Jagadish Shettar BJP Ticket: ಯಾವುದೇ ಕಾರಣಕ್ಕೂ ಟಿಕೆಟ್ ಕೈತಪ್ಪಿಸುವ ಕೆಲಸ ಮಾಡಲ್ಲ: ಸಿಎಂ
ಹುಬ್ಬಳ್ಳಿ,ಏಪ್ರಿಲ್ 14: ಚುನಾವಣೆಗೆ ಸಜ್ಜಾಗುತ್ತಿದ್ದ ರಾಜ್ಯ ಬಿಜೆಪಿಗೆ ಟಿಕೆಟ್ ಘೋಷಣೆಯಿಂದಾಗಿ ಬಂಡಾಯದ ಬೆಂಕಿ ಜೋರಾಗಿದೆ. 224 ಕ್ಷೇತ್ರಗಳ ಪೈಕಿ 212 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗೆ ಈ ಬಾರಿ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡುತ್ತಾ ಇಲ್ವಾ ಎಂಬ ಚರ್ಚೆ ಜೋರಾಗಿದೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಶನಿವಾರ ಮಾಧ್ಯಮಗಳ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕರಾದ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಿಸುತ್ತಿರೋದು ನಾವಲ್ಲ, ನೂರಾರು ಜನರು ಈ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಅವರ ಆರೋಪಗಳಲ್ಲಿ ಹುರುಳಿಲ್ಲ, ಎಲ್ಲವೂ ಸುಳ್ಳು ವದಂತಿಗಳೆಂದು ತಿಳಿಸಿದರು.

ಈವರೆಗೂ ನಾವು ಪಕ್ಷದ ವರಿಷ್ಠರ ಜೊತೆಗೆ ಸಂಪರ್ಕದಲ್ಲಿದ್ದೇವೆ. ನಾವು ಹಾಗೂ ಜಗದೀಶ್ ಶೆಟ್ಟರ್ ಬಹಳ ಆತ್ಮೀಯರು, ಯಾವುದೇ ಕಾರಣಕ್ಕೂ ಟಿಕೆಟ್ ಕೈತಪ್ಪಿಸುವ ಕೆಲಸ ಮಾಡಲ್ಲ. ಅವರಿಗೆ ಟಿಕೆಟ್'ಗಾಗಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇವೆ ಎಂದರು.
ಇನ್ನು ಟಿಕೆಟ್ ಕೊಡಿಸುವ ವಿಚಾರಣೆ ಸಂಬಂಧಿಸಿದಂತೆ ಸರ್ವ ಪ್ರಯತ್ನ ಮಾಡುತ್ತಿದ್ದು, ಶುಕ್ರವಾರ ಧರ್ಮೇಂದ್ರ ಪ್ರಧಾನ ಬಳಿಯಲ್ಲಿ ಚರ್ಚೆ ಮಾಡಿದ್ದೇನೆ. ಶೆಟ್ಟರ್ ಕುಟುಂಬ ಜನಸಂಘದಿಂದ ರಾಜಕೀಯದಲ್ಲಿದೆ. ಅಷ್ಟೇ ಅಲ್ಲದೇ ಜಗದೀಶ್ ಶೆಟ್ಟರ್ ಅತ್ಯಂತ ಪಕ್ಷ ನಿಷ್ಠರು. ಉತ್ತರ ಕರ್ನಾಟಕ ಭಾಗಕ್ಕೆ ಅವರು ಅವಶ್ಯಕವಾಗಿದ್ದಾರೆ. ಅವರನ್ನು ಉಳಿಸಿಕೊಳ್ಳಬೇಕೆಂದು ನಾನು ಹೇಳಿದ್ದೇನೆ. ಹೀಗಾಗಿ ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಮಾತನಾಡಿದ್ದೇನೆ. ಅವರನ್ನು ಉಳಿಸಿಕೊಳ್ಳುವ ವಿಶ್ವಾಸ ಇದೆ ಎಂದು ತಿಳಿಸಿದರು.

ನೆಹರೂ ಓಲೇಕಾರ ಅವರ ನೀರಾವರಿ ಯೋಜನೆಯಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ನೀಡಲಿ. ಅದೇ ಹಗರಣದಲ್ಲಿ ನೆಹರೂ ಓಲೆಕಾರ ಅವರಿಗೆ ಶಿಕ್ಷೆಯೂ ಆಗಿದೆ ಎಂದರು.
ಶೇ.63 ರಷ್ಟು ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಗೊಂದಲವಿದೆ ಇದು ಕಾಂಗ್ರೆಸ್ ಗೆ ಪ್ಲಸ್ ಪಾಯಿಂಟ್ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿ, ಹಾಗಾದರೇ ಕಾಂಗ್ರೆಸ್'ನವರಿಗೆ ಸ್ವಂತ ಶಕ್ತಿ ಇಲ್ಲ ಅಂತಾ ಆಯ್ತು ಎಂದು ಕಿಡಿಕಾರಿದರು. ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ, ಶೀಘ್ರವೇ ಬಿಜೆಪಿಯಲ್ಲಿ ಎಲ್ಲವೂ ತಿಳಿಯಾಗುತ್ತದೆ. ಚುನಾವಣೆ ಎಂದರೆ ಸವಾಲು, ನನ್ನ ಮೊದಲ ಚುನಾವಣೆಯಲ್ಲಿಯೂ ಸೋಲು ಎಂದು ಬರೆದಿದ್ದರು. ಆದರೆ ಅವೆಲ್ಲವೂ ಸುಳ್ಳಾಯಿತು. ನಾನು ಗೆದ್ದು ಬಂದಿದ್ದೇನೆ. ಇಂದು ಶಿಗ್ಗಾಂವಿ ಯಲ್ಲಿ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದೇನೆ ಎಂದು ಬೊಮ್ಮಾಯಿ ತಿಳಿಸಿದರು.
ಶ್ರೀ ಸಿದ್ಧಾರೂಢ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಇನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಶಿಗ್ಗಾವಿಯಲ್ಲಿ ನಾಮಪತ್ರ ಸಲ್ಲಿಸಲು ಶಿಗ್ಗಾವಿಗೆ ತೆರಳುವ ಮುನ್ನ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ವಿಶೇóಷ ಪೂಜೆ ಸಲ್ಲಿಸಿದರು. ರಾಜ್ಯದ ಸಚಿವ ಸಿ.ಸಿ.ಪಾಟೀಲ್ ಮತ್ತು ಪಕ್ಷದ ಮುಖಂಡರು ಇದ್ದರು












Click it and Unblock the Notifications