ವಿಜಯಪುರದಲ್ಲಿ ಫಡ್ನವೀಸ್ ಪ್ರಚಾರ: ಬಿಜೆಪಿಗೆ ಬಿಸಿತುಪ್ಪವಾದ ಗಡಿ ವಿಚಾರ- ಈ ಸಮಸ್ಯೆ ಬಗ್ಗೆ ಮಾತನಾಡಬೇಡಿ ಎಂದ ಮಾಜಿ ಸಿಎಂ
ವಿಜಯಪುರ, ಏಪ್ರಿಲ್ 26: ಮೇ 10 ರಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷವು ವಿವಿಧ ರಾಜ್ಯಗಳ ಪ್ರಮುಖ ನಾಯಕರನ್ನು ಪ್ರಚಾರಕ್ಕೆ ನಿಯೋಜಿಸಿದೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿಜಯಪುರದಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿದ್ದಾರೆ.
ವಿಜಯಪುರದಲ್ಲಿ ಪ್ರಚಾರ ಮಾಡುತ್ತಿರುವ ಅವರಿಗೆ ಪತ್ರಕರ್ತರು ಗಡಿ ಸಮಸ್ಯೆಯ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ. ಆ ಸಮಯದಲ್ಲಿ ಇಕ್ಕಟ್ಟಿಗೆ ಸಿಲುಕಿದ ಫಡ್ನವೀಸ್, ಚುನಾವಣೆ ಸಮಯದಲ್ಲಿ ಈ ಸಮಸ್ಯೆಯ ಬಗ್ಗೆ ಪ್ರಶ್ನೆ ಕೇಳಿಬೇಡಿ ಎಂದು ಜಾರಿಕೊಂಡಿದ್ದಾರೆ.

ಮಹಾರಾಷ್ಟ್ರದ ಗಡಿಯಲ್ಲಿರುವ ಹಲವಾರು ಪಂಚಾಯತ್ಗಳು ಅಭಿವೃದ್ಧಿ ಕೊರತೆಯಿಂದ ಬಳಲುತ್ತಿವೆ. ಆ ಹಿನ್ನೆಲೆಯಲ್ಲಿ ಗ್ರಾಮಗಳು ಕರ್ನಾಟಕಕ್ಕೆ ಸೇರಲು ಬಯಸುತ್ತಿವೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಫಡ್ನವೀಸ್ ಅವರನ್ನು ಕೇಳಲಾಯಿತು. ಆದರೆ, ಫಡ್ನವೀಸ್ ಅವರು ಅಂತಹ ವರದಿಗಳನ್ನು ನಿರಾಕರಿಸಿದರು.
'ಅಂತಹ ಯಾವುದೇ ಸಮಸ್ಯೆ ಇಲ್ಲ. ಕರ್ನಾಟಕ ತನ್ನ ಸೌಲಭ್ಯಗಳನ್ನು ಮತ್ತು ಮಹಾರಾಷ್ಟ್ರ ತನ್ನದೇ ಆದ ಸೌಲಭ್ಯಗಳನ್ನು ನೀಡುತ್ತದೆ. ಈ ಸಮಸ್ಯೆ ಇಂದಿನದಲ್ಲ, ಚುನಾವಣೆಯ ಸಮಯದಲ್ಲಿ ಈ ವಿಷಯವನ್ನು ಏಕೆ ಎತ್ತುತ್ತಿದ್ದೀರಿ' ಎಂದು ಫಡ್ನವೀಸ್ ಕೇಳಿದರು.
ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ 865 ಗ್ರಾಮಗಳಿಗೆ ಮಹಾರಾಷ್ಟ್ರ ನೀಡುತ್ತಿರುವ ಆರೋಗ್ಯ ವಿಮೆ ಯೋಜನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಫಡ್ನವೀಸ್, ಇದು ಕಾಂಗ್ರೆಸ್ ಸರ್ಕಾರದಲ್ಲೇ ಇತ್ತು ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಈ ಆದೇಶ ಹೊರಡಿಸಲಾಗಿತ್ತು, ನಾವು ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿ ಆದೇಶ ಹೊರಡಿಸಿದ್ದೆವು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ತಿಳಿಸಿದ್ದಾರೆ.
ಇನ್ನು ಗಡಿ ವಿಚಾರವಾಗಿ ಪ್ರಶ್ನಿಸಿದಾಗ ಫಡ್ನವೀಸ್, ವಿಷಯ ಸುಪ್ರೀಂ ಕೋರ್ಟ್ನಲ್ಲಿದ್ದು, ಈ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಮೈತ್ರಿಕೂಟದ ಪಾಲುದಾರರು ಮತ್ತು ಮುಖ್ಯಮಂತ್ರಿಯಲ್ಲಿ ಸಂಭವನೀಯ ಬದಲಾವಣೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಫಡ್ನವೀಸ್, ಇದು ವದಂತಿಗಳು ಎಂದು ಅಭಿಪ್ರಾಯಪಟ್ಟರು.
'ಹಾಗೆ ಏನೂ ಇಲ್ಲ. ಚುನಾವಣೆವರೆಗೂ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿರುತ್ತಾರೆ. ಅವರ ನೇತೃತ್ವದಲ್ಲಿ ನಾವು ಚುನಾವಣೆಗೆ ಸ್ಪರ್ಧಿಸುತ್ತೇವೆ. ನೀವು ಕೇಳುತ್ತಿರುವ ಪ್ರಶ್ನೆಗಳು ಕೇವಲ ಮಾಧ್ಯಮಗಳ ಉಹಾಪೋಹಗಳಾಗಿವೆ' ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.












Click it and Unblock the Notifications