ಜೆಡಿಎಸ್ 65-70 ಸ್ಥಾನ ಗೆಲ್ಲುವ ಸಾಧ್ಯತೆ: ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ಅಂಕಿಅಂಶ ಬಹಿರಂಗ
ಬೆಂಗಳೂರು, ಮೇ 08: ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕುತೂಹಲಕಾರಿ ಫಲಿತಾಂಶಗಳು ಹೊರಬರಲಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಚುನಾವಣೆಯಲ್ಲಿ ಜಯಗಳಿಸಲು ಹಲವು ತಂತ್ರಗಳನ್ನು ರೂಪಿಸಿವೆ.
ಕೆಲ ಸಮೀಕ್ಷೆಗಳ ಪ್ರಕಾರ, ಕಳೆದ ಬಾರಿಯಂತೆ ಈ ಬಾರಿಯು ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎಂದು ಹೇಳಿವೆ. ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ಅವರು ಕಿಂಗ್ಮೇಕರ್ ಆಗಲಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಈ ಹಿನ್ನೆಲೆಯಲ್ಲಿ ಮೂರು ಪಕ್ಷಗಳು ಆಂತರಿಕ ಸಮೀಕ್ಷೆಗಳನ್ನು ನಡೆಸಿವೆ. ಜೆಡಿಎಸ್ ನಡೆಸಿದ ಆಂತರಿಕ ಸಮೀಕ್ಷೆ ಪ್ರಕಾರ, ರಾಜ್ಯದಲ್ಲಿ 65 ರಿಂದ 70 ಸ್ಥಾನಗಳನ್ನು ಪಕ್ಷವು ಗೆಲ್ಲುವ ಸಾಧ್ಯತೆಯಿದೆ ಎಂದು ಬಹಿರಂಗಪಡಿಸಿದೆ.
ಪಕ್ಷದ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಈ ಕುರಿತು ವಿಶ್ಲೇಷಣೆ ನಡೆಸಿದ್ದಾರೆ. ಕ್ಷೇತ್ರಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಪಕ್ಷವು ಗೆಲ್ಲಬಹುದಾದ 67 ಕ್ಷೇತ್ರಗಳು ಹಾಗೂ ಹೆಚ್ಚಿನ ಪ್ರಯತ್ನದಿಂದ ಪಕ್ಷವು ಗೆಲ್ಲಬಹುದಾದ ಇನ್ನುಳಿದ 40 ಕ್ಷೇತ್ರಗಳನ್ನು ಅವರು ಪಟ್ಟಿ ಮಾಡಿದ್ದಾರೆ. ಪಕ್ಷವು ಗೆಲ್ಲಬಹುದಾದ ಸಂಖ್ಯೆ 100 ದಾಟಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಜೆಡಿಎಸ್ ಆಂತರಿಕ ಸಮೀಕ್ಷೆ ನಡೆಸಿದ್ದು, ಇದು 65ರಿಂದ 70 ಕ್ಷೇತ್ರಗಳಲ್ಲಿ ಜಯಗಳಿಸಬಹುದು ಎಂದು ಹೇಳಿದೆ.
'ನಾವು 2018 ರಲ್ಲಿ 37 ಸ್ಥಾನಗಳನ್ನು ಗೆದ್ದಿದ್ದೇವೆ. ಆದರೆ ಕೆಲವು ಶಾಸಕರು ರಾಜೀನಾಮೆ ನೀಡಿದ್ದರಿಂದ ನಮ್ಮ ಪ್ರಸ್ತುತ ಶಕ್ತಿ 29 ಆಗಿದೆ. ಸಮೀಕ್ಷೆಯ ಪ್ರಕಾರ, ನಾವು 37 ಸ್ಥಾನಗಳನ್ನು ಮರಳಿ ಪಡೆಯುತ್ತೇವೆ. ಅಲ್ಲದೆ ಪಾವಗಡ, ತುರುವೇಕೆರೆ ಮುಂತಾದ ಎಂಟು ಕ್ಷೇತ್ರಗಳಲ್ಲಿ 400ರಿಂದ 2 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದೇವೆ. ಅದೇ ರೀತಿ ಇತರ 10 ಕ್ಷೇತ್ರಗಳಲ್ಲಿ 2,000-4,000 ಮತಗಳ ಅಂತರದ ಸೋಲಿನ ಅಂತರವಿದೆ' ಎಂದು ಜೆಡಿಎಸ್ ಹೇಳಿದೆ.
ಇತರ 15 ಸ್ಥಾನಗಳಲ್ಲಿ, ಅಂತರವು 10,000 ಮತಗಳಿಗಿಂತ ಕಡಿಮೆಯಾಗಿದೆ. ನಾವು ಈ ಬಾರಿ ಅಂತಹ ಕ್ಷೇತ್ರಗಳ ಮೇಲೆ ಹೆಚ್ಚು ಗಮನಹರಿಸಿದ್ದೇವೆ. ಅಲ್ಲಿ ನಮ್ಮ ಪ್ರಚಾರವನ್ನು ತೀವ್ರಗೊಳಿಸಿದ್ದೇವೆ ಎಂದು ಜೆಡಿಎಸ್ ವಿವರಿಸಿದೆ. ಸಮೀಕ್ಷೆಯು ಈ ಹಲವು ಕ್ಷೇತ್ರಗಳಲ್ಲಿ ಭರವಸೆಯನ್ನು ಹೆಚ್ಚಿಸಿದೆ ಎಂದು ಹೇಳಿದೆ.

ಅಲ್ಲದೆ, ಬಿಜೆಪಿ ಮತ್ತು ಕಾಂಗ್ರೆಸ್ ತೊರೆದಿರುವ 27 ಅಭ್ಯರ್ಥಿಗಳಿಗೆ ಪಕ್ಷ ಟಿಕೆಟ್ ನೀಡಿದೆ ಎಂದು ಸಮೀಕ್ಷೆ ಹೇಳಿದೆ. ಅವರಲ್ಲಿ ಕನಿಷ್ಠ ಶೇ 50 ಕ್ಷೇತ್ರಗಳಲ್ಲಿ ಗೆಲುವಿನ ಅವಕಾಶವಿದೆ ಎಂದು ಜೆಡಿಎಸ್ ತಿಳಿಸಿದೆ.
ಜನ ಬಯಸಿದರೆ ಮದ್ಯ ನಿಷೇಧ ಮಾಡುತ್ತೇವೆ: ಎಚ್ಡಿಕೆ
ಜನರು ಬಯಸಿದಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ. ಭಾನುವಾರ ಜೆಡಿಎಸ್ ಅಭ್ಯರ್ಥಿ ಬಿ.ಮುನೇಗೌಡ ಪರವಾಗಿ ದೊಡ್ಡಬಳ್ಳಾಪುರದಲ್ಲಿ ಪ್ರಚಾರ ನಡೆಸಿದರು. ರಾಜ್ಯದೆಲ್ಲೆಡೆ ಗ್ರಾಮಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವುದು ಬಿಜೆಪಿ ಸರ್ಕಾರದ ಸಾಧನೆ ಎಂದು ಕುಮಾರಸ್ವಾಮಿ ಆರೋಪಿಸಿದರು. ಜನರು ಬಯಸಿದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಿ ಆದೇಶ ನೀಡುತ್ತೇನೆ ಎಂದರು.












Click it and Unblock the Notifications