BSY, ಈಶ್ವರಪ್ಪ, ಶೆಟ್ಟರ್: 'ಸಂತೋಷ ಕೂಟ'ದ ಆಟಕ್ಕೆ ಲಿಂಗಾಯತ, ಹಿಂದುಳಿದ ವರ್ಗದ ನಾಯಕರ ಬಲಿ- ಕಾಂಗ್ರೆಸ್ ಟ್ವೀಟ್
ಬೆಂಗಳೂರು, ಏಪ್ರಿಲ್ 11: ಯಡಿಯೂರಪ್ಪನವರನ್ನು ಕಣ್ಣೀರು ಹಾಕಿಸಿ ಪದಚ್ಯುತಿ ಮಾಡಲಾಯ್ತು. ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಈಶ್ವರಪ್ಪನವರ ರಾಜಕೀಯವನ್ನೇ ಮುಗಿಸಿಯಾಯ್ತು. ಜಗದೀಶ್ ಶೆಟ್ಟರ್ ಕಾಲವೂ ಸನ್ನಿಹಿತ. ಅಲ್ಲಿಗೆ ಬಿಜೆಪಿಯಲ್ಲಿ ಲಿಂಗಾಯತ ಹಾಗೂ ಹಿಂದುಳಿದ ವರ್ಗದ ನಾಯಕತ್ವವನ್ನು ಕಿತ್ತು ನಾಗಪುರದ ನೌಕರರಾದ ಜೋಶಿ ಹಾಗೂ ಸಂತೋಷ ಕೂಟ ಆಪೋಷನ ತೆಗೆದುಕೊಂಡಾಯ್ತು ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ.
ಈ ವಿಚಾರವಾಗಿ ಸರಣಿ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದ್ದು, 'ಮೊ-ಶಾ ಜೋಡಿಯ ಮಸಲತ್ತು ನೋಡಿದರೆ ಬೊಮ್ಮಾಯಿಯವರೂ ರಾಜಕೀಯ ನಿವೃತ್ತಿ ಘೋಷಿಸಿದರೆ ಯಾವುದೇ ಆಶ್ಚರ್ಯವಿಲ್ಲ. ಪ್ರಹ್ಲಾದ್ ಜೋಶಿ, ಸಂತೋಷರನ್ನು ಪ್ರತಿಷ್ಠಾಪಿಸಲು ಹವಣಿಸುತ್ತಿರುವ ಬೊಮ್ಮಾಯಿಯವರು ಅದೆಷ್ಟೇ ನಾಗಪುರದ ನೌಕರರು ಎನಿಸಿಕೊಂಡರೂ RSSಗೆ ಅಪಥ್ಯವೇ. ಯಡಿಯೂರಪ್ಪರಂತೆ ಬೊಮ್ಮಾಯಿಯವರ ರಾಜಕೀಯ ಬದುಕೂ ದುರಂತ ಅಂತ್ಯ ಕಾಣಲಿದೆ' ಎಂದು ಕೆಪಿಸಿಸಿ ಟೀಕಿಸಿದೆ.

'ಯಡಿಯೂರಪ್ಪ - ಔಟ್
ಹಾಲಾಡಿ ಶ್ರೀನಿವಾಸ ಶೆಟ್ಟಿ - ಔಟ್
ಈಶ್ವರಪ್ಪ - ಔಟ್
ಜಗದೀಶ್ ಶೆಟ್ಟರ್ - ಔಟ್?
ಸಾವಿರ ತಲೆ ತೆಗೆದಾದರೂ ಸರಿ ಪ್ರಹ್ಲಾದ್ ಜೋಷಿ, ಬಿ ಎಲ್ ಸಂತೋಷರಿಗೆ ಜಾಗ ಮಾಡಿಕೊಡಲು ಅಮಿತ್ ಶಾ ತಯಾರಾಗಿದ್ದಾರೆ. ಸಂತೋಷ ಕೂಟದ ಆಟಕ್ಕೆ ಬಿಜೆಪಿಯ ಲಿಂಗಾಯತ ಹಾಗೂ ಹಿಂದುಳಿದ ವರ್ಗದ ನಾಯಕರು ಹೀನಾಯ ಅವಮಾನ ಎದುರಿಸಿ ಹೊರನಡೆಯುತ್ತಿದ್ದಾರೆ' ಎಂದು ಕಾಂಗ್ರೆಸ್ ಹೇಳಿದೆ.
'BSY, ಈಶ್ವರಪ್ಪ, ಜಗದೀಶ್ ಶೆಟ್ಟರ್.. ಬಿಜೆಪಿ ಎಂಬ ಕಳೆಗೆ ನೀರು ಗೊಬ್ಬರ ಹಾಕಿ ಬೆಳೆಸಿದ ನಾಯಕರನ್ನು ಅಗೌರವದ ನಿರ್ಗಮನ ದಾರಿ ತೋರಿಸಿದೆ ಬಿಜೆಪಿ. 'ನಾವೇ ಎಲ್ಲ' ಎನ್ನುತ್ತಿದ್ದವರಿಗೆ 'ನೀವೇನೂ ಅಲ್ಲ' ಎನ್ನುತ್ತಿದೆ ಮೊ-ಶಾ ಜೋಡಿ. ಗೊಡ್ಡು ಹಸುಗಳನ್ನು ಗೋಶಾಲೆಗಾದರೂ ಬಿಡಬಹುದಿತ್ತು, ಆದರೆ ನೇರ ಕಸಾಯಿ ಖಾನೆಗೇ ಕಳಿಸುತ್ತಿರುವುದು ದುರಂತ' ಎಂದು ಕಾಂಗ್ರೆಸ್ ಗಂಭೀರ ಆರೋಪಗಳನ್ನು ಮಾಡಿದೆ.

'ಸಂತೋಷ್ ಆಟಕ್ಕೆ ಯಡಿಯೂರಪ್ಪ ಬಲಿ. ಪ್ರಹ್ಲಾದ್ ಜೋಷಿ ಆಟಕ್ಕೆ ಜಗದೀಶ್ ಶೆಟ್ಟರ್ ಬಲಿ. ನಾಗಪುರದ ಕರುಳುಬಳ್ಳಿಯ ಸಂಬಂಧವನ್ನೇ ಬಳಸಿ ಬಿಜೆಪಿಯಲ್ಲಿ ಪ್ರಾಭಲ್ಯ ಸಾಧಿಸಿರುವ ಪ್ರಹ್ಲಾದ್ ಜೋಶಿ ಲಿಂಗಾಯತ ನಾಯಕರನ್ನು ಹೊಂಡಕ್ಕೆ ಕೆಡವುದರಲ್ಲಿ ಯಶಸ್ವಿಯಾಗಿದ್ದಾರೆ. ಮಾಜಿ ಸಿಎಂ ಒಬ್ಬರಿಗೆ ಟಿಕೆಟ್ ನಿರಾಕರಿಸುವಂತಹ ಅವಮಾನ ಇನ್ನೊಂದಿಲ್ಲ' ಎಂದೂ ಕಾಂಗ್ರೆಸ್ ಹೇಳಿದೆ.
ಕರ್ನಾಟಕದ ಹಿರಿಯ ಬಿಜೆಪಿ ನಾಯಕ ಹಾಗೂ ಶಿವಮೊಗ್ಗ ಶಾಸಕ ಕೆ ಎಸ್ ಈಶ್ವರಪ್ಪ ಮಂಗಳವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ಪತ್ರ ಬರೆದು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ. ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯಾವುದೇ ವಿಧಾನಸಭಾ ಕ್ಷೇತ್ರಕ್ಕೆ ತಮ್ಮ ಹೆಸರನ್ನು ಪರಿಗಣಿಸದಂತೆ ಪಕ್ಷದ ಮುಖಂಡರಿಗೆ ಮನವಿ ಮಾಡಿದ್ದಾರೆ.
ನಡ್ಡಾ ಅವರಿಗೆ ಪತ್ರ ಬರೆದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಈಶ್ವರಪ್ಪ, ಕರ್ನಾಟಕದಲ್ಲಿ ಬಿಜೆಪಿಗೆ ಇನ್ನೂ ಸಂಪೂರ್ಣ ಬಹುಮತ ಸಿಕ್ಕಿಲ್ಲ. ಬಹುಮತವಿಲ್ಲದ ರಾಜ್ಯದಲ್ಲಿ ಆಡಳಿತ ನಡೆಸಲು ಜನರು ಬಿಜೆಪಿಗೆ ಅವಕಾಶ ನೀಡಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುವುದು ಅವರ ಏಕೈಕ ಉದ್ದೇಶವಾಗಿದೆ ಎಂದು ಹೇಳಿದರು.
ಬಿಎಸ್ ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದರೆ, ಸದಾನಂದಗೌಡ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಕೂಡ ಬಿಜೆಪಿಯಿಂದ ಮುಖ್ಯಮಂತ್ರಿಯಾದರು. ಆದರೆ, ಹಿಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಸಂಪೂರ್ಣ ಬಹುಮತ ಬಂದಿರಲಿಲ್ಲ ಎಂದು ಈಶ್ವರಪ್ಪ ಹೇಳಿದರು. ಹೀಗಾಗಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಿ ಪಕ್ಷಕ್ಕೆ ಬಹುಮತ ಪಡೆಯಲು ನೆರವಾಗಲು ನಿರ್ಧರಿಸಿದ್ದಾರೆ.
ಪಕ್ಷದ ನಾಯಕರು ಯಾವುದೇ ಹೊಸ ಜವಾಬ್ದಾರಿ ನೀಡಿದರೂ ಅದನ್ನು ನಿಭಾಯಿಸಲು ಸಿದ್ಧ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. ಪಕ್ಷದ ಅಧ್ಯಕ್ಷರು ತಮ್ಮ ನಿರ್ಧಾರವನ್ನು ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.












Click it and Unblock the Notifications