ಕರ್ನಾಟಕ ಚುನಾವಣೆ: 'ಜಯಂಟ್ ಕಿಲ್ಲರ್ಸ್' ಆಗಿ ಹೊರಹೊಮ್ಮಿದ ಕಾಂಗ್ರೆಸ್ಸಿನ ಇಬ್ಬರು ಶಾಸಕರು
ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹಲವು ಅಚ್ಚರಿಗೆ ಕಾರಣವಾಗಿದೆ. ಬಸವರಾಜ ಬೊಮ್ಮಾಯಿ ಸರಕಾರದಲ್ಲಿ ಸಚಿವರಾಗಿದ್ದ ಹೆಚ್ಚಿನ ಮಂತ್ರಿಗಳು ಸೋಲುಂಡಿದ್ದಾರೆ. ಇದರ ಜೊತೆಗೆ, ಜೆಡಿಎಸ್ ಕೂಡಾ ಏನು ನಿರೀಕ್ಷೆ ಇಟ್ಟುಕೊಂಡಿತ್ತೋ ಅದೆಲ್ಲವೂ ನೆಲಕಚ್ಚಿದೆ. ಬಿಜೆಪಿ ಮತ್ತು ಜೆಡಿಎಸ್ ಕಳೆದ ಬಾರಿ ಪಡೆದ ಸೀಟುಗಳಿಗೆ ಹೋಲಿಸಿದರೆ ಬಹಳ ನಷ್ಟ ಅನುಭವಿಸಿದೆ.
ಬಿಜೆಪಿಯಲ್ಲಿ ಆಪರೇಶನ್ ಕಮಲದ ಮೂಲಕ ಪಕ್ಷಕ್ಕೆ ಬಂದಿದ್ದವರಲ್ಲಿ ಬಿ.ಸಿ.ಪಾಟೀಲ್, ಎಂಟಿಬಿ ನಾಗರಾಜ್, ಶ್ರೀಮಂತ ಪಾಟೀಲ್ ಸೇರಿದಂತೆ ಹಲವು ನಾಯಕರು ಸೋಲುಂಡಿದ್ದಾರೆ. ಅದೇ ರೀತಿ ಸಚಿವರಾಗಿದ್ದ ಮುರುಗೇಶ್ ನಿರಾಣಿ, ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಸ್ಪೀಕರ್ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡಾ ಪರಾಭವಗೊಂಡಿದ್ದಾರೆ.

ಹಲವು ಅಚ್ಚರಿಯ ಫಲಿತಾಂಶಗಳ ನಡುವೆ ಇಬ್ಬರು ತಮ್ಮ ಮೊದಲ ಪ್ರಯತ್ನದಲ್ಲೇ ರಾಜ್ಯ ರಾಜಕೀಯದ ಪ್ರಬಲ ಮುಖಂಡರು ಎಂದು ಗುರುತಿಸಲ್ಪಡುವವರನ್ನು ಸೋಲಿಸಿ ಹಾಲೀ ಚುನಾವಣೆಯಲ್ಲಿ ಜಯಂಟ್ ಕಿಲ್ಲರ್ಸ್ ಆಗಿ ಹೊರಹೊಮ್ಮಿದ್ದಾರೆ. ಈ ಇಬ್ಬರು ನೂತನ ಶಾಸಕರ ಗೆಲುವು ಕಾಂಗ್ರೆಸ್ ನಾಯಕರ ಸಂತೋಷವನ್ನು ಇಮ್ಮಡಿಗೊಳಿಸಿದೆ.
ಡಾ. ಕೆ. ಸುಧಾಕರ್ ವಿರುದ್ದ ಸ್ಪರ್ಧಿಸಿ ಗೆದ್ದ ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ವಿರುದ್ದ ಸ್ಪರ್ಧಿಸಿದ್ದ ಕಾಂಗ್ರೆಸ್ಸಿನ ಪ್ರದೀಪ್ ಈಶ್ವರ್ ಅವರು 10,642 ಮತಗಳ ಅಂತರದಿಂದ ಗೆಲ್ಲುವ ಮೂಲಕ ಬಿಜೆಪಿಗೆ ದೊಡ್ಡ ಶಾಕ್ ಅನ್ನು ನೀಡಿದ್ದಾರೆ. ಸುಧಾಕರ್ ಅವರಿಗೆ 74, 596 ಮತ್ತು ಪ್ರದೀಶ್ ಈಶ್ವರ್ ಅವರ ಪರ 85,755 ಮತಗಳು ಚಲಾವಣೆಯಾದವು. ಸುಧಾಕರ್ ಅವರ ಸ್ವಂತ ಊರಾದ ಪರೇಸಂದ್ರದವರೇ ಆದ ಪ್ರದೀಪ್, ಚಿಕ್ಕ ವಯಸ್ಸಿನಲ್ಲೇ ಹೆತ್ತವರನ್ನು ಕಳೆದುಕೊಂಡಿದ್ದರು.
ಬಲಿಜ ಸಮುದಾಯಕ್ಕೆ ಸೇರಿದ ಪ್ರದೀಪ್ ಈಶ್ವರ್
ಬಲಿಜ ಸಮುದಾಯಕ್ಕೆ ಸೇರಿದ ಪ್ರದೀಪ್ ಈಶ್ವರ್ ಅವರ ಶಿಕ್ಷಣ ತುಮಕೂರಿನ ಸಿದ್ದಗಂಗಾ ಮಠದ ಕಾಲೇಜಿನಲ್ಲಾಯಿತು. ನಗರದ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿಯನ್ನು ಆರಂಭಿಸಿದ ಇವರು ನಂತರ ಟಿವಿ ನಿರೂಪಕರಾಗಿ ಕೆಲಸ ನಿರ್ವಹಿಸಿದ್ದರು. ಪರಿಶ್ರಮ ನೀಟ್ ಅಕಾಡೆಮಿಯನ್ನು ಸ್ಥಾಪಿಸಿದ ಈಶ್ವರ್, ಕೆಲವೇ ವರ್ಷಗಳಲ್ಲಿ ಡಾ.ಸುಧಾಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ಹೊಸ ಭಾಷ್ಯವನ್ನು ಬರೆದಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೋಲು
ಚುನಾವಣೆಯ ಇನ್ನೊಂದು ಅಚ್ಚರಿಯ ಫಲಿತಾಂಶ ಎಂದರೆ ಚಿಕ್ಕಮಗಳೂರಿನಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಸೋಲು. ತಮ್ಮಾಪ್ತರಾಗಿದ್ದ ಮತ್ತು ಬಿಜೆಪಿಯ ಮುಖಂಡ ಎಚ್.ಡಿ.ತಮ್ಮಯ್ಯ ವಿರುದ್ದ ರವಿ ಸೋಲುಂಡಿದ್ದಾರೆ. 5,926 ಮತಗಳ ಅಂತರದಿಂದ ತಮ್ಮಯ್ಯ ಗೆಲುವು ಸಾಧಿಸಿದ್ದಾರೆ. ಸಿ.ಟಿ.ರವಿಯನ್ನು ಸೋಲಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಣೆದಿದ್ದ ರಾಜಕೀಯ ತಂತ್ರಗಾರಿಕೆ ಇದು ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಹದಿನಾಲ್ಕು ವರ್ಷಗಳಿಂದ ಸಿ.ಟಿ.ರವಿ ಜೊತೆಗಿದ್ದ ತಮ್ಮಯ್ಯ
ಹದಿನಾಲ್ಕು ವರ್ಷಗಳಿಂದ ಸಿ.ಟಿ.ರವಿ ಜೊತೆಗಿದ್ದ ತಮ್ಮಯ್ಯ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 1967ರಲ್ಲಿ ಲಿಂಗಾಯತ ಸಮುದಾಯದ ಸಿಎಂಎಸ್ ಶಾಸ್ತ್ರಿ ಅವರು ಇಲ್ಲಿಂದ ಗೆಲುವು ಸಾಧಿಸಿದ್ದರು. 1999ರ ವಿಧಾನಸಭಾ ಚುನಾವಣೆ ಬಳಿಕ ಸೋಲು ಕಾಣದ ರವಿ ಈ ಬಾರಿ ತಮ್ಮ ಆಪ್ತನ ಮುಂದೇಯೇ ಸೋಲು ಕಾಣುವ ಮೂಲಕ ರಾಜಕೀಯ ಹಿನ್ನಡೆಯನ್ನು ಎದುರಿಸಿದ್ದಾರೆ.












Click it and Unblock the Notifications