್ಕೇ 8ನೇ ಸ್ಥಾನ ಪಡೆದಿದ್ದಾರೆ. ಫೌಜಿಯಾ (31), ಬಾಲಾಜಿ (36), ಪ್ರಶಾಂತ್ ಎಂ.ಎಸ್. (47) ಅವರು ಟಾಪ್ -100 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.[ಯುಪಿಎಸ್ಸಿ : ನಾಲ್ಕೂವರೆ ಅಡಿಯ ಇರಾಳ ಎತ್ತರದ ಸಾಧನೆ]
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸಿದ ಈ ನಾಗರಿಕ ಸೇವಾ ಪರೀಕ್ಷೆಯಲ್ಲಿ ಒಟ್ಟಾರೆ ರಾಜ್ಯದ 60ಕ್ಕೂ ಹೆಚ್ಚು ಅಭ್ಯರ್ಥಿಗಳು ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ನಿತೀಶ್: ಕಳೆದ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ 547ನೇ ಸ್ಥಾನ ಪಡೆದಿದ್ದ ನಿತೀಶ್ ಕೆ. ಇಂಡಿಯನ್ ಆಡಿಟ್ ಮತ್ತು ಅಕೌಂಟ್ನಲ್ಲಿ ತರಬೇತಿ ಪಡೆಯುತ್ತಿದ್ದರು. ಇನ್ನು ಮುಂದೆ ಅವರು ಭಾರತೀಯ ನಾಗರಿಕ ಸೇವೆ ಮಾಡಲಿದ್ದಾರೆ. ಉಡುಪಿ ಜಿಲ್ಲೆಯ ಅಂಬಾಗಿಲಿನ ನಿತೀಶ್ ಕೆ., ಇಂಜಿನಿಯರಿಂಗ್ ಪದವಿಯನ್ನು ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದರು.
ಫೌಜಿಯಾ: ಬೆಂಗಳೂರಿನ ಫೌಜಿಯಾ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಬಿಕಾಂ, ಕ್ರೈಸ್ಟ್ ವಿವಿಯಲ್ಲಿ ಪಿಜಿಡಿಎಂ ಮುಗಿಸಿದ ಅವರು, ಸದ್ಯ ಭಾರತೀಯ ಕಂದಾಯ ಸೇವೆ(ಐಆರ್ಎಸ್-ಐಟಿ)ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲಾಜಿ: ದೇಶಕ್ಕೆ 36 ನೇ ಟಾಪರ್ ಆಗಿ ಹೊರಹೊಮ್ಮಿರುವ ತುಮಕೂರಿನ ಬಾಲಾಜಿ ಕೊರಟಗೆರೆಯ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದವರು. ಬೆಂಗಳೂರಿನ ಆರ್ ವಿ ಕಾಲೇಜಿನಲ್ಲಿ ಬಿಬಿಎಂ ಮತ್ತು ಎಂಬಿಎ ಪದವಿ ಪಡೆದುಕೊಂಡಿದ್ದಾರೆ. ಆರ್ ಬಿಐ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಬಾಲಾಜಿ ಮತ್ತೊಂದು ಸಾಧನೆ ಮಾಡಿದ್ದಾರೆ.