Karnataka Elections: ಕರ್ನಾಟಕದಲ್ಲಿ ಸರ್ಕಾರ ಬದಲಾಗಲೇಬೇಕು ಎಂದ ಶೇ 57ರಷ್ಟು ಜನ- ಸಮೀಕ್ಷೆ ಹೇಳಿದ್ದೇನು? ಅಂಕಿಅಂಶ, ಮಾಹಿತಿ
ಬೆಂಗಳೂರು, ಮಾರ್ಚ್ 31: ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ( Karnataka Assembly Elections 2023 ) ಮುನ್ನ ಕರ್ನಾಟಕದಲ್ಲಿ CVoters ಸಂಸ್ಥೆ ನಡೆಸಿದ ವಿಶೇಷ ಸಮೀಕ್ಷೆಯು ಕಾಂಗ್ರೆಸ್ಗೆ ( Congress ) ವರವಾದರೆ, ಆಡಳಿತಾರೂಢ ಬಿಜೆಪಿಗೆ ( BJP ) ನಿರಾಸೆ ಮೂಡಿಸಿದೆ. ಜನರ ಅಭಿಪ್ರಾಯಗಳ ತಾಳೆ ನಡೆದಾಗ ಕರ್ನಾಟಕದಲ್ಲಿ ಬಿಜೆಪಿ ವಿರೋಧಿ ಅಲೆ ಇದೆ ಎಂಬುದು ತಿಳಿದಬಂದಿದೆ.
ಸಿ ವೋಟರ್ಸ್ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದ ಮತದಾರರಲ್ಲಿ 57 ಪ್ರತಿ ಶತದಷ್ಟು ಜನರು ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ಅದನ್ನು ಬದಲಾಯಿಸಲು ಬಯಸುತ್ತಾರೆ ಎಂದು ಗೊತ್ತಾಗಿದೆ.

ಸಮೀಕ್ಷೆಯ ಪ್ರಕಾರ, ಕೇವಲ ಶೇಕಡಾ 17 ರಷ್ಟು ಸಂಭಾವ್ಯ ಮತದಾರರು ತಮಗೆ ಸರ್ಕಾರದ ಮೇಲೆ ಕೋಪವಿಲ್ಲ ಮತ್ತು ಅದನ್ನು ಬದಲಾಯಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇತರ ಸಂಕಷ್ಟಕರ ಸೂಚನೆಗಳೂ ಇವೆ ಎಂದು ಸಮೀಕ್ಷೆ ಹೇಳಿದೆ. ಪ್ರತಿಕ್ರಿಯಿಸಿದವರಲ್ಲಿ ಸುಮಾರು 47 ಪ್ರತಿಶತದಷ್ಟು ಜನರು ಮುಖ್ಯಮಂತ್ರಿಯ ಕಾರ್ಯಕ್ಷಮತೆಯನ್ನು 'ಕಳಪೆ' ಎಂದು ಹೇಳಿದ್ದಾರೆ.
ಜೊತೆಗೆ, ನಿರುದ್ಯೋಗ ಮತ್ತು ಮೂಲ ಸೌಕರ್ಯ ಕೊರತೆ ನಂತರ ಭ್ರಷ್ಟಾಚಾರವು ರಾಜ್ಯದ ಮತದಾರರಲ್ಲಿ ಪ್ರಮುಖ ಸಮಸ್ಯೆಯಾಗಿ ಹೊರಹೊಮ್ಮಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ, 2019 ರಲ್ಲಿ ಬಿಜೆಪಿ ಸೋತಿದ್ದ ಜಾರ್ಖಂಡ್ನಲ್ಲಿ ಕಳೆದ ಬಾರಿ ಭ್ರಷ್ಟಾಚಾರವು ಪ್ರಮುಖ ವಿಷಯವಾಗಿತ್ತು.
CVoter ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 39 ರಷ್ಟು ಜನರು ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಭಾವಿಸಿದರೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳುತ್ತಿದೆ ಎಂದು ಶೇಕಡಾ 34 ರಷ್ಟು ಜನರು ಭಾವಿಸಿದ್ದಾರೆ. ಇದು ಬಿಜೆಪಿಗೆ ಎಚ್ಚರಿಕೆಯ ಕರೆಗಂಟೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಶೇಕಡಾ 39.1 ರಷ್ಟು ಜನರು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಸಿಎಂ ಆಗಬೇಕೆಂದು ಬಯಸಿದ್ದರೆ, ಶೇಕಡಾ 31.1 ರಷ್ಟು ಜನರು ಈಗಿರುವ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂದು ಬಯಸಿದ್ದಾರೆ.
ಮತ್ತೊಂದೆಡೆ ಜೆಡಿಎಸ್ನ ಎಚ್ಡಿ ಕುಮಾರಸ್ವಾಮಿ ಅವರು ಸಿವೋಟರ್ ಸಮೀಕ್ಷೆಯಲ್ಲಿ ಕೇವಲ 21.4 ಶೇಕಡಾ ಮತಗಳನ್ನು ಪಡೆದಿದ್ದಾರೆ
ಏತನ್ಮಧ್ಯೆ, ಶೇಕಡಾ 3.2 ರಷ್ಟು ಜನರು ಮಾತ್ರ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಮುಂದಿನ ಸಿಎಂ ಆಗಬೇಕೆಂದು ಬಯಸಿದ್ದಾರೆ.

29.1 ರಷ್ಟು ಜನರು ನಿರುದ್ಯೋಗ ಸಮಸ್ಯೆಯೇ ದೊಡ್ಡ ಸಮಸ್ಯೆ ಎಂದು ಹೇಳಿದ್ದಾರೆ. ಏತನ್ಮಧ್ಯೆ, 21.5 ಪ್ರತಿಶತ ಪ್ರತಿಕ್ರಿಯಿಸಿದವರಿಗೆ ವಿದ್ಯುತ್, ನೀರು ಮತ್ತು ರಸ್ತೆಗಳ ಸ್ಥಿತಿ ದೊಡ್ಡ ಸಮಸ್ಯೆಯಾಗಿದೆ.
ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಮೇಲೆ ಯಾವ ಅಂಶಗಳು ಗಮನಾರ್ಹವಾಗಿ ಪರಿಣಾಮ ಬೀರುತ್ತವೆ ಎಂದು ಉತ್ತರಿಸಿರುವ ಶೇ 30.8ರಷ್ಟು ಮತದಾರರು, 'ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಮತ್ತು ಹಿಜಾಬ್ ವಿವಾದದಂತಹ ಸಮಸ್ಯೆಗಳು' ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ಹೇಳಿದ್ದಾರೆ.
2022 ರ ಅಂತ್ಯದಲ್ಲಿ ಚುನಾವಣೆಗೆ ಮುನ್ನ ಹಿಮಾಚಲ ಪ್ರದೇಶದಲ್ಲಿ CVoter ಇದೇ ರೀತಿಯ ಸಮೀಕ್ಷೆಯನ್ನು ನಡೆಸಿತ್ತು. ಆ ಸಮೀಕ್ಷೆಯಲ್ಲಿ, 46.6 ರಷ್ಟು ಮತದಾರರು ಬಿಜೆಪಿ ಗೆಲ್ಲುತ್ತದೆ ಎಂದು ಭಾವಿಸಿದರೆ, 43.2 ರಷ್ಟು ಜನರು ಕಾಂಗ್ರೆಸ್ ಗೆಲ್ಲುತ್ತದೆ ಎಂದು ಭಾವಿಸಿದ್ದರು. ಆದರೂ, ಕಡಿಮೆ ಅಂತರದಲ್ಲಿ ಬಿಜೆಪಿ ತನ್ನ ಅಧಿಕಾರವನ್ನು ಕಳೆದುಕೊಂಡಿತು. ಅಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಿತು.












Click it and Unblock the Notifications