ಕರ್ನಾಟಕ ಚುನಾವಣೆ: ಲಿಂಗಾಯತರ ನಂತರ ಹೆಚ್ಚಿನ ಬಿಜೆಪಿ ಟಿಕೆಟ್ ಒಕ್ಕಲಿಗರಿಗೇ
ಬೆಂಗಳೂರು ಏಪ್ರಿಲ್ 13: ಬಹುಕಾಲದಿಂದ ಬ್ರಾಹ್ಮಣ-ಲಿಂಗಾಯತ ಪಕ್ಷವೆಂದು ಗುರುತಿಸಲಾಗಿದ್ದ ಬಿಜೆಪಿ ಈ ಬಾರಿ ಹಳೆ ಮೈಸೂರು ಭಾಗದಲ್ಲಿ ಪ್ರಾಬಲ್ಯ ಹೊಂದಿರುವ ಒಕ್ಕಲಿಗ ಸಮುದಾಯಕ್ಕೆ ಹೆಚ್ಚಿನ ಟಿಕೆಟ್ ನೀಡಿದೆ. ಮಂಗಳವಾರ ಹೆಸರಿಸಲಾದ 189 ಬಿಜೆಪಿ ಅಭ್ಯರ್ಥಿಗಳ ಪೈಕಿ 41 ಟಿಕೆಟ್ಗಳನ್ನು ಒಕ್ಕಲಿಗರಿಗೆ ಹಂಚಿಕೆ ಮಾಡಲಾಗಿದೆ.
ಬುಧವಾರ ನಡೆದ 23 ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಇನ್ನೂ ಇಬ್ಬರು ಒಕ್ಕಲಿಗರು ಸ್ಥಾನ ಪಡೆದಿದ್ದಾರೆ. ಅಂತಿಮ ಪಟ್ಟಿಯಲ್ಲಿ ಇನ್ನೂ ಕೆಲವರು ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 2018ರಲ್ಲಿ ಬಿಜೆಪಿ ಒಟ್ಟು 224 ಸ್ಥಾನಗಳಲ್ಲಿ 34 ಸ್ಥಾನಗಳನ್ನು ಒಕ್ಕಲಿಗರಿಗೆ ಹಂಚಿಕೆ ಮಾಡಿತ್ತು. ಕರ್ನಾಟಕದಲ್ಲಿ ಒಕ್ಕಲಿಗರ ಸಂಖ್ಯೆಯು ಒಟ್ಟು ಜನಸಂಖ್ಯೆಯ ಸುಮಾರು 12% ಎಂದು ಅಂದಾಜಿಸಲಾಗಿದೆ ಮತ್ತು ಅವರ ಮತ ಸುಮಾರು 50 ಸ್ಥಾನಗಳಲ್ಲಿ ನಿರ್ಣಾಯಕವಾಗಿದೆ.

ಹಳೆ ಮೈಸೂರು ಪ್ರದೇಶ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ 11 ಜಿಲ್ಲೆಗಳಲ್ಲಿ 89 ಸ್ಥಾನಗಳನ್ನು ಒಳಗೊಂಡಿದೆ. ಇದು JD(S) ನ ಭದ್ರಕೋಟೆಯಾಗಿದ್ದು, ಕಾಂಗ್ರೆಸ್ ಜೆಡಿಎಸ್ಗೆ ಹತ್ತಿರದ ಪ್ರತಿಸ್ಪರ್ಧಿಯಾಗಿದೆ.
ಈ 89 ಸ್ಥಾನಗಳಲ್ಲಿ ಪ್ರಬಲ ಪ್ರದರ್ಶನ ನೀಡಲು ಜೆಡಿಎಸ್, ಅಧಿಕಾರದ ಚುಕ್ಕಾಣಿ ಹಿಡಿಯುವ ನಿರೀಕ್ಷೆಯಲ್ಲಿ ಬಿಜೆಪಿ, ಕರ್ನಾಟಕವನ್ನು ಮರು ವಶಪಡಿಸಿಕೊಳ್ಳಲು ಕಾಂಗ್ರೆಸ್ ಪಣ ತೊಟ್ಟಿದೆ. ಆದರೆ ಬಿಜೆಪಿ 2008ರಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದರೂ ಕೇವಲ 28 ಸ್ಥಾನಗಳನ್ನು ಗೆಲ್ಲಲು ಶಕ್ತವಾಗಿತ್ತು. 2018ರಲ್ಲಿ 23 ಸ್ಥಾನಗಳನ್ನು ಗೆದ್ದಿತ್ತು.

ಈ ಬಾರಿ ಮ್ಯಾಜಿಕ್ ಫಿಗರ್ 113 (ಸರಳ ಬಹುಮತ) ತಲುಪಲು ಕನಿಷ್ಠ 30 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಆದರೆ ಜೆಡಿಎಸ್ನ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಇಬ್ಬರೂ ಒಕ್ಕಲಿಗರು ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ.
ತಮ್ಮ ಪಕ್ಷ ಗೆದ್ದರೆ ಇಬ್ಬರೂ ಸಿಎಂ ಆಗುವ ಹಂಬಲದಲ್ಲಿದ್ದಾರೆ. ಆದರೆ ಇತ್ತ ನಟಿ-ರಾಜಕಾರಣಿ ಹಾಗೂ ಮಂಡ್ಯದ ಸ್ವತಂತ್ರ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಪಕ್ಷಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ. ಮಾತ್ರವಲ್ಲದೆ ಇವರು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಪುತ್ರ ನಿಖಿಲ್ ಅವರನ್ನು ಸುಮಲತಾ ಸೋಲಿಸಿದ್ದರು.

ಕಾಂಗ್ರೆಸ್ ತನ್ನ 166 ಟಿಕೆಟ್ಗಳಲ್ಲಿ 29 ಟಿಕೆಟ್ಗಳನ್ನು ಒಕ್ಕಲಿಗರಿಗೆ ನೀಡಿದೆ. ಇದು 2018 ರಲ್ಲಿ ಒಕ್ಕಲಿಗ ಸಮುದಾಯಕ್ಕೆ ಒಟ್ಟು 41 ಸ್ಥಾನಗಳನ್ನು ಹಂಚಿಕೆ ಮಾಡಿತ್ತು. ಜೊತೆಗೆ ಲಿಂಗಾಯತರಿಗೆ 43 ಟಿಕೆಟ್ಗಳನ್ನು (166 ರಲ್ಲಿ) ನೀಡಿತ್ತು.
ರಾಜ್ಯ ಚುನಾವಣೆ ದಿನಾಂಕ
ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಏಪ್ರಿಲ್ 13 ರಂದು ಚುನಾವಣೆಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ. ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಇನ್ನೂ ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ರಾಜೀವ್ ಕುಮಾರ್ ತಿಳಿಸಿದ್ದರು.












Click it and Unblock the Notifications