Siddaramaiah's Wealth Revealed: ಸಿದ್ದರಾಮಯ್ಯಗಿಂತ ಪತ್ನಿಯೇ ಶ್ರೀಮಂತೆ; ಮಾಜಿ ಸಿಎಂ 6 ಕೋಟಿ ರೂ. ಸಾಲಗಾರ!
ಮೈಸೂರು, ಏಪ್ರಿಲ್ 19: 2023ರ ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಗಾಗಿ ಮೈಸೂರು ಜಿಲ್ಲೆ ವರುಣಾ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ, ಏಪ್ರಿಲ್ 19ರಂದು ನಾಮಪತ್ರ ಸಲ್ಲಿಸಿದರು.
ವರುಣಾ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ನಂಜನಗೂಡಿನ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದೆ.
— Siddaramaiah (@siddaramaiah) April 19, 2023
ಭ್ರಷ್ಟಾಚಾರ ರಹಿತವಾದ, ಪಾರದರ್ಶಕ ಆಡಳಿತ ನೀಡಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯವೆಂಬುದು ನಾಡಿನ ಮತದಾರರ ಅಭಿಪ್ರಾಯ.
ಭವಿಷ್ಯದ ದೊಡ್ಡ ರಾಜಕೀಯ ಬದಲಾವಣೆಗೆ ವರುಣಾದಲ್ಲಿ ಮುನ್ನುಡಿ ಬರೆದಿದ್ದೇನೆ. pic.twitter.com/JifoGLNHUp
ನಂಜನಗೂಡು ತಾಲ್ಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ, ಶಾಸಕ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಮೈಸೂರು ಜಿಲ್ಲೆಯ ಸ್ಥಳಿಯ ಮುಖಂಡರು, ಅಪಾರ ಸಂಖ್ಯೆಯ ಕಾರ್ಯಕರ್ತರು ಸಾಥ್ ನೀಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಆಸ್ತಿ ವಿವರ
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಮಪತ್ರ ಸಲ್ಲಿಸುವ ಅಫಿಡವಿಟ್ನಲ್ಲಿ ತಮ್ಮ ಹಾಗೂ ತಮ್ಮ ಪತ್ನಿ ಹೆಸರಿನಲ್ಲಿರುವ ಆಸ್ತಿ ವಿವರ ಘೋಷಿಸಿಕೊಂಡಿದ್ದಾರೆ. ಸಿದ್ದರಾಮಯ್ಯ 9.58 ಕೋಟಿ ರೂ. ಚರಾಸ್ತಿ ಮತ್ತು 9.43 ಕೋಟಿ ರೂ. ಸ್ಥಿರಾಸ್ತಿ ಇದ್ದು, ಒಟ್ಟಾರೆ 19 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.
ಇನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು 11.26 ಕೋಟಿ ರೂ. ಚರಾಸ್ತಿ ಮತ್ತು 19.56 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದು, 1.29 ಕೋಟಿ ರೂ. ಪಿತ್ರಾರ್ಜಿತವಾಗಿ ಬಂದಿದೆ. ಒಟ್ಟಾರೆ 32.12 ಕೋಟಿ ರೂ. ಒಡತಿಯಾಗಿದ್ದಾರೆ. ಅಲ್ಲದೇ 16.24 ಕೋಟಿ ರೂ. ಸಾಲ ಇದೆ ಎಂದು ಘೋಷಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗಿಂತ ಅವರ ಪತ್ನಿ ಪಾರ್ವತಿಯೇ ಹೆಚ್ಚು ಶ್ರೀಮಂತೆಯಾಗಿದ್ದಾರೆ ಮತ್ತು ಸದ್ಯ ವಿಪಕ್ಷ ನಾಯಕರೂ ಆಗಿರುವ ಸಿದ್ದರಾಮಯ್ಯ 6.84 ಕೋಟಿ ರೂ. ಸಾಲ ಹೊಂದಿರುವುದಾಗಿ ಚುನಾವಣಾ ಅಫಿಡವಿಟ್ನಲ್ಲಿ ಉಲ್ಲೇಖಿಸಿದ್ದಾರೆ. 2018ರ ವಿಧಾನಸಭೆ ಚುನಾವಣೆ ವೇಳೆ ಸಿದ್ದರಾಮಯ್ಯ ಅವರು 18.55 ಕೋಟಿ ರೂ. ಆಸ್ತಿ ಇರುವುದಾಗಿ ತಿಳಿಸಿದ್ದರು.

ಕೋಲಾರ ಬಿಟ್ಟು ವರುಣಾದಿಂದ ಕಣಕ್ಕಿಳಿದ ಸಿದ್ದರಾಮಯ್ಯ
ಸದ್ಯ ಬಾದಾಮಿ ಕ್ಷೇತ್ರ ಶಾಸಕರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ 2023ರ ಕರ್ನಾಟಕ ವಿಧಾನಸಭೆ ಘೋಷಣೆಗೂ ಮುನ್ನ ತಾವು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದರು. ನಂತರ ಕೆಲವು ಆಂತರಿಕ ಸರ್ವೇಯಲ್ಲಿ ಹಿನ್ನಡೆಯಾಗಲಿದೆ ಎಂದು ತಿಳಿದುಬಂದಾಗ, ಅಂತಿಮವಾಗಿ ತವರು ಕ್ಷೇತ್ರ ವರುಣಾವನ್ನು ಆಯ್ಕೆ ಮಾಡಿಕೊಂಡರು.
ಏಪ್ರಿಲ್ 19, ಬುಧವಾರ ಬೆಳಿಗ್ಗೆ ತಮ್ಮ ಹುಟ್ಟೂರಾದ ಸಿದ್ದರಾಮನಹುಂಡಿಗೆ ತೆರಳಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಮನೆ ದೇವರು ಸಿದ್ದರಾಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಆ ಬಳಿಕ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಗೆ ಹಾಗೂ ಉತ್ತನಹಳ್ಳಿಯ ತ್ರಿಪುರಸುಂದರಿ ದೇವಿಗೂ ಪೂಜೆ ಸಲ್ಲಿಸಿ ನಂಜನಗೂಡಿಗೆ ತೆರಳಿದರು.
ಬಳಿಕ ನಂಜನಗೂಡು ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಇದೇ ನನ್ನ ಕೊನೆಯ ಚುನಾವಣೆ, ಹಾಗಾಗಿ ಭಾರೀ ಬಹುಮತದಿಂದ ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು.
"ನಾನು ಕೊನೆಯ ಬಾರಿಗೆ ಚುನಾವಣೆ ಎದುರಿಸುತ್ತಿದ್ದೇನೆ. ಆಮೇಲೆ ಯತೀಂದ್ರ, ಧವನ್ ರಾಕೇಶ್ ಇರುತ್ತಾರೆ. ಮೊಮ್ಮಗ ಧವನ್ ರಾಜಕೀಯಕ್ಕೆ ಬರಲು ಇನ್ನೂ 8 ವರ್ಷ ಬೇಕಾಗುತ್ತದೆ. ಅವನ ಓದು ಮುಗಿದ ನಂತರ ರಾಜಕಾರಣಕ್ಕೆ ಬರುತ್ತಾನೆ. ರಾಕೇಶ್ ಮೇಲೆ ಇದ್ದ ಪ್ರೀತಿಯನ್ನು ಅವನ ಮಗನ ಮೇಲೂ ತೋರಿಸುತ್ತಿದ್ದೀರಿ," ಎಂದು ಸಿದ್ದರಾಮಯ್ಯ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದರು.
"ಬಿಜೆಪಿ ಪಕ್ಷದವರು ಬೆಂಗಳೂರಿನ ನಿವಾಸಿ ವಿ. ಸೋಮಣ್ಣನನ್ನು ಕರೆದುಕೊಂಡು ಬಂದು ವರುಣಾ ಕ್ಷೇತ್ರಕ್ಕೆ ನಿಲ್ಲಿಸಿದ್ದಾರೆ. ಇಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿವೆ. ಜೆಡಿಎಸ್ ಅಭ್ಯರ್ಥಿ ಭಾರತಿ ಶಂಕರ್ನನ್ನು ಕಣಕ್ಕೆ ಇಳಿಸಿರುವುದು ದಲಿತ ಮತಗಳನ್ನು ವಿಭಜಿಸುವ ಷಡ್ಯಂತ್ರವಾಗಿದೆ. ನನ್ನನ್ನು ಸೋಲಿಸಲು ಬಿಜೆಪಿ-ಜೆಡಿಎಸ್ ಪಕ್ಷಗಳು ಕೂಡಿ ಷಡ್ಯಂತ್ರ ರೂಪಿಸಿವೆ," ಎಂದು ಟೀಕಿಸಿದರು.
"ಬಿಜೆಪಿ ಪಕ್ಷದಲ್ಲಿ ಹಿರಿಯರಿಗೆ ಗೌರವವಿಲ್ಲ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನಿರಾಕರಿಸಿರುವುದೇ ಸಾಕ್ಷಿ. ಇಡೀ ರಾಜ್ಯದಲ್ಲಿ ಈಗ ಕಾಂಗ್ರೆಸ್ ಪಕ್ಷದ ಪರ ಗಾಳಿ ಬೀಸುತ್ತಿದೆ. ವರುಣಾ ಜನತೆ ನನ್ನ ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ," ಎಂದರು.
"ಇದು ನನ್ನ ಕೊನೆಯ ಚುನಾವಣೆ ಆಗಿರುವುದರಿಂದ ಮುಂದಿನ ಬಾರಿ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಹಾಗಾಗಿ ಈ ಬಾರಿ 1 ಲಕ್ಷ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಬೇಕು," ಎಂದು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮತದಾರರಲ್ಲಿ ಮನವಿ ಮಾಡಿದರು.












Click it and Unblock the Notifications