ರಾಜಕೀಯ ಪ್ರಚಾರಕ್ಕೆ ನೋ ಎಂದ ಯಶ್, ರಿಷಬ್ ಶೆಟ್ಟಿ: ಸುದೀಪ್ ಘಟನೆ ಬಳಿಕ ಎಚ್ಚೆತ್ತುಕೊಂಡರೇ ನಟರು?
ಬೆಂಗಳೂರು, ಏಪ್ರಿಲ್ 07: ನಟ ಕಿಚ್ಚ ಸುದೀಪ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದಾದ ಎರಡು ದಿನಗಳಲ್ಲಿ ರಾಜ್ಯದ ಹಲವಾರು ರಾಜಕಾರಣಿಗಳು ಕನ್ನಡ ನಟರಾದ ಯಶ್ ಮತ್ತು ರಿಷಬ್ ಶೆಟ್ಟಿ ಅವರನ್ನು ಪ್ರಚಾರ ಮಾಡಲು ವಿನಂತಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇಬ್ಬರು ನಟರು ರಾಜಕಾರಣಿಗಳ ವಿನಂತಿಗಳನ್ನು ನಿರಾಕರಿಸಿದ್ದಾರೆ ಎಂದು ಟಿವಿ9 ಕನ್ನಡ ವರದಿ ಮಾಡಿದೆ.
ಏಪ್ರಿಲ್ 5 ರಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸುದೀಪ್ ಅವರು ಬೊಮ್ಮಾಯಿ ಅವರೊಂದಿಗೆ ವೇದಿಕೆ ಹಂಚಿಕೊಂಡರು. ಮುಖ್ಯಮಂತ್ರಿಗೆ ತಮ್ಮ ಬೆಂಬಲವನ್ನು ಘೋಷಿಸಿದರು. ಸಿಎಂ ಬೊಮ್ಮಾಯಿ ಹೇಳಿದ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದಾಗಿಯೂ ಹೇಳಿದರು. ಆದರೆ, ತಾವು ಯಾವುದೇ ಪಕ್ಷಕ್ಕೆ ಸೇರುವುದಿಲ್ಲ ಮತ್ತು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಕಿಚ್ಚ ಸುದೀಪ್ ಸ್ಪಷ್ಟಪಡಿಸಿದ್ದಾರೆ.

ಅಂದಿನಿಂದ, ಹಲವಾರು ರಾಜಕಾರಣಿಗಳು ಯಶ್ ಮತ್ತು ರಿಷಬ್ ಶೆಟ್ಟಿ ಸೇರಿದಂತೆ ಕೆಲ ಖ್ಯಾತ ನಟರನ್ನು ಸಂಪರ್ಕಿಸಿದ್ದಾರೆ. ಅದರಲ್ಲಿ ಯಶ್ ಹಾಗೂ ರಿಷಬ್ ಶೆಟ್ಟಿ ಅವರನ್ನೂ ಕೇಳಿಕೊಂಡಿದ್ದಾರೆ. ಆದರೆ ಈ ವಿನಂತಿಗಳನ್ನು ನಟರು ನಯವಾಗಿ ನಿರಾಕರಿಸಿದೆ ಎಂದು ಟಿವಿ9 ಕನ್ನಡ ವರದಿ ಮಾಡಿದೆ.
ಯಶ್ ಅವರ ನಿಕಟ ಮೂಲಗಳ ಪ್ರಕಾರ, ಪ್ರಮುಖ ಪಕ್ಷಗಳು ಪ್ರಚಾರಕ್ಕಾಗಿ ವಿನಂತಿಗಳನ್ನು ಕಳುಹಿಸಿದ್ದಾರೆ. ಆದರೆ ಕೆಜಿಎಫ್ ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್ ಅವರು ಯಾವುದೇ ಪಕ್ಷಕ್ಕೆ ಕ್ಯಾನ್ವಾಸ್ ಮಾಡಲು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.
2018 ರ ವಿಧಾನಸಭಾ ಚುನಾವಣೆಯಲ್ಲಿ, ಸಾರಿಗೆ ಸಚಿವ ಬಿ ಶ್ರೀರಾಮುಲು, ಸಚಿವ ಮುನಿರತ್ನ ಸೇರಿದಂತೆ ವಿವಿಧ ರಾಜಕಾರಣಿಗಳ ಪರ ನಟರು ಪ್ರಚಾರ ಮಾಡಿದ್ದರು. ಮೊನ್ನೆ ಸುದೀಪ್ ಅವರು ಬಿಜೆಪಿ ಪರ ಪ್ರಚಾರ ಮಾಡುವ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡರು.

ಕಠಿಣ ಪ್ರಶ್ನೆಗಳನ್ನು ಎದುರಿಸಿದ ನಟ
ಆ ವೇಳೆಯಲ್ಲಿ, ಸುದೀಪ್ ಅವರಿಗೆ ಹಲವಾರು ಕಠಿಣ ಪ್ರಶ್ನೆಗಳನ್ನು ಕೇಳಲಾಯಿತು. ಇದಕ್ಕೆ ಸ್ಪಷ್ಟವಾಗಿ ಉತ್ತರಿಸಿದೇ ಕಿಚ್ಚ ಸುದೀಪ್ ಜಾರಿ ಕೊಂಡರು. ಆ ನಂತರ, ಸುದೀಪ್ ಅವರ ಅಭಿಮಾನಿಗಳೇ ಸಾಮಾಜಿಕ ಮಾಧ್ಯಮಗಳಲ್ಲಿ ನಟನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಟರಿಗೆ ರಾಜಕೀಯ ಬೇಡವೆಂಬ ಸಂದೇಶವನ್ನೂ ರವಾನಿಸಿದರು. ವಿರೋಧಿಗಳು ಸುದೀಪ್ ಅವರನ್ನು ವ್ಯಾಪಕವಾಗಿ ಟ್ರೋಲ್ ಅನ್ನೂ ಮಾಡುತ್ತಿದ್ದಾರೆ.
ಸಿನಿಮಾ ಪ್ರಸಾರಕ್ಕೆ ನಿಷೇಧ ಕೋರಿ ಪತ್ರ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಬಹುದು ಎಂದು ಆರೋಪಿಸಿ ಕಿಚ್ಚ ಸುದೀಪ್ ಅವರ ಚಲನಚಿತ್ರಗಳು, ಕಾರ್ಯಕ್ರಮಗಳು ಮತ್ತು ಜಾಹೀರಾತುಗಳ ಪ್ರದರ್ಶನ ಮತ್ತು ಪ್ರಸಾರವನ್ನು ನಿಷೇಧಿಸುವಂತೆ ಕೋರಿ ಜನತಾ ದಳ (ಜಾತ್ಯತೀತ) ಶುಕ್ರವಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
ಸುದೀಪ್ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಬಹುಬಾಷಾ ನಟ ಪ್ರಕಾಶ್ ರಾಜ್, 'ಕಿಚ್ಚ ಸುದೀಪ್ ಅವರ ಹೇಳಿಕೆಯಿಂದ ನನಗೆ ಆಘಾತವಾಗಿದೆ ಮತ್ತು ನೋವಾಗಿದೆ' ಎಂದು ಹೇಳಿದ್ದಾರೆ.

ಇದೇ ವೇಳೆ ಬುಧವಾರ ಶಿವಮೊಗ್ಗ ಮೂಲದ ವಕೀಲ ಕೆ.ಪಿ.ಶ್ರೀಪಾಲ್ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವವರೆಗೆ ಕಿಚ್ಚ ಸುದೀಪ್ ಅವರ ಅಭಿನಯದ ಚಲನಚಿತ್ರಗಳು, ಕಾರ್ಯಕ್ರಮಗಳು ಮತ್ತು ಜಾಹೀರಾತುಗಳ ಪ್ರದರ್ಶನ ಮತ್ತು ಪ್ರಸಾರವನ್ನು ನಿಷೇಧಿಸುವಂತೆ ಕೋರಿದ್ದಾರೆ.
ಈ ತಿಂಗಳ ಅಂತ್ಯದ ವೇಳೆಗೆ ಯಶ್ ತಮ್ಮ 19 ನೇ ಚಿತ್ರವನ್ನು ಘೋಷಿಸುವ ನಿರೀಕ್ಷೆಯಿದೆ. ಕಾಂತಾರ ಖ್ಯಾತಿಯ ನಟ ರಿಷಬ್ ಶೆಟ್ಟಿ ಕೂಡ ಕರಾವಳಿ ಪ್ರದೇಶ ಸೇರಿದಂತೆ ಯಾವುದೇ ರಾಜಕೀಯ ನಾಯಕರ ಪರವಾಗಿ ಪ್ರಚಾರ ಮಾಡಲು ನಿರಾಕರಿಸಿದ್ದಾರೆ. ರಿಷಬ್ ಸದ್ಯ 'ಕಾಂತಾರ 2' ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.












Click it and Unblock the Notifications