ಚುನಾವಣೆ ಬಂದಿದೆ, ಒಂದಿಷ್ಟು ಹಾಸ್ಯ, ಒಂದಿಷ್ಟು ರಂಜನೆ!
ಬೆಂಗಳೂರು, ಏಪ್ರಿಲ್ 14 : ಕರ್ನಾಟಕ ವಿಧಾನಸಭೆ ಚುನಾವಣೆ ರಾಜಕೀಯ ಪಕ್ಷಗಳಲ್ಲಿ ಮಾತ್ರ ವಿದ್ಯುತ್ ಸಂಚಾರವನ್ನು ಉಂಟು ಮಾಡಿಲ್ಲ, ಮತದಾರರಲ್ಲಿಯೂ ಒಂದು ರೀತಿ ಉತ್ಸಾಹವನ್ನು ತುಂಬಿದೆ. 'ಈ ಸತಿ ಯಾರು ಗೆಲ್ತಾರೆ' ಎಂಬುದೇ ಎಲ್ಲೆಡೆ ಚರ್ಚೆಯ ವಸ್ತು.
ಚುನಾವಣೆ ಎಷ್ಟು ಗಂಭೀರವಾದುದು, ನಮ್ಮ ಮೇಲಿರುವ ಮತದಾನದ ಜವಾಬ್ದಾರಿ ಎಂತಹುದು, ಯಾರಿಗೆ ಮತ ಹಾಕಬೇಕು ಯಾರನ್ನ ಗೆಲ್ಲಿಸಬೇಕು ಎಂಬ ಚಿಂತನೆಯಲ್ಲಿ ರಾಜ್ಯದ ಮತದಾರರು ಮುಳುಗಿದ್ದಾರೆ. ಜೊತೆಗೆ ನಮ್ಮ ಕೆಲಸಕ್ಕೆ ಬಾರದ ರಾಜಕಾರಣಿಗಳ ಬಗ್ಗೆ ಸಾತ್ವಿಕ ಸಿಟ್ಟೂ ಮನೆ ಮಾಡಿಕೊಂಡಿದೆ.
ಇನ್ನು ರಾಜಕಾರಣಿಗಳ ಮಾತಿನ ಕಾದಾಟಗಳಿಗೆ, ಆಕ್ರೋಶ ತುಂಬಿದ ಕೆಸರೆರಚಾಟಗಳಿಗೆ, ಟ್ವಿಟ್ಟರ್ ತಿವಿತಗಳಿಗೆ, ಕಾಲೆಳೆಯುವಂಥ ಮೀಮ್ಸ್ ಗಳಿಗೆ, ಬಸವಳಿಯುವಂತೆ ಮಾಡುವ ಟ್ರೋಲ್ಸ್ ಗಳಿಗೆ, ಟೆಂಪಲ್ ರನ್ ಗಳಿಗೆ, ಮಠಗಳ ಭೇಟಿಗೆ, ಸ್ವಾಮೀಜಿಗಳ ಕಾಲೆರಗುವಿಕೆಗೆ, ಮಾಟ ಮಂತ್ರಗಳಿಗೆ ಕೊರತೆಯೇ ಇಲ್ಲ.
ಇದೆಲ್ಲದರ ಜೊತೆಗೆ ಚುನಾವಣೆ ಎಂಬ ಈ ಬೃಹನ್ನಾಟಕ ರಾಜ್ಯದ ಜನರಿಗೆ ಭರ್ತಿ ಮನರಂಜನೆಯನ್ನೂ ಒದಗಿಸುತ್ತಿದೆ. ರಾಜಕಾರಣಿಗಳು ಜನರನ್ನು ಉದ್ದೇಶಿಸಿ ಆಡುವ ಪ್ರತಿಯೊಂದು ಮಾತುಗಳೂ ತಮಾಷೆಯೇ. ಅವರ ಕೆಲವೊಂದು ಹೇಳಿಕೆಗಳಲ್ಲಿ ಎಳ್ಳಷ್ಟೂ ಸತ್ಯವಿರುವುದಿಲ್ಲ, ಬರೀ ಜೊಳ್ಳಿರುತ್ತದೆ ಎಂದು ತಿಳಿಯದಷ್ಟು ದಡ್ಡರೇನಲ್ಲ ರಾಜ್ಯದ ಜನತೆ.

ಸಿದ್ದರಾಮಯ್ಯನವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿ?
ಒನ್ಇಂಡಿಯಾ ಕನ್ನಡ ಓದುಗರಿಗೊಂದು ಪ್ರಶ್ನೆಯನ್ನು ಕೇಳಿದ್ದೆವು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿ? ಎಂದು. ಮೈಸೂರು ಜಿಲ್ಲೆಯ ಸ್ವಕ್ಷೇತ್ರವಾಗಿರುವ ಚಾಮುಂಡೇಶ್ವರಿ, ಇಲ್ಲಿ ಗೆಲ್ಲುವ ನಂಬಿಕೆ ಇಲ್ಲದಿರುವುದರಿಂದ ಆಯ್ಕೆ ಮಾಡಿಕೊಂಡಿರುವ ಬಾಗಲಕೋಟೆ ಜಿಲ್ಲೆಯ ಬಾದಾಮಿ, ಎರಡರಿಂದಲೂ ಸ್ಪರ್ಧಿಸಲಿ ಮತ್ತು ಕೊನೆಗೆ ಎರಡರಿಂದಲೂ ಬೇಡ ಎಂಬ ತರಲೆ ಆಯ್ಕೆಯನ್ನೂ ನೀಡಿದ್ದೆವು.

ಎರಡೂ ಕಡೆಯಿಂದ ಬೇಡವೆಂದಿದ್ದಾರೆ!
ನಮ್ಮ ಓದುಗರ ಹಾಸ್ಯಪ್ರಜ್ಞೆ ಎಂಥದೆಂದು ಎಲ್ಲರಿಗೂ ಗೊತ್ತಿರುವ ಸಂಗತಿಯೆ. ಮೂರುವರೆ ಸಾವಿರಕ್ಕೂ ಹೆಚ್ಚು ಬಂದಿರುವ ಮತಗಳಲ್ಲಿ ಶೇ.62ರಷ್ಟು ಜನರು ಎರಡರಿಂದಲೂ ಸ್ಪರ್ಧಿಸುವುದು ಬೇಡ ಎಂದು ತೀರ್ಪು ನೀಡಿ ಸಿದ್ದರಾಮಯ್ಯನವರು ಮತ್ತೆ ಚಿಂತಿಸುವಂತೆ ಮಾಡಿದ್ದಾರೆ. ಅವರಲ್ಲಿ ಶೇ.24ರಷ್ಟು ಚಾಮುಂಡಿ ಕೃಪೆ ನಿಮಗೆ ಸಿಗಲಿ ಎಂದಿದ್ದರೆ, ಕೇವಲ ಶೇ.5ರಷ್ಟು ಬಾದಾಮಿ ಬನಶಂಕರಿ ಕೃಪೆಗೆ ಪಾತ್ರರಾಗಿರಿ ಎಂದಿದ್ದಾರೆ. ಎರಡರಿಂದಲೂ ಅಂದವರು ಕೂಡ ಕಡಿಮೆಯೆ, ಶೇ.9ರಷ್ಟು.

ಈ ಸಮಯದಲ್ಲಿ ರಾಜಕೀಯ ಚರ್ಚೆ ಬೇಡ!
ಹಾಸ್ಯಪ್ರಜ್ಞೆ ಎಂದಾಗ ಫೇಸ್ ಬುಕ್ಕಿನಲ್ಲಿ ಹರಿದಾಡುತ್ತಿರುವ ಈ ಚಿತ್ರವನ್ನು ಹಂಚಿಕೊಳ್ಳದೆ ಸಾಧ್ಯವೇ ಇಲ್ಲ. ರಾಜಕೀಯದ ಬಗ್ಗೆ ಚರ್ಚಿಸಲು ಸಮಯದ ಮಿತಿಯೇನಾದರು ಇಡಲು ಸಾಧ್ಯವೆ? ಅದೂ ಕುಡುಕರಿಗೆ? ಬೆಳಿಗ್ಗೆ 10ರಿಂದ 11ರವರೆಗೆ ಯಾವುದೇ ರಾಜಕೀಯ ಪಕ್ಷದ ಬಗ್ಗೆ ಚರ್ಚಿಸಬಾರದು ಎಂದು ಬಾರ್ ಮಾಲಿಕರೊಬ್ಬರು ಕುಡುಕರಿಗೆ ಅಪ್ಪಣೆ ಕೊಟ್ಟಿದ್ದಾರೆ. ಅಂದರೆ ಆ ಸಮಯದಲ್ಲಿ ಕುಡಿಯಬಾರದೆ? ಯಾಕೆಂದರೆ, ಕುಡಿದು ಮತ್ತೇರಿದ ಮೇಲೆ ಚರ್ಚೆ ಮಾಡಬಾರದೆಂದು ಹೇಳಲು ಸಾಧ್ಯವೆ? ಇದನ್ನು ಯಾರೇ ಆಗಲಿ ಗಂಭೀರವಾಗಿ ಪರಿಗಣಿಸಬಾರದಾಗಿ ವಿನಂತಿ.

ಕುಕ್ಕರ್ ಕೊಡಲು ಬಂದರ ತಲೆಮೇಲೆ ಕುಕ್ಕಿ!
ನಮ್ಮ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು ರಾಜರಾಜೇಶ್ವರಿ ನಗರದ ಮತದಾರರಲ್ಲಿ ಒಂದು ಕಟ್ಟಪ್ಪಣೆ ಮಾಡಿದ್ದಾರೆ. ಅದೇನೆಂದರೆ, ಯಾರಾದ್ರೂ ಮತಕ್ಕೆ ಬದಲಾಗಿ ಕುಕ್ಕರನ್ನು ಉಡುಗೊರೆಯಾಗಿ ನೀಡಲು ಬಂದರೆ, ಅದೇ ಕುಕ್ಕರನ್ನು ತೆಗೆದುಕೊಂಡು ಕೊಟ್ಟವರ ತಲೆಯ ಮೇಲೆ ಕುಕ್ಕಿ ಎಂದಿದ್ದಾರೆ. ಅವರ ಯಾವ ಮಾತನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳದಿರುವುದು ನಿಜಕ್ಕೂ ವಿಷಾದನೀಯ ಸಂಗತಿ. ಕನಿಷ್ಠ ಈ ಮಾತನ್ನಾದರೂ ಮತದಾರರು ಗಂಭೀರವಾಗಿ ತೆಗೆದುಕೊಳ್ಳಲಿ.
ನನ್ಮಗಂದ್, ಓಟು ಕೇಳಲ್ಲ. ಶಾಸಕನಾಗಬೇಕಿದ್ರೆ ಓಟ್ ಹಾಕಿ ಗೆಲ್ಸಿ ಅಷ್ಟೆ!











Click it and Unblock the Notifications