Karnataka Electricity Tariff Hike: ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಶಾಕ್: ಪ್ರತಿ ಯುನಿಟ್ಗೆ ಹೆಚ್ಚಾಗಿದ್ದೆಷ್ಟು?
ಮತದಾನ ಮಾಡಿ ಹೊಸ ಸರ್ಕಾರದ ನಿರೀಕ್ಷೆಯಲ್ಲಿದ್ದ ರಾಜ್ಯದ ಜನತೆಗೆ ದರ ಏರಿಕೆ ಶಾಕ್ ಸಿಕ್ಕಿದೆ. ಪ್ರತಿ ಯೂನಿಟ್ಗೆ 70 ಪೈಸೆ ದರ ಹೆಚ್ಚಳಕ್ಕೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಒಪ್ಪಿಗೆ ನೀಡಿದೆ. ಏಪ್ರಿಲ್ 1 ರಿಂದಲೇ ಜಾರಿಗೆ ಬರುವಂತೆ ದರ ಹೆಚ್ಚಳವಾಗಲಿದೆ.
ಏಪ್ರಿಲ್ 1ರಿಂದ ಅನ್ವಯವಾಗುವಂತೆ ಪ್ರತಿ ಯುನಿಟ್ಗೆ 1.46 ರುಪಾಯಿ ಹೆಚ್ಚಳ ಮಾಡುವಂತೆ ಎಸ್ಕಾಂಗಳು ಬೇಡಿಕೆ ಇಟ್ಟಿದ್ದವು. ಆದರೆ ವಿದ್ಯುತ್ ನಿಯಂತ್ರಣ ಆಯೋಗ 70 ಪೈಸೆ ಹೆಚ್ಚಿಸಲು ಒಪ್ಪಿಗೆ ನೀಡಿದೆ. ಹೊಸ ದರ ಜಾರಿ ಹಿನ್ನಲೆಯಲ್ಲಿ ಗ್ರಾಹಕರ ಪ್ರತಿ ತಿಂಗಳ ಬಿಲ್ನಲ್ಲಿ 8.31 ರಷ್ಟು ಹೆಚ್ಚಳವಾಗಲಿದೆ.

ಕಲ್ಲಿದ್ದಲು ಮತ್ತು ಸಾಗಾಣಿಕ ವೆಚ್ಚ ಹೆಚ್ಚಳವಾಗಿರುವುದರಿಂದ ವಿದ್ಯುತ್ ಖರೀದಿ ಮಾಡಲು ವ್ಯಯಿಸುವ ಹಣವ ಪ್ರಮಾಣ ಶೇಕಡಾ 13 ರಷ್ಟು ಹೆಚ್ಚಾಗಿದೆ ಎಂದು ಆಯೋಗ ತಿಳಿಸಿದೆ. ನೌಕರರ ವೇತನ ಮತ್ತು ವಿವಿಧ ಭತ್ಯೆಗಳನ್ನು ಶೇಕಡಾ 20 ರಷ್ಟು ಹೆಚ್ಚಿಸಿರುವುದು ಕೂಡ ಆರ್ಥಿಕ ಹೊರೆ ಹೆಚ್ಚಳಕ್ಕೆ ಕಾರಣವಾಗಿತ್ತು.
ಬಂಡವಾಳ ಹೂಡಿಕೆ ಪ್ರಮಾಣ ಕೂಡ ಹೆಚ್ಚಳವಾಗಿದ್ದು, ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳದಿಂದಾಗಿ ಶೇ. 30ರಷ್ಟು ವೆಚ್ಚ ಹೆಚ್ಚಾಗಿದೆ. ಸವಕಳಿ ನಿರ್ವಹಣೆಗಾಗಿ ವಾರ್ಷಿಕ ವೆಚ್ಚದ ಶೇ 15 ರಷ್ಟು ಮೀಸಲಿಡಲಾಗಿದೆ. ಇದೆಲ್ಲದರ ಪರಿಣಾಮವಾಗಿ ವಿದ್ಯುತ್ ವಿತರಣಾ ಕಂಪನಿಗಳು 4,457.12 ಕೋಟಿಗಳಷ್ಟು ಆದಾಯ ಕೊರತೆ ಎದುರಿಸುತ್ತಿದ್ದವು ಎಂದು ಆಯೋಗ ಮಾಹಿತಿ ನೀಡಿದೆ.
ವ್ಯಾಪಕ ಆಕ್ರೋಶ
ವಿದ್ಯುತ್ ದರ ಏರಿಕೆ ಬೆನ್ನಲ್ಲೇ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇನ್ನು ಇದೇ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಹುಬ್ಬಳ್ಳಿ ಮನೆಯ ಸಮೀಪ ಟ್ರಾನ್ಸ್ಫಾರ್ಮರ್ ಒಂದು ಹೊತ್ತಿ ಉರಿದಿದೆ. ಸರ್ಕಾರ ಹೋಗುವ ಮುನ್ನ ಈ ರೀತಿ ದರ ಏರಿಕೆ ಬರೆ ಹಾಕಿದ್ದಕ್ಕೆ ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡು ಹೊತ್ತಿ ಉರಿದಿದೆ ಎಂದು ಕೆಲವು ಕಮೆಂಟ್ ಮಾಡಿದ್ದಾರೆ.
ಹುಬ್ಬಳ್ಳಿಯ ವಿಶ್ವೇಶ್ವರನಗರದಲ್ಲಿರುವ ಬೊಮ್ಮಾಯಿ ಮನೆ ಬಳಿ ಇರುವ ಟ್ರಾನ್ಸಫರ್ಮರ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಹೊತ್ತಿ ಉರಿದಿದೆ. ಸ್ಫೋಟವಾಗುತ್ತಿದ್ದಂತೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications