ಕಡೂರು ಕ್ಷೇತ್ರಕ್ಕೆ ಅಭ್ಯರ್ಥಿ ಅಂತಿಮಗೊಳಿಸಿದ ಜೆಡಿಎಸ್!
ವೈಎಸ್ವಿ ದತ್ತಾ ಜೆಡಿಎಸ್ ಪಕ್ಷ ಬಿಟ್ಟಿದ್ದಾರೆ. ಈ ಬಾರಿಯ ಚುನಾವಣೆಗೆ ಜೆಡಿಎಸ್ ಕಡೂರು ಕ್ಷೇತ್ರಕ್ಕೆ ಅಭ್ಯರ್ಥಿ ಅಂತಿಮಗೊಳಿಸಿದೆ.
ಬೆಂಗಳೂರು, ಮಾರ್ಚ್ 06; ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಶಾಸಕ ವೈಎಸ್ವಿ ದತ್ತಾ ಪಕ್ಷದಿಂದ ದೂರವಾಗಿದ್ದಾರೆ. ಆದ್ದರಿಂದ ದತ್ತಾ ಪ್ರತಿನಿಧಿಸುತ್ತಿದ್ದ ಕಡೂರು ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಯಾರು? ಎಂಬ ಪ್ರಶ್ನೆ ಎದ್ದಿತ್ತು. ವೈಎಸ್ವಿ ದತ್ತಾ ಕಡೂರು ಕ್ಷೇತ್ರದಿಂದಲೇ ಕಾಂಗ್ರೆಸ್ನಿಂದ ಕಣಕ್ಕಿಳಿಯುವ ನಿರೀಕ್ಷೆ ಇದೆ.
ಸೋಮವಾರ ಹಾಸನ ಸಂಸದ ಪ್ರಜ್ವಲ್ ರೇವಣ್ಣ ನಿವಾಸದಲ್ಲಿ ಜೆಡಿಎಸ್ ನಾಯಕರ ಸಭೆ ನಡೆಯಿತು. ಮಾಜಿ ಸಚಿವ ಎಚ್. ಡಿ. ರೇವಣ್ಣ ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಕಡೂರು ಕ್ಷೇತ್ರದ ಅಭ್ಯರ್ಥಿ ಅಂತಿಮಗೊಳಿಸುವ ಕುರಿತು ಚರ್ಚೆಗಳು ನಡೆದವು. ಅಂತಿಮವಾಗಿ ಸಿ. ಎಂ. ಧನಂಜಯರನ್ನು ಅಭ್ಯರ್ಥಿ ಎಂದು ತೀರ್ಮಾನ ಮಾಡಲಾಯಿತು. ಕರ್ನಾಟಕ ರಾಜ್ಯ ಕೈಗಾರಿಕಾ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಧನಂಜಯ ಪಕ್ಷದ ಅಭ್ಯರ್ಥಿ ಎಂದು ಎಂಎಲ್ಸಿ ಭೋಜೇಗೌಡ ಘೋಷಿಸಿದರು.

ಸಭೆಯ ಬಳಿಕ ಮಾತನಾಡಿದ ಪ್ರಜ್ವಲ್ ರೇವಣ್ಣ, "ಇಂದು ಕಡೂರು ಅಭ್ಯರ್ಥಿ ಬಗ್ಗೆ ಪ್ರಮುಖರ ಸಭೆ ಕರೆದು ಚರ್ಚಿಸಲಾಗಿದೆ. ಎಲ್ಲಾ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಕುಮಾರಣ್ಣ, ದೇವೇಗೌಡರು, ರಾಜ್ಯ ಅಧ್ಯಕ್ಷರ ಅನುಮತಿ ಪಡೆಯಲಾಗಿದೆ. ಒಮ್ಮತದ ಅಭ್ಯರ್ಥಿಯಾಗಿ ಧನಂಜಯ ಹೆಸರನ್ನು ಅಂತಿಮ ಗೊಳಿಸಲಾಗಿದೆ. ಇದಕ್ಕೆ ವರಿಷ್ಠರೂ ಸಹ ಒಪ್ಪಿಗೆ ನೀಡಿದ್ದಾರೆ" ಎಂದು ಹೇಳಿದರು.
ಒಂದು ಕಡೆ ಹಾಸನ ಟಿಕೆಟ್ ಜಟಾಪಟಿ ಜೋರಾಗಿದೆ. ಮತ್ತೊಂದು ಕಡೆ ಅರಸೀಕೆರೆಯ ಹಾಲಿ ಶಾಸಕ ಶಿವಲಿಂಗೇಗೌಡ ಜೆಡಿಎಸ್ ತೊರೆಯುವುದಾಗಿ ಘೋಷಣೆ ಮಾಡಿದ್ದಾರೆ. ಇದರ ನಡುವೆಯೇ ಜೆಡಿಎಸ್ ಪಕ್ಷ ವೈಎಸ್ವಿ ದತ್ತಾ ಸ್ಥಾನಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಈ ಮೂಲಕ ಅಭ್ಯರ್ಥಿಗೆ ಚುನಾವಣಾ ಸಿದ್ಧತೆ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.
ಕಡೂರು ಕ್ಷೇತ್ರ ಸದ್ಯ ಬಿಜೆಪಿಯ ವಶದಲ್ಲಿದೆ. 2018ರ ಚುನಾವಣೆಯಲ್ಲಿ ಬೆಳ್ಳಿ ಪ್ರಕಾಶ್ 62,242 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಎದುರಾಳಿಯಾಗಿದ್ದ ವೈಎಸ್ವಿ ದತ್ತಾ 46,860 ಮತಗಳನ್ನು ಪಡೆದು ಸೋಲು ಕಂಡಿದ್ದರು. 2013ರ ಚುನಾವಣೆಯಲ್ಲಿ ವೈಎಸ್ವಿ ದತ್ತಾ ಕ್ಷೇತ್ರದಲ್ಲಿ ಜಯಗಳಿಸಿದ್ದರು.

ಕೆಲವು ದಿನಗಳ ಹಿಂದೆ ಮಾತನಾಡಿದ್ದ ಮಾಜಿ ಶಾಸಕ ವೈಎಸ್ವಿ ದತ್ತಾ, "ನನಗೀಗ 70 ವರ್ಷ ವಯಸ್ಸು. 2023 ನನ್ನ ಕೊನೆಯ ಚುನಾವಣೆಯಾಗಿದೆ. ಕಡೂರು ಕ್ಷೇತ್ರದ ಜನತೆಯ ನಿರ್ಧಾರಕ್ಕೆ ನನ್ನ ರಾಜಕೀಯ ನಿವೃತ್ತಿ ವಿಚಾರವನ್ನು ಬಿಟ್ಟಿದ್ದೇನೆ. ಕ್ಷೇತ್ರದಲ್ಲಿ ಜೆಡಿಎಸ್ ಭವಿಷ್ಯ ಮಂಕಾಗಿದೆ. ಕಾರ್ಯಕರ್ತರಿಗೆ ಬೇರೆ ಕಡೆ ವ್ಯವಸ್ಥೆ ಆಗಬೇಕು, ನನ್ನ ನಂಬಿ ಬಂದವರು ಅತಂತ್ರ ಆಗಬಾರದು. ಅವರಿಗೆ ನೆಲೆಕೊಡಿಸಲು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ" ಎಂದು ಹೇಳಿದ್ದರು.
ವೈಎಸ್ವಿ ದತ್ತಾ ಪೂರ್ಣ ಹೆಸರು ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ. 2006-2012ರ ತನಕ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿದ್ದರು. 2013ರ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಜೆಡಿಎಸ್ ಪ್ರಧಾನ ಕಾರ್ಯದರ್ಶಿ, ವಕ್ತಾರರಾಗಿ ಕಾರ್ಯ ನಿರ್ವಹಣೆ ಮಾಡಿದ್ದರು. ಕೆಲವು ದಿನಗಳ ಹಿಂದೆ ಅವರು ಕಾಂಗ್ರೆಸ್ ಸೇರಿದ್ದಾರೆ.












Click it and Unblock the Notifications