ಕನ್ನಡಿಗರು ಚುನಾವಣೆಯನ್ನು ನಿರ್ಧರಿಸುತ್ತಾರೆ, ಸಿನಿಮಾ ನಟರಲ್ಲ: ಕಿಚ್ಚ ಸುದೀಪ್ ನಡೆಗೆ ಕಾಂಗ್ರೆಸ್ ಸಂಸದರ ಲೇವಡಿ
ಬೆಂಗಳೂರು, ಏ 05: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ( Karnataka Assembly Elections 2023 ) ಬಿಜೆಪಿ ( BJP ) ಪರ ಪ್ರಚಾರ ಮಾಡುವುದಾಗಿ ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ( Kichcha Sudeep ) ಘೋಷಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ( Congress ) ಸಂಸದ ರಣದೀಪ್ ಸುರ್ಜೇವಾಲಾ ಅವರು ನಟ ಕಿಚ್ಚ ಸುದೀಪ್ ಅವರ ಬೆಂಬಲವನ್ನು ಲೇವಡಿ ಮಾಡಿದ್ದಾರೆ.
'6.5 ಕೋಟಿ ಕನ್ನಡಿಗರು ಕರ್ನಾಟಕ ಚುನಾವಣೆಯನ್ನು ನಿರ್ಧರಿಸುತ್ತಾರೆ. ಸಿನಿಮಾ ನಟರಲ್ಲ' ಎಂದು ಹೇಳುವ ಮೂಲಕ ನಟ ಸುದೀಪ್ ಅವರನ್ನು ಟೀಕಿಸಿದ್ದಾರೆ.

ಸುದ್ದಿ ಸಂಸ್ಥೆ 'ಎಎನ್ಐ' ಜೊತೆ ಮಾತನಾಡಿದ ಕಾಂಗ್ರೆಸ್ ಸಂಸದ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು, 'ಬಿಜೆಪಿ ಯಾರ ಮೇಲೂ ಪ್ರಭಾವ ಬೀರಬಹುದು. ಅವರು ಪ್ರಭಾವ ಬೀರಲಿ. ಕರ್ನಾಟಕ ಚುನಾವಣೆಯನ್ನು 6.5 ಕೋಟಿ ಕನ್ನಡಿಗ ಸಹೋದರ ಸಹೋದರಿಯರು ನಿರ್ಧರಿಸುತ್ತಾರೆಯೇ ಹೊರತು ಸಿನಿಮಾ ನಟರಲ್ಲ' ಎಂದು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಸಹ ಮಾಡಿರುವ ರಣದೀಪ್ ಸುರ್ಜೇವಾಲಾ, 'ಫಿಲ್ಮ್ ಸ್ಟಾರ್ಗಳು ಯಾರನ್ನು ಬೆಂಬಲಿಸಬೇಕೆಂದು ಆಯ್ಕೆ ಮಾಡಲು ಸ್ವತಂತ್ರರು. ಕೆಲವೊಮ್ಮೆ IT ಅಥವಾ ED ಇದನ್ನು ಮಾಡುತ್ತದೆ. ಇಂದು ಕರ್ನಾಟಕದಲ್ಲಿ ಬಿಜೆಪಿಯ ದಿವಾಳಿತನ ಸ್ಪಷ್ಟವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ನಾಯಕರ ಮಾತುಗಳನ್ನು ಜನರು ಕೇಳುತ್ತಿಲ್ಲ. ಅವರ ಬಳಿ ಯಾರೂ ಸುಳಿಯುತ್ತಿಲ್ಲ. ಆ ಕಾರಣ, ಅವರು ಈಗ ಪ್ರೇಕ್ಷಕರನ್ನು ಸೆಳೆಯಲು ಚಲನಚಿತ್ರ ತಾರೆಯರನ್ನು ಅವಲಂಬಿಸಿದ್ದಾರೆ. ಕರ್ನಾಟಕದ ಭವಿಷ್ಯವನ್ನು ನಿರ್ಧರಿಸುವವರು ಸಿನಿಮಾ ತಾರೆಯರಲ್ಲ' ಎಂದು ಲೇವಡಿ ಮಾಡಿದ್ದಾರೆ.

ಇಂದು ಬೆಂಗಳೂರಿನ ಅಶೋಕ ಹೋಟೆಲ್ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಸುದೀಪ್, 'ನಾನು ಪ್ರೀತಿ ಮತ್ತು ಗೌರವದಿಂದ 'ಮಾಮಾ' ಎಂದು ಕರೆಯುವ ಬಸವರಾಜ ಬೊಮ್ಮಾಯಿ ಅವರಿಗೆ ನನ್ನ ಬೆಂಬಲವನ್ನು ಘೋಷಿಸಲು ನಾನು ಇಲ್ಲಿಗೆ ಬಂದಿದ್ದೇನೆ. ನನ್ನ ಕಷ್ಟದ ಸಮಯದಲ್ಲಿ ಬೊಮ್ಮಾಯಿ ಮಾಮಾ ನನ್ನ ಬೆಂಬಲಕ್ಕೆ ನಿಂತಿದ್ದಾರೆ' ಎಂದು ತಿಳಿಸಿದರು.
ಬಿಜೆಪಿಯ ಸಿದ್ಧಾಂತವನ್ನು ನೀವು ಒಪ್ಪುತ್ತೀರಾ ಎಂಬ ಪ್ರಶ್ನೆಗೆ, 'ಪ್ರಜೆಯಾಗಿ, ನಾನು ಪ್ರಧಾನಿ ಮೋದಿ ತೆಗೆದುಕೊಂಡ ಕೆಲವು ನಿರ್ಧಾರಗಳನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ. ಆದರೆ ಅದು ನನ್ನ ದೃಷ್ಟಿಕೋನ, ಆದರೆ ಇಂದು ನಾನು ಇಲ್ಲಿ ಕುಳಿತಿರುವುದಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ' ಎಂದು ಸುದೀಪ್ ಹೇಳಿದರು.

ಸುದೀಪ್ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು. ಕರ್ನಾಟಕದಲ್ಲಿ ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.
ಇದಕ್ಕೂ ಮುನ್ನ ಕಿಚ್ಚ ಸುದೀಪ್ ಅವರ ಮ್ಯಾನೇಜರ್ ಜಾಕ್ ಮಂಜು ಮತ್ತು ಸುದೀಪ್ ಅವರ ಕುಟುಂಬ ಸದಸ್ಯರಿಗೆ ಬೆದರಿಕೆ ಪತ್ರ ಬಂದಿದ್ದು, ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಗೆ ಪತ್ರ ಕಳುಹಿಸಿದ ವ್ಯಕ್ತಿ ಯಾರೆಂಬುದು ನನಗೆ ತಿಳಿದಿದೆ ಎಂದು ಸುದೀಪ್ ಹೇಳಿದ್ದಾರೆ.
'ಹೌದು, ನನಗೆ ಬೆದರಿಕೆ ಪತ್ರ ಬಂದಿದೆ ಮತ್ತು ಅದನ್ನು ಯಾರು ಕಳುಹಿಸಿದ್ದಾರೆಂದು ನನಗೆ ತಿಳಿದಿದೆ. ಅದು ಚಿತ್ರರಂಗದ ಯಾರೋ ಒಬ್ಬರು ಎಂಬುದು ನನಗೆ ತಿಳಿದಿದೆ. ನಾನು ಅವರಿಗೆ ತಕ್ಕ ಉತ್ತರವನ್ನು ನೀಡುತ್ತೇನೆ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.












Click it and Unblock the Notifications