ಕೋಲಾರ ಕ್ಷೇತ್ರ ಗಲಾಟೆ: ಕಾಂಗ್ರೆಸ್ ರೈತ ವೃತ್ತಿಯನ್ನು ಹೀಯಾಳಿಸಿದೆ ಎಂದು ಜೆಡಿಎಸ್ ತರಾಟೆ
ರಾಜ್ಯಕ್ಕೆ ಗ್ಯಾರಂಟಿ ವಿತರಿಸುತ್ತಿರುವ ಕರ್ನಾಟಕ ಕಾಂಗ್ರೆಸ್ ನಾಯಕನಿಗೆ ಸೀಟು ಎಲ್ಲಿ ಎಂದು ಗ್ಯಾರಂಟಿಯಾಗಿಲ್ಲ. ಮೊದಲು ಅದನ್ನು ಖಾತ್ರಿಪಡಿಸಿಕೊಳ್ಳಿ.
ಕಲಬುರಗಿ, ಮಾರ್ಚ್ 19: 'ಟೊಮೆಟೊ ಏಜೆಂಟುಗಳು ಸಿದ್ದರಾಮಯ್ಯರನ್ನು ಸೋಲಿಸಲು ಬಂದಿದ್ದಾರೆ' ಎಂದು ಕಾಂಗ್ರೆಸ್ ವಕ್ತಾರರೊಬ್ಬರು ಖಾಸಗಿ ನ್ಯೂಸ್ ಚಾನೆಲ್ ಒಂದರ ವೇದಿಕೆಯಲ್ಲಿ ಹೇಳಿದ್ದರೆ. ಈ ಹೇಳಿಕೆಗೆ ಜಾತ್ಯಾತೀತ ಜನತಾದಳ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದೆ.
ಖಾಸಗಿ ಚಾನೆಲ್ ಒಂದರಲ್ಲಿ ನಡೆದ ಮುಂಬರುವ ವಿಧಾನಸಭಾ ಚುನಾವಣಾ ಚರ್ಚೆ ವೇಳೆ ಕಾಂಗ್ರೆಸ್ ವಕ್ತಾರರೊಬ್ಬರು ಕೋಲಾರದಲ್ಲಿ ಸಿದ್ದರಾಮಯ್ಯ ಅವರ ಗೆಲುವು ನಿಶ್ಚತ ಎಂದು ಹೇಳುವ ಭರದಲ್ಲಿ ಜೆಡಿಎಸ್ ನಾಯಕರನ್ನು ಕೆಣಕಿದ್ದಾರೆ. ಕೋಲಾರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಬೇಕು ಎಂಬ ಕಾರಣಕ್ಕೆ ಜೆಡಿಎಸ್ ಅಧ್ಯಕ್ಷ ಸಿಎಂ ಇಬ್ರಾಹಿಂ ಹಲವು ಬಾರಿ ಕೋಲಾರಕ್ಕೆ ಭೇಟಿ ನೀಡಿದ್ದಾರೆ.

ಟೊಮೆಟೊ ಏಜೆಂಟುಗಳು ಸಿದ್ದರಾಮಯ್ಯರನ್ನು ಸೋಲಿಸಲು ಬಂದಿದ್ದಾರೆ ಎಂಬ ಹೇಳಿಕೆಯನ್ನು ಖಂಡಿಸಿರುವ ಜಾತ್ಯಾತೀತ ಜನತಾದಳ ಪಕ್ಷ ಸರಣಿ ಟ್ವೀಟ್ಗಳ ಮೂಲಕ ಕಾಂಗ್ರೆಸ್ಗೆ ತಿರುಗೇಟು ನೀಡಿದೆ. 'ಟೊಮೆಟೊ ಏಜೆಂಟುಗಳು ಸಿದ್ದರಾಮಯ್ಯರನ್ನು ಸೋಲಿಸಲು ಬಂದಿದ್ದಾರೆ' ಎಂಬ ಹೇಳಿಕೆ ಮೂಲಕ ಕಾಂಗ್ರೆಸ್ ವಕ್ತಾರರೊಬ್ಬರು ಪ್ರಜಾಪ್ರಭುತ್ವವನ್ನು ಪ್ರಶ್ನಿಸಿದ್ದಾರೆ. ಕ್ಷೇತ್ರ ಹುಡುಕಾಟದಲ್ಲಿ ಸುಸ್ತಾದ ಅಲೆಮಾರಿ ನಾಯಕನನ್ನು ಸಮರ್ಥಿಸಲು ರೈತ ವೃತ್ತಿಯನ್ನು ಹಿಯಾಳಿಸಿದ ಕರ್ನಾಟಕ ಕಾಂಗ್ರೆಸ್ ಮನಸ್ಥಿತಿಗೆ ಧಿಕ್ಕಾರ' ಎಂದಿದೆ.
ರಾಜ್ಯಕ್ಕೆ ಗ್ಯಾರಂಟಿ ವಿತರಿಸುತ್ತಿರುವ @INCKarnataka ನಾಯಕನಿಗೆ ಸೀಟು ಎಲ್ಲಿ ಎಂದು ಗ್ಯಾರಂಟಿಯಾಗಿಲ್ಲ. ಮೊದಲು ಅದನ್ನು ಖಾತ್ರಿಪಡಿಸಿಕೊಳ್ಳಿ. ಆಮೇಲೆ ಪ್ರತಿಸ್ಪರ್ಧಿಗಳ ವೃತ್ತಿಬಗ್ಗೆ ಮಾತಾಡಿ. ರೈತರ ಬಗೆಗಿನ ಕೀಳು ಮನಸ್ಥಿತಿ ನೀವಿನ್ನೂ ಬದಲಾಯಿಸದಿದ್ದರೆ ಜನ ನಿಮ್ಮನ್ನು ಬದಲಾಯಿಸುತ್ತಾರೆ ಎಚ್ಚರವಿರಲಿ. 4/4
— Janata Dal Secular (@JanataDal_S) March 19, 2023
"ಪ್ರಜಾಪ್ರಭುತ್ವ ದೇಶವಿದು. ಚುನಾವಣೆಗೆ ಯಾರೂ ನಿಲ್ಲಬಹುದು. ಸೋಲುವ ಭಯದಿಂದ ಕ್ಷೇತ್ರದಿಂದ ಕ್ಷೇತ್ರಕ್ಕೆ ಜಂಪ್ ಆಗುತ್ತಿರುವ ನಿಮ್ಮ ನಾಯಕನನ್ನು ಸಮರ್ಥಿಸಲು,ಒಂದು ವೃತ್ತಿಯನ್ನು ಕೀಳಾಗಿ ಕಾಣುವ ಮನಸ್ಥಿತಿ ಬದಲಾಯಿಸಿ. ಅಖಾಡಕ್ಕಿಳಿಯುವ ಮೊದಲೇ ಕರ್ನಾಟಕ ಕಾಂಗ್ರೆಸ್ಗೆ ಜೆಡಿಎಸ್ ಭಯ ಕಾಡುವುದರಿಂದ ಅವರಿಂದ ಇಂತಹ ಮಾತುಗಳು ಸಹಜ" ಎಂದು ಟೀಕಿಸಿದೆ.

"ಯಾರು ಚುನಾವಣೆಗೆ ಸ್ಪರ್ಧಿಸಬೇಕು, ಸ್ಪರ್ಧಿಸಬಾರದು ಎಂದು ಹೇಳುವ ಅಧಿಕಾರ ಕರ್ನಾಟಕ ಕಾಂಗ್ರೆಸ್ಕ್ಕೆ ಕೊಟ್ಟವರಾರು..? ಸಾಮಾನ್ಯ ರೈತ ಕುಟುಂಬದ ವ್ಯಕ್ತಿ ಪ್ರಧಾನಿಯಾದ ಈ ದೇಶದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಎಲ್ಲರಿಗೂ ಇದೆ. ನಿಮ್ಮ ಪೌರುಷ ಚುನಾವಣೆಯಲ್ಲಿ ಪ್ರದರ್ಶಿಸಿ, ಮಾತಿನಲ್ಲಲ್ಲ" ಎಂದು ಕಠೋರವಾಗಿ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಕಿಡಿಕಾರಿ, ಸವಾಲು ಹಾಕಿದೆ.
"ರಾಜ್ಯಕ್ಕೆ ಗ್ಯಾರಂಟಿ ವಿತರಿಸುತ್ತಿರುವ ಕರ್ನಾಟಕ ಕಾಂಗ್ರೆಸ್ ನಾಯಕನಿಗೆ ಸೀಟು ಎಲ್ಲಿ ಎಂದು ಗ್ಯಾರಂಟಿಯಾಗಿಲ್ಲ. ಮೊದಲು ಅದನ್ನು ಖಾತ್ರಿಪಡಿಸಿಕೊಳ್ಳಿ. ಆಮೇಲೆ ಪ್ರತಿಸ್ಪರ್ಧಿಗಳ ವೃತ್ತಿಬಗ್ಗೆ ಮಾತಾಡಿ. ರೈತರ ಬಗೆಗಿನ ಕೀಳು ಮನಸ್ಥಿತಿ ನೀವಿನ್ನೂ ಬದಲಾಯಿಸದಿದ್ದರೆ ಜನ ನಿಮ್ಮನ್ನು ಬದಲಾಯಿಸುತ್ತಾರೆ ಎಚ್ಚರವಿರಲಿ" ಎಂದು ಸಿದ್ದರಾಮಯ್ಯ ಅವರ ಕ್ಷೇತ್ರ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಪಕ್ಷದ ಕುರಿತು ವ್ಯಂಗ್ಯವಾಡಿದೆ.
ಇತ್ತ, ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಈಗಾಗಲೇ ಘೋಷಿಸಿದ್ದಾರೆ. ಆದರೆ ಶುಕ್ರವಾರ ಕಾಂಗ್ರೆಸ್ ಹೈಕಮಾಂಡ್ ಸಭೆಯಲ್ಲಿ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಸಲಹೆ ನೀಡಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಸಿದ್ದರಾಮಯ್ಯ ಅವರ ಕ್ಷೇತ್ರ ಆಯ್ಕೆ ಇನ್ನು ಕಗ್ಗಂಟಾಗಿಯೇ ಉಳಿದಿದೆ.
ಗುರುವಾರ ದೆಹಲಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯರಿಗೆ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಹಾಗೂ ಕೋಲಾರದಿಂದ ಹಿಂದೆ ಸರಿಯುವಂತೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ನಿಮಗೆ ಕೋಲಾರ ಕ್ಷೇತ್ರ ಸೂಕ್ತ ಅಲ್ಲ, ನೀವು ವರುಣಾದಿಂದಲೇ ಸ್ಪರ್ಧೆ ಮಾಡಿ, ನಿಮ್ಮ ಪ್ರತಿ ಒಂದು ನಿಮಿಷವೂ ಪಕ್ಷಕ್ಕೆ ಅಗತ್ಯವಾಗಿದೆ. ನಾಮಪತ್ರ ಹಾಕಿ ಬೇರೆ ಕಡೆ ಪ್ರಚಾರ ಮಾಡಿ ಎಂದು ರಾಹುಲ್ ಗಾಂಧಿ ಸಿದ್ದರಾಮಯ್ಯಗೆ ಸೂಚನೆ ನೀಡಿದ್ದು, ಇದಕ್ಕೆ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಮೂಳಗಳು ತಿಳಿಸಿವೆ












Click it and Unblock the Notifications